ಕೆಂಭಾವಿ: ಮುಂಬೈನ ದಾದರ್ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಾಸವಾಗಿದ್ದ ಮನೆ ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಕೆಂಭಾವಿ ಹೋಬಳಿ ಘಟಕದಿಂದ ಉಪತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಹೋಬಳಿ ಘಟಕದ ಅಧ್ಯಕ್ಷ ಶರಣಪ್ಪ ಗಾಯಕವಾಡ ಮಾತನಾಡಿ, ಸರ್ಕಾರ ಈ ದುಷ್ಕೃತ್ಯವೆಸಗಿದವರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಬೇಕು. ನಿರಂತರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳಿಗೆ ಚಿಂತನೆಗಳಿಗೆ ಧಕ್ಕೆತರುವ ನಿಟ್ಟಿನಲ್ಲಿ ದೇಶದ ಕೆಲವು ಮನುವಾದಿಗಳು ಇಂತಹ ಹೀನ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರವು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಗೃಹ ಇಲಾಖೆ ಇಂತಹ ಹೇಡಿ ಕೃತ್ಯಕ್ಕೆ ಕೈ ಹಾಕಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ವಾಸವಾಗಿದ್ದ ರಾಜಮನೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪತಹಶೀಲ್ದಾರರಿಗೆ ಸಲ್ಲಿಸಿದರು. ಲಕ್ಷ್ಮಣ ರಾಂಪೂರ, ಸಂಗಪ್ಪ ಚಿಂಚೋಳಿ, ಹವಳಪ್ಪ ಮುದನೂರ, ನಿಂಗಪ್ಪ ಯಕ್ತಾಪುರ, ಗೋಪಾಲ ಕರಡಕಲ್, ಭಾಗಪ್ಪ ಯತ್ನಾಳ, ಪ್ರವೀಣ ಮಾಳಹಳ್ಳಿ, ಸಂತೋಷ, ಅಮರೇಶ ಭಾಗವಹಿಸಿದ್ದರು.