ಹುಣಸಗಿ: ‘ಡೊಳ್ಳು ಕುಣಿತ ಜಾನಪದ ಕಲೆಗಳಲ್ಲಿಯೇ ವಿಶಿಷ್ಟವಾದದ್ದು’ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ ಅಭಿಪ್ರಾಯಪಟ್ಟರು.
ಹುಣಸಗಿ ಸಮೀಪದ ದೇವತಕಲ್ಲ ಗ್ರಾಮದ ಕುವೆಂಪು ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಡೊಳ್ಳು ಕುಣಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಕೃಷಿ ಚಟುವಟಿಕೆ ಜತೆಗೆ ಜಾನಪದ ಕ್ರೀಡೆ ಹಾಗೂ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದರು. ಅಲ್ಲದೆ, ಅವರು ನಿತ್ಯದ ಕೆಲಸದಲ್ಲಿ ಶ್ರಮವನ್ನು ಆರಿಸಿಕೊಳ್ಳಲು ಹಲವು ಕಲೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರು ಎಂದರು.
ಇಂದಿನ ಯುವ ಜನಾಂಗ ನಮ್ಮ ಮೂಲ ಜನಪದ ಕಲೆಗಳನ್ನು ಕಲಿಯುವ ಮೂಲಕ ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ,‘ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಯುವ ಜನಪದ ಕಲಾವಿದರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಈ ನಿಟ್ಟಿನಲ್ಲಿ ಯುವಕರಿಗೆ ತರಬೇತಿ ನೀಡುವುದರ ಮೂಲಕ ಯಾದಗಿರಿ ಜಿಲ್ಲೆಯಲ್ಲಿ 10 ಹೊಸ ತಂಡಗಳನ್ನು ರಚಿಸುವ ಉದ್ದೇಶವಿದೆ. ಆದ್ದರಿಂದ ದೇವತಲ್ಲ ಗ್ರಾಮದಲ್ಲಿ ಡೊಳ್ಳಿನ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಮುಂದಿನ ದಿನಗಳಲ್ಲಿ ಹಲಗೆ ತರಬೇತಿ, ಕಣಿ ಹಲಗೆ, ಸಂಬಾಳ, ಕಂಸಾಳೆ ಮತ್ತಿತರ ಜಾನಪದ ಗೀತ ಪ್ರಕಾರ ಹಾಗೂ ಸಂಪ್ರದಾಯ ಹಾಡುಗಳ ತರಬೇತಿ ನೀಡುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.