ಯಾದಗಿರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರೂ ಕೂಡ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಆದ್ಯತೆ ಮೇರೆಗೆ ಪಡಿತರ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಂಡಿವೆ. ಈ ನಿಟ್ಟಿನಲ್ಲಿ ಗುಣಮಟ್ಟದ ಆಹಾರಧಾನ್ಯ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಬೇಕು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಸಚಿವ ಕೆ.ಗೋಪಾಲಯ್ಯ ಸೂಚಿಸಿದರು.
ತಾಲ್ಲೂಕಿನ ಕೂಲೂರಿನಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಸಚಿವರು, ಗೋದಾಮಿನಲ್ಲಿ ಸಂಗ್ರಹಿಸಿದ್ದ ಕಡಲೆ, ಅಕ್ಕಿ, ತೊಗರಿ ಬೇಳೆ ಹಾಗೂ ಗೋಧಿಯನ್ನು ಪರಿಶೀಲಿಸಿದರು.
ಬಡ ಫಲಾನುಭವಿಗಳಿಗೆ ವಿತರಣೆ ಮಾಡುವಂಥ ಕಡಲೆಕಾಳನ್ನು ಸ್ವಚ್ಛಗೊಳಿಸದೇ ನಫೇಡ್ನಿಂದ ಸರಬರಾಜು ಮಾಡಲಾಗಿದೆ. ಇದರಲ್ಲಿರುವ ಕಸಕಡ್ಡಿ ಮತ್ತು ಹಾಳಾದ ಕಡಲೆಕಾಳನ್ನು ಪ್ರತ್ಯೇಕಗೊಳಿಸಿ, ಗುಣಮಟ್ಟದ ಕಡಲೆಕಾಳನ್ನು ಸರಬರಾಜು ಮಾಡುವಂತೆ ಸೂಚಿಸಿದರು.
ಅಲ್ಲಿದ್ದ ಗೋದಾಮು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಇವೆಲ್ಲವುಗಳನ್ನು ಸ್ವಚ್ಛಗೊಳಿಸಿದ ನಂತರ ವಿತರಣೆಗೆ ಕ್ರಮಗೊಳ್ಳಬೇಕು ಎಂದು ಸೂಚಿಸಿದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಆಹಾರ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ ಇದ್ದರು.