ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ, ಕೋವಿಡ್‌ ಮೂರನೇ ಅಲೆ ತಡೆಗೆ ಸಜ್ಜು: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾಹಿತಿ
Last Updated 13 ಜುಲೈ 2021, 5:34 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅವರೊಂದಿಗೆ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿತು.

ಕೋವಿಡ್‌ ಮೂರನೇ ಅಲೆಗೆ ಸಿದ್ಧತೆ, ಸಂಭವನೀಯ ಪ್ರವಾಹ ಎದುರಿಸಲು ಕೈಗೊಂಡ ಕ್ರಮಗಳು, ಕೋವಿಡ್‌ ಲಸಿಕೆಯ ಮಾಹಿತಿ ಸೇರಿದಂತೆ ಜಮೀನು ಸರ್ವೆ, ಗ್ರಾಮ ಪಂಚಾಯಿತಿ ಸ್ವಚ್ಛತೆ, ಪಿಎಂ ಕಿಸಾನ್‌ ಸಮ್ಮಾನ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಓದುಗರು ಪ್ರಶ್ನೆಗಳನ್ನು ಕೇಳಿದರು. ಓದುಗರ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಅವರು ಸಾವಧಾನವಾಗಿ ಉತ್ತರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

*ಮಲ್ಲಿಕಾರ್ಜುನ, ಹುಣಸಗಿ:ಹುಣಸಗಿ ಪಟ್ಟಣ ಪಂಚಾಯಿತಿಯಿಂದ ಫಾರಂ ನಂ–3 ಕೊಡುತ್ತಿಲ್ಲ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ.

–ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯನ್ನು ಕೊಟ್ಟರೆ ನಿಮ್ಮ ಸಮಸ್ಯೆ ಬಗ್ಗೆ ಗಮನ ಹರಿಸಲಾಗುವುದು.

*ಮುಸ್ತಾಫ್ ಪಟೇಲ್, ಯಾದಗಿರಿ:ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?

–ಮೂರನೇ ಅಲೆ ಮಕ್ಕಳಿಗೆ ಬರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ಹಾಕುವ ಯೋಜನೆ ಪ್ರಾರಂಭಿಸಿದ್ದೇವೆ. ಮಕ್ಕಳಿಗಾಗಿ ಜಿಲ್ಲೆಯ ಆಸ್ಪತ್ರೆಗಳಲ್ಲಿ 300 ಬೆಡ್‌ಗಳ ವ್ಯವಸ್ಥೆಗೆ ಸಿದ್ಧತೆ ಮಾಡುತ್ತಿದ್ದೇವೆ. ಅದರಲ್ಲಿ ಯಾದಗಿರಿ 100, ಶಹಾಪುರ 100, ಸುರಪುರದಲ್ಲಿ 100 ಹಾಸಿಗೆಗಳನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

*ಶಂಕರ ಸೋನಾರ, ಯಾದಗಿರಿ:ನಾನು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಯಾಗಿದ್ದು, ತಾಲ್ಲೂಕು ಶಿಕ್ಷಣ ಕ್ಷೇತ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದೇನೆ. ನಾನು ನಿವೃತ್ತಿಯಾಗಿ 5 ವರ್ಷಗಳಾಗಿವೆ. ಆದರೆ, ಇಲ್ಲಿಯವರೆಗೆ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ.

–ನಿಮಗೆ ಸೌಲಭ್ಯ ದೊರಕುವಂತೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು.

*ವಿಠ್ಠಲ್ ಚವಾಣ್, ಏವೂರ್ ದೊಡ್ಡ ತಾಂಡಾ:ಏವೂರ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆ ಇಲ್ಲದೆ, ಜನರಲ್ಲಿ ವಾಂತಿ ಭೇದಿ ಪ್ರಾರಂಭವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

–ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣಗೆ ನೋಟಿಸ್ ಜಾರಿ ಮಾಡಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.

