ಶಹಾಪುರ: ತಾಲ್ಲೂಕಿನಲ್ಲಿ ಭಾನುವಾರದ ಉತ್ತಮ ಮಳೆಯಿಂದ ಉಲ್ಲಾಸಗೊಂಡಿರುವ ರೈತರು ಸೋಮವಾರ ನಗರದ ಪ್ರಮುಖ ಖಾಸಗಿ ಬೀಜ ಮಾರಾಟ ಅಂಗಡಿಯ ಬಳಿ ವಿವಿಧ ಕಂಪನಿಯ ಹತ್ತಿ ಬೀಜಗಳನ್ನು ಖರೀದಿಸಲು ಮುಗಿಬಿದ್ದರು.
ಪ್ರಸಕ್ತ ಬಾರಿ ಮುಂಗಾರು ಸಕಾಲಕ್ಕೆ ಬಂದಿದೆ. ಈಗಾಗಲೇ ಹಿಂದೆ ಎರಡು ಉತ್ತಮ ಮಳೆಯಾಗಿದ್ದರಿಂದ ಜಮೀನು ಹದಗೊಳಿಸಿದ್ದರು. ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆಗೆ ಅನುಕೂಲವಾಗಿದೆ. ಹೀಗಾಗಿ ಹತ್ತಿಬೀಜ ಖರೀದಿಗೆ ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ಸಿಂದಗಿ, ಜೇವರ್ಗಿ, ದೇವದುರ್ಗ ಮುಂತಾದ ತಾಲ್ಲೂಕುಗಳಿಂದ ರೈತರು ಆಗಮಿಸಿದ್ದರು ಎಂದು ಬಿತ್ತನೆ ಬೀಜ ಮಾರಾಟ ಅಂಗಡಿ ಮಾಲೀಕರು ತಿಳಿಸಿದರು.