ಯಾದಗಿರಿ: ಹೆಚ್ಚಿದ ಟೊಮೆಟೊ ಬೆಲೆ; ಇಳಿಕೆಯಾದ ಈರುಳ್ಳಿ

ಯಾದಗಿರಿ: ಕಳೆದ ವಾರಕ್ಕಿಂತ ಈ ವಾರ ಟೊಮೆಟೊ ದರ ಕೇಜಿಗೆ ₹10 ಹೆಚ್ಚಳವಾಗಿದ್ದು, ಈರುಳ್ಳಿ ಬೆಲೆ ₹10 ಇಳಿಕೆಯಾಗಿದೆ. ಟೊಮೆಟೊ ಆವಕ ಮಾರುಕಟ್ಟೆಗೆ ಬಾರದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಗೆ ಟೊಮೆಟೊ ಕಾಯಿಗಳು ಹಾಳಾಗಿದ್ದವು. ಈಗ ಅದರ ಪರಿಣಾಮ ಕಾಣುತ್ತಿದೆ.
ದೊಣ್ಣೆಮೆಣಸಿನಕಾಯಿ ಕಳೆದ ವಾರ ₹80 ಬೆಲೆ ಇದ್ದರೆ ಈ ವಾರ ₹60 ಕೇಜಿಗೆ ಮಾರಾಟವಾಗುತ್ತಿದೆ.
ಚವಳೆಕಾಯಿ ಕಳೆದ ವಾರ ₹80 ಇತ್ತು. ಈ ವಾರ ₹60 ಇದೆ. ಕಳೆದ ವಾರ ಬೀನ್ಸ್ ಕೆಜಿಗೆ ₹120 ಇತ್ತು. ಈ ವಾರ ₹80ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದಂತೆ ಹೀರೆಕಾಯಿ, ತೊಂಡೆಕಾಯಿ, ಎಲೆಕೋಸು, ಗಜ್ಜರಿ, ಬದನೆಕಾಯಿ, ಸೋರೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೌತೆಕಾಯಿ ದರ ಕಳೆದ ವಾರದಿಂದ ಸ್ಥಿರವಾಗಿದೆ.
ಸೊಪ್ಪುಗಳ ದರ: ಕಳೆದ ವಾರದಂತೆ ಈ ವಾರವೂ ಸೊಪ್ಪುಗಳ ಬೆಲೆಯಲ್ಲಿ ಹೆಚ್ಚಿನ ದರ ಏರಿಕೆಯಾಗಿಲ್ಲ. ಪಾಲಕ್ ₹20ಕ್ಕೆ ಮೂರು ಕಟ್ಟು, ಸಬ್ಬಸಿಗೆ ₹10 ಒಂದು ಕಟ್ಟು, ಮೆಂತೆ ₹20ಕ್ಕೆ ಒಂದು ಕಟ್ಟು, ರಾಜಗಿರಿ ₹20ಕ್ಕೆ ಮೂರು 3 ಕಟ್ಟು, ಪುಂಡಿ ಪಲ್ಯೆ ₹20ಕ್ಕೆ 4 ಕಟ್ಟು, ಕೋತಂಬರಿ ₹30ಕ್ಕೆ ಒಂದು ಕಟ್ಟು, ಪುದೀನಾ ₹25ಕ್ಕೆ ಒಂದು ಕಟ್ಟು ದರವಿದೆ. ಎರಡು ವಾರಗಳಿಂದ ಮೊಹರಂ ಹಬ್ಬದ ಅಂಗವಾಗಿ ಕೋತಂಬರಿ, ಪುದೀನಾ ಬೆಲೆ ಗಣನೀಯವಾಗಿ ಹೆಚ್ಚಳವಾಗಿತ್ತು.
ಸೌತೆಕಾಯಿ ಸಿಗುತ್ತಿಲ್ಲ: ‘ಮುಖ್ಯ ಮಾರುಕಟ್ಟೆಯಲ್ಲಿಯೇ ಕಳೆದ ಮೂರು ದಿನದಿಂದ ಸೌತೆಕಾಯಿ ಸಿಗುತ್ತಿಲ್ಲ. ಈರುಳ್ಳಿ ಸೊಪ್ಪು ₹120 ಕೇಜಿ ಇದೆ. ಬೆಳ್ಳುಳ್ಳಿ ₹120, ಶುಂಠಿ ₹120 ಕೇಜಿ ಇದೆ. ₹160ಗೆ ಕೇಜಿ ನುಗ್ಗೆಕಾಯಿ ಇದೆ. ಮಳೆ ಹೆಚ್ಚಾದ ಕಾರಣ ಇವುಗಳ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿ ಸಿದ್ದು ಪೂಜಾರಿ.
‘ವಾರದಿಂದ ತರಕಾರಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ಮೆಣಸಿನಕಾಯಿ, ಆಲೂಗಡ್ಡೆ, ಪಾಲಕ್ ಮುಂತಾದ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎನ್ನುತ್ತಾರೆ ಗ್ರಾಹಕ ಶ್ರವಣಕುಮಾರ ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.