*ಭೀಮಾಶಂಕರ ಕಟ್ಟಿಮನಿ, ಶಹಾಪುರ:ಹುರಸಗುಂಡಗಿ ಗ್ರಾಮದಲ್ಲಿ ತಾಲ್ಲೂಕು ತಹಶೀಲ್ದಾರರು ಒಂದು ವರ್ಷದಿಂದ ಪರಮಾನಂದ ಮತ್ತು ಹನುಮಾನ ದೇವಸ್ಥಾನಕ್ಕೆ ತಸ್ತಿಕ್‌ ಭತ್ಯೆ ಬಿಡುಗಡೆ ಮಾಡದೇ ವಿಳಂಬ ಮಾಡುತ್ತಿದ್ದಾರೆ.

–ತಹಶೀಲ್ದಾರರಿಂದ ಮಾಹಿತಿ ಪಡೆದು ಸಮಸ್ಯೆ ಪರಿಹರಿಸಲಾಗುವುದು.

*ಶ್ರೀಶೈಲ ಮುಡಬೂಳ:ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಜಿ ಹಾಕಿ 2 ವರ್ಷ ಕಳೆದರೂ ಪರಿಹಾರ ಬಂದಿಲ್ಲ.

– ಪರಿಹಾರ ಒದಗಿಸಲು ಕೃಷಿ ಅಧಿಕಾರಿಗಳಿಗೆ ತಿಳಿಸುತ್ತೇನೆ.

*ಪ್ರಭುಕುಮಾರ, ಯಾದಗಿರಿ:ನಮ್ಮ ತಂದೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪರಿಹಾರದ ಬಗ್ಗೆ ತಿಳಿಸಿ.

– ಸೂಕ್ತ ಮಾಹಿತಿಯನ್ನು ಕಲೆ ಹಾಕಿ, ಕೋವಿಡ್‌ನಿಂದ ಮೃತಪಟ್ಟಿದ್ದರೆ ಆ ವ್ಯಕ್ತಿಗೆ ಸರ್ಕಾರದಿಂದ ಪರಿಹಾರ ಹಣ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

*ಬಚ್ಚಪ್ಪ ನಾಯಕ, ಸುರಪುರ:2019ರಲ್ಲಿ ಪ್ರವಾಹ ಬಂದು ಮನೆಗಳು ಬಿದ್ದಿವೆ. ಜೊತೆಗೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದ ದೇವಿಕಮ್ಮ ಸರ್ವೆ ನಂಬರ್ 241ರ 3 ಎಕರೆ ಜಮೀನಿಗೆ ಪರಿಹಾರ ಹಣ ಬಂದಿಲ್ಲ‌.

–ಪರಿಹಾರ ಹಣ ಜಮೆ ಮಾಡಿಸುತ್ತೇವೆ.

*ಅಪ್ಪರಾವ ನಾಯಕ, ಸುರಪುರ:ಸುರಪುರದ 30, 31ನೇ ವಾರ್ಡ್‌ ವ್ಯಾಪ್ತಿಯಲ್ಲಿ ಲಸಿಕೆ ನೀಡುತ್ತಿಲ್ಲ.

–ನಮಗೆ ಸರ್ಕಾರದಿಂದ ನಿತ್ಯ 3 ರಿಂದ 5 ಸಾವಿರ ಲಸಿಕೆ ಬರುತ್ತಿದೆ. ಕೆಲವು ಕಡೆ ಕೊರತೆಯಾಗಿರಬಹುದು. ಜಿಲ್ಲೆಯ ಎಲ್ಲಾ ಕಡೆ ಲಸಿಕಾಕರಣ ಮಾಡುವ ಗುರಿ ಹೊಂದಿದ್ದೇವೆ. ಒಂದು ವಾರದೊಳಗೆ ನಿಮ್ಮ ವಾರ್ಡ್‌ನಲ್ಲಿ ಲಸಿಕಾಕರಣಕ್ಕೆ ವೈದ್ಯಾಧಿಕಾರಿಗಳಿಗೆ ಸೂಚಿಸುತ್ತೇನೆ.

