ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ವಿವಿಧೆಡೆ ಭತ್ತಕ್ಕೆ ಹಾನಿಯಾಗಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.
ಅಕಾಲಿಕ ಮಳೆಗೆ ಕೊಯ್ಲಿಗೆ ಬಂದ ಭತ್ತ ಸಂಪೂರ್ಣ ನೆಲಕಚ್ಚಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಹುಣಸಗಿ ತಾಲ್ಲೂಕಿನ ಯಡಿಯಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದು ನಿಂತ ಭತ್ತ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣ ನೆಲಕಚ್ಚಿದ್ದು, ಅಪಾರ ಹಾನಿಯಾಗಿದೆ. ಕಟಾವಿಗೆ ಬಂದ ಬೆಳೆ ನೆಲಕ್ಕೆ ಬಿದ್ದ ಕಾರಣ ಭತ್ತದ ಕಾಳುಗಳು ಭೂಮಿ ಪಾಲಾಗಿದೆ ಎಂದು ರೈತ ಮಹಾದೇವ ಯಡಿಯಾಪುರ ಹೇಳುತ್ತಾರೆ.
ಭತ್ತದ ಬೆಳೆ ಹಾಳಾಗಿದ್ದು, ಸರ್ಕಾರ ಶೀಘ್ರವೇ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ವಡಗೇರಾ ತಾಲ್ಲೂಕಿನ ಬಬಲಾದ, ಗುರುಸಣಿಗಿ, ನಾಯ್ಕಲ್ ಭಾಗದಲ್ಲಿ ಭತ್ತ ನೆಲಕ್ಕೆ ಬಿದ್ದಿದೆ.
ಶಹಾಪುರ, ಸುರಪುರ ಸೇರಿದಂತೆ ವಿವಿಧೆಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಭತ್ತ ಹಾನಿಯಾಗಿದೆ.
ಮಳೆಯಿಂದ ನಗರದ ರೈಲ್ವೆ ಸ್ಟೇಷನ್ ರಸ್ತೆಯ ತಗ್ಗು ಗುಂಡಿಗಳು ಆಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ನಗರದ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಜನರ ಸಂಚಾರಕ್ಕೆ ಸಮಸ್ಯೆ ಆಗಿದೆ. ನಜರಾತ್ ಕಾಲೊನಿಯ ಉದ್ಯಾನದಲ್ಲಿ ನೀರು ನಿಂತು ಮಕ್ಕಳ ಆಟಿಕೆಗಳು ಮುಳುಗಿವೆ.