ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | 25ಕ್ಕೂ ಹೆಚ್ಚು ನಿವೇಶನ ಅಕ್ರಮ ನೋಂದಣಿ

Published 15 ಜನವರಿ 2024, 5:42 IST
Last Updated 15 ಜನವರಿ 2024, 5:42 IST
ಅಕ್ಷರ ಗಾತ್ರ

ಶಹಾಪುರ: ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಇಲ್ಲಿನ ಐಡಿಎಸ್‌ಎಂಟಿ ಯೋಜನೆಯ 25ಕ್ಕೂ ಹೆಚ್ಚು ನಿವೇಶನಗಳನ್ನು  ಅಧಿಕಾರ ದುರ್ಬಳಕೆ ಮಾಡಿಕೊಂಡು ಇಲ್ಲಿನ ನಗರಭೆಯ ಸಿಬ್ಬಂದಿ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮ ನೋಂದಣಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಐಡಿಎಸ್ಎಂಟಿ ಯೋಜನೆಯ ಅನುಷ್ಠಾನದ ಅಧ್ಯಕ್ಷರು ಜಿಲ್ಲಾಧಿಕಾರಿ, ಕಾರ್ಶದರ್ಶಿ ನಗರಸಭೆ ಪೌರಾಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ, ಕೆಇಬಿ, ಜಲ ಮಂಡಳಿ,ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ನಗರಸಭೆ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರು ಇರುತ್ತಾರೆ.ನಿವೇಶನಗಳ ಹಂಚಿಕೆಯು ಸಮಿತಿ ತೆಗೆದುಕೊಂಡ ನಿರ್ಧಾರದ ಮೇಲೆ ಮಾರಾಟ ಮಾಡಲು ಅಥವಾ ಹರಾಜು ಮಾಡಲು ಅವಕಾಶವಿದೆ. ಅಲ್ಲದೇ ಅಂದಿನ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು 2022 ಡಿಸೆಂಬರ್ 26ರಂದು ಉಪನೋಂದಣಾಧಿಕಾರಿ ಕಚೇರಿಗೆ ಪತ್ರ ಬರೆದು ಐಡಿಎಸ್ಎಂಟಿ ನಿವೇಶನಗಳನ್ನು ಮುಂದಿನ ಆದೇಶದ ವರೆಗೆ ನೋಂದಣಿ ಮಾಡಬಾರದು ಎಂದು ಲಿಖಿತವಾಗಿ ಸೂಚಿಸಿದ್ದರು. ಆದರೆ ನಗರಸಭೆಯ ಅಂದಿನ ಪೌರಾಯುಕ್ತರು ಓಂಕಾರ ಪೂಜಾರಿ ಅವರು ನಿಯಮ ಹಾಗೂ ಕಾನೂನು ವ್ಯಾಪ್ತಿ ಮೀರಿ ಸುಮಾರು ₹ 3 ಕೋಟಿಗೂ ಅಧಿಕ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ಐಡಿಎಸ್ಎಂಟಿ ಯೋಜನೆಯು ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿಯೇ ಏಕೈಕ ಯೋಜನೆ ಅನುಷ್ಠಾನಗೊಂಡಿರುವುದು ಶಹಾಪುರ ನಗರಸಭೆಗೆ ಮಾತ್ರ. ಅಂದಿನ ಸಣ್ಣ ಕೈಗಾರಿಕೆ ಸಚಿವರಾಗಿದ್ದ ದಿ.ಬಾಪುಗೌಡ ದರ್ಶನಾಪುರ ಅವರು 1988ರಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ ನಿವೇಶನಗಳನ್ನು ಒದಗಿಸುವ ಉದ್ದೇಶದಿಂದ 93 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು 810 ಹೌಸಿಂಗ್ ಬೋರ್ಡ್ ನೀಡಲಾಯಿತು. ಇನ್ನುಳಿದ 1060 ನಿವೇಶನಗಳನ್ನು ಐಡಿಎಸ್ಎಂಟಿ ಯೋಜನೆ ಅಡಿಯಲ್ಲಿ ಬಹಿರಂಗ ಹರಾಜಿನ ಮೂಲಕ ನಿವೇಶನ ಮಾರಾಟ ಮಾಡುವಾಗ ಅದರಲ್ಲಿ 243 ನಿವೇಶನಗಳು ಖಾಲಿ ಉಳಿದುಕೊಂಡವು ಎನ್ನುತ್ತಾರೆ ನಗರಸಭೆಯ ಅಧಿಕಾರಿ ಒಬ್ಬರು.

ಇಂದಿನ ಸಣ್ಣ ಕೈಗಾರಿಕೆ ಮತ್ತು ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಖಾಲಿ ಉಳಿದ ನಿವೇಶನಗಳನ್ನು ಹರಾಜು ಮಾಡಿ ಬಂದ ಅದಾಯದಿಂದ ನಗರಸಭೆಯ ಕಟ್ಟಡ ಇಲ್ಲವೆ ಅಭಿವೃದ್ಧಿಗಾಗಿ ಅನುದಾನ ವಿನಿಯೋಗಿಸಿಕೊಳ್ಳುವ ಉದ್ದೇಶದಿಂದ 32 ನಿವೇಶನಗಳನ್ನು ಹರಾಜು ಪ್ರಕ್ರಿಯಿಗೆ ಚಾಲನೆಗೆ ಸೂಚಿಸಿದ್ದರು. ಅದರಂತೆ ನಗರಸಭೆ ಪೌರಾಯುಕ್