*ನಿಂಗು ಪಾಟೀಲ, ಸುರಪುರ:ಸುರಪುರ ತಾಲ್ಲೂಕಿನ ದೇವಾಪುರ ರಸ್ತೆ ಕಾಮಗಾರಿಯು ಬಹಳ ದಿನದಿಂದ ಸ್ಥಗಿತವಾಗಿದೆ.

– ಅಲ್ಲಿನ ಭೂ ಮಾಲೀಕರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ತಡೆ ಆದೇಶ ಇರುವುದರಿಂದ ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

*ಸುರೇಶ, ಹುಣಸಗಿ:ಪ್ರಥಮ ದರ್ಜೆ ಕಾಲೇಜು ಹುಣಸಗಿ ಗ್ರಾಮದಿಂದ 5 ಕಿ.ಮೀ ದೂರದ ಗುಡ್ಡಗಾಡಿನಲ್ಲಿದೆ. ಅಲ್ಲಿ ಕುಡಿಯುವ ನೀರು ಇನ್ನಿತರ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಆ ಕಾಲೇಜನ್ನು ಸ್ಥಳಾಂತರಿಸಬೇಕು.

– ಹುಣಸಗಿ ತಹಶೀಲ್ದಾರರ ಜೊತೆ ಮಾತನಾಡಿ ಸರ್ಕಾರದ ಸೂಕ್ತ ಜಾಗ ದೊರಕಿದರೆ ಕಾಲೇಜು ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುವುದು.

*ಗುರಪ್ಪ ಗುಡ್ಲಮನಿ, ಎಣ್ಣೆ ವಡಗೇರಾ:ಜಮೀನು ಸರ್ವೆಗೆ ಅರ್ಜಿ ಹಾಕಿದ್ದು, ಸುಮಾರು ದಿನಗಳಿಂದ ಅಧಿಕಾರಿಗಳು ಸರ್ವೆ ಮಾಡಿಲ್ಲ.

–ಒಂದು ವಾರದೊಳಗೆ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.

*ವಿಕಾಸ್, ಕೆಂಭಾವಿ: ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ವರ್ಗಾವಣೆ, ಮಾರಾಟದಲ್ಲಿ ತೊಂದರೆಯಾಗುತ್ತಿದೆ.

–ಸರ್ಕಾರದ ಮಾರ್ಗಸೂಚಿ ಇರುವುದರಿಂದ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ.

*ನಿಂಗಣ್ಣಗೌಡ ಹುಣಸಗಿ: 2019ರಲ್ಲಿ ಪ್ರವಾಹದಿಂದ ಮನೆಗಳು ಬಿದ್ದಿವೆ. ಅರ್ಧ ಪರಿಹಾರ ಬಂದಿದ್ದು, ಉಳಿದಿರುವ ಅರ್ಧ ಪರಿಹಾರವು ಇಲ್ಲಿಯವರೆಗೂ ಬಂದಿಲ್ಲ.

–ಬಿದ್ದ ಮನೆಯ ಜಿಪಿಎಸ್‌ ಆಗಿದಿಯೋ ಇಲ್ಲವೋ ಎಂದು ಪರಿಶೀಲಿಸಿ. ಕೊನೆಯ ಜಿಪಿಎಸ್‌ ಫೋಟೋ ಆಗಿದ್ದರೆ ಅದರ ಪರಿಹಾರ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗುವುದು.

*ನಿಂಗಪ್ಪ, ಯಾದಗಿರಿ: ಗೃಹ ರಕ್ಷಕ ದಳದವರಿಗೆ ದಿನ ಭತ್ಯೆ ಹೆಚ್ಚಿಸಿ
–ಗೃಹ ರಕ್ಷಕ ದಳದವರಿಗೆ ಜಿಲ್ಲೆಯಲ್ಲಿ ದಿನಭತ್ಯೆ ₹350 ನೀಡಲಾಗುತ್ತಿದೆ.

*ಪರಮಣ್ಣ ಬಾಗ್ಲಿ, ಕಕ್ಕೇರಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಾಪುರದಲ್ಲಿ ವಿದ್ಯುತ್ ಲೈನ್ ಕಡಿತಗೊಂಡಿದ್ದು ಮಕ್ಕಳಿಗೆ ತೊಂದರೆ ಎದುರಾಗಿದೆ.

–ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಯುಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

*ನಿತಿನ್ ಕುಮಾರ್, ಶಹಾಪುರ:ಶಹಾಪುರ ನಗರಸಭೆ ವ್ಯಾಪ್ತಿಯ 10, 27, 28 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

– ತಕ್ಷಣ ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

*ಸುರೇಶಗೌಡ ಬಿರಾದರ್, ಗುಂಡಲಗೇರಾ:ನಮ್ಮೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿ 4-5 ವರ್ಷ ಕಳೆದರೂ ಇನ್ನೂ ಪ್ರಾರಂಭವಾಗಿಲ್ಲ.

–ಶುದ್ಧ ನೀರಿನ ಘಟಕ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ

*ಹಣಮಂತ, ಶಿವಪುರ:ನಮ್ಮೂರಿನಲ್ಲಿ ಪ್ರತಿಯೊಬ್ಬ ರೈತರಿಗೂ ಪಹಣಿ, ಆಕಾರ ಬಂಧಿ ಸಮಸ್ಯೆಯಾಗುತ್ತಿದೆ.

–ಈ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲಾಗುತ್ತದೆ.

*ಆಂಜನೇಯ, ಯಾದಗಿರಿ:ಯಾದಗಿರಿ ನಗರದ ಹೊಸಳ್ಳಿ ಹತ್ತಿರ ಹೌಸಿಂಗ್ ಬೋರ್ಡ್‌ನಲ್ಲಿ ಅಲೆಮಾರಿ ಜನಾಂಗದವರ ಸುಮಾರು 40 ಕುಟುಂಬದವರಿಗೆ ಕೊರೊನಾ ಲಸಿಕೆ ಹಾಕಿಲ್ಲ.

– ಅಲೆಮಾರಿ ಜನಾಂಗದ 40 ಕುಟುಂಬಗಳಿಗೆ ಲಸಿಕೆ ನೀಡಲು ಸ್ಥಳದಲ್ಲಿದ್ದ ಆರ್‌ಸಿಎಚ್‌ ಅಧಿಕಾರಿ ಡಾ.ಲಕ್ಷ್ಮಿಕಾಂತ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

*ರಾಘವೇಂದ್ರ ಭಕ್ರಿ, ಸುರಪುರ:ರೈತರಿಗೆ ರಸಗೊಬ್ಬರ– ಬೀಜದ ಕೊರತೆ ನೀಗಿಸಲು ಕೈಗೊಂಡ ಕ್ರಮಗಳೇನು?

–ಜಿಲ್ಲೆಯಲ್ಲಿ ಸುಮಾರು 575 ರಸಗೊಬ್ಬರ ಮಾರಾಟದ ಡೀಲರ್ಸ್‌ಗಳು ಇದ್ದಾರೆ. ರಸಗೊಬ್ಬರ, ಬೀಜದ ಕೊರತೆ ಇಲ್ಲ.
ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ
ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

***

ರೈಲ್ವೆ ಸ್ಟೇಷನ್‌ನಲ್ಲಿ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲು ಆದೇಶ ಮಾಡಲಾಗಿದೆ. ಇಡೀ ರಾಜ್ಯದ ರೈಲ್ವೆ ಸ್ಟೇಷನ್‌ಗಳ ಪೈಕಿ ಯಾದಗಿರಿ ರೈಲ್ವೆ ಸ್ಟೇಷನ್‌ನಲ್ಲಿ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಯಾದಗಿರಿ ಕೊರೊನಾ ಮುಕ್ತ ಜಿಲ್ಲೆಯಾಗಬೇಕು ಎಂಬುದೇ ಇದರ ಉದ್ದೇಶ

- ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

***

ಮಕ್ಕಳಿಗಾಗಿ 30 ಐಸಿಯು ಬೆಡ್

‘ಮಕ್ಕಳಿಗಾಗಿ 30 ಐಸಿಯು ಬೆಡ್ ಕಲ್ಪಿಸಲು ಸಿದ್ಧತೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸುಮಾರು 21 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂಥ ಮಕ್ಕಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ), ನೀತಿ ಆಯೋಗದ ವತಿಯಿಂದ ₹75 ಲಕ್ಷ ಅನುದಾನವನ್ನು ಮೀಸಲಿಟ್ಟಿದ್ದೇವೆ. ಹಣ್ಣು ತರಕಾರಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಸಿದ್ಧತೆ ನಡೆದಿದೆ. ಮಕ್ಕಳ ಸಮೀಕ್ಷೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ರಾಗಪ್ರಿಯಾ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ ಅಲೆಯಲ್ಲಿ 2 ಸಾವಿರ ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಯಾರಿಗೂ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿಲ್ಲ. ಎಲ್ಲಾ ಮಕ್ಕಳು ಗುಣಮುಖರಾಗಿದ್ದಾರೆ. ಮಕ್ಕಳಿಗೆ ಪೋಷಕರಿಂದ ಕೋವಿಡ್ ಬರುವ ಸಾಧ್ಯತೆ ಇರುವುದರಿಂದ ಮಾಸ್ಕ್ ಧರಿಸಿ ಜಾಗ್ರತೆ ವಹಿಸಬೇಕು’ ಎಂದರು.

‘ಸರ್ಕಾರಕ್ಕೆ ಕಾಲಕಾಲಕ್ಕೆ ಲಸಿಕೆ ನೀಡಲು ಬೇಡಿಕೆ ಇಟ್ಟಿದ್ದೇವೆ. ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮ ಪಂಚಾಯಿತಿಯಲ್ಲಿ ಶೇ 100 ರಷ್ಟು ಲಸಿಕಾಕರಣವಾಗಿದೆ. ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮ ಪಂಚಾಯಿತಿಯಲ್ಲೂ ಶೇ 100 ರಷ್ಟು ಲಸಿಕೆ ನೀಡಲಾಗಿದೆ’ ಎಂದರು. ‘ಪ್ರತಿದಿನ ನಗರ ಪ್ರದೇಶದಲ್ಲಿ ಮೂರು ವಾರ್ಡ್‌ಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಎಲ್ಲ ಗ್ರಾಮ, ವಾರ್ಡ್‌ಗಳಲ್ಲಿ ಲಸಿಕೆ ನೀಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

***
ಟೆಲಿಮೆಟ್ರಿಕ್‌ ಗೇಜ್‌ ಅಳವಡಿಕೆ

‘ಜಿಲ್ಲೆಯಲ್ಲಿ ಸಂಭನೀಯ ಪ್ರವಾಹ ಭೀತಿಯಲ್ಲಿ ಭೀಮಾ ನದಿ ದಂಡೆಯಲ್ಲಿ 16 ಗ್ರಾಮ, ಕೃಷ್ಣಾ ನದಿ ಪಾತ್ರದಲ್ಲಿ 17 ಗ್ರಾಮಗಳಿವೆ. ಎಲ್ಲ ಕಡೆಯೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 36 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗುತ್ತಿದೆ. 80 ಲೈಫ್‌ ಜಾಕೆಟ್‌, 4 ಬೋಟ್‌ ತರಿಸಿಕೊಳ್ಳಲಾಗಿದೆ. ಕೆಬಿಜೆಎನ್‌ಎಲ್‌ ಅಧಿಕಾರಿಗಳು ನೀರಿನ ಮಟ್ಟವನ್ನು ತಿಳಿದುಕೊಳ್ಳಲು ವಾಟ್ಸ್‌ ಆ್ಯಪ್‌ ಗ್ರೂಪ್‌ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ‘ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘13 ಗೋಶಾಲೆ ತೆರೆಯಲಾಗುವುದು, ಕಳೆದ ವರ್ಷ ಗೇಟ್‌ಗಳು ಎತ್ತದ ಪರಿಣಾಮ ಹೊಲಗಳಿಗೆ ನೀರು ನುಗ್ಗಿತ್ತು. ಈ ಬಾರಿ ಗೇಟ್‌ಗಳ ದುರಸ್ತಿ ಮಾಡಲಾಗುತ್ತಿದೆ. ಗುರುಸುಣಗಿ, ಸನ್ನತಿ ಬ್ರಿಜ್‌ ಕಂ ಬ್ಯಾರೇಜ್‌ನ ನೀರಿನ ಮಟ್ಟವನ್ನು ಪ್ರತಿ ದಿನ ಪರಿಶೀಲಿಸಲಾಗುತ್ತಿದೆ. ಈಗಾಗಲೇ ನಾರಾಯಣಪುರ ಜಲಾಶಯ, ಗುರುಸುಣಗಿ ಬ್ರಿಜ್‌ ಕಂ ಬ್ಯಾರೇಜ್‌ಗೆ ಭೇಟಿ ನೀಡಲಾಗಿದೆ’ ಎಂದರು.

‘ಸನ್ನತಿ, ಗುರುಸುಣಗಿ ಬ್ರಿಜ್‌ ಕಂ ಬ್ಯಾರೇಜ್‌ನಲ್ಲಿ ಟೆಲಿಮೆಟ್ರಿಕ್‌ ಗೇಜ್‌ ಅಳವಡಿಸಲಾಗುತ್ತಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ₹1.50 ಕೋಟಿ ವೆಚ್ಚ ವ್ಯಯಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ಇದು ಪ್ರಥಮವಾಗಿದೆ. ನೀರಿನ ಮಟ್ಟವನ್ನು ಸರಿಯಾಗಿ ಅಳತೆ ಮಾಡಲಿದೆ. ಕಳೆದ ಬಾರಿ ನೀರಿನ ಮಟ್ಟದ ಬಗ್ಗೆ ಸಮಸ್ಯೆ ಆಗಿತ್ತು. ಈ ಗೇಜ್‌ನಿಂದ ಒಳಹರಿವಿನ ನಿಖರ ಮಾಹಿತಿ ದೊರೆಯಲಿದೆ. ಇದು ಅಲಾರಂ ಮೂಲಕ ಎಚ್ಚರಿಕೆಯನ್ನೂ ನೀಡಲಿದೆ’ ಎಂದರು.

***

9 ಗ್ರಾಮಗಳ ಸ್ಥಳಾಂತರಕ್ಕೆ ಪ್ರಸ್ತಾವ

ಕೃಷ್ಣಾ ನದಿ ಪಾತ್ರದಲ್ಲಿನ 9 ಗ್ರಾಮಗಳನ್ನು ಸ್ಥಳಾಂತರ ಮಾಡಲು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಕಂದಾಯ ಸಚಿವರಿಗೂ ತಿಳಿಸಿದ್ದೇವೆ. ಇದು ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೃಷ್ಣಾ ನದಿ ಪಾತ್ರದಲ್ಲಿನ ಗೌಡೂರು, ಟೊಣ್ಣೂರು, ಯಕ್ಷಂತಿ ಗ್ರಾಮಗಳನ್ನು ಹಲವಾರು ವರ್ಷಗಳು ಕಳೆದರೂ ಸ್ಥಳಾಂತರ ಮಾಡಿಲ್ಲ ಎಂದು ಹತ್ತಿಗೂಡೂರಿನ ಶರಣು ರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

***

ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಪರಮೇಶ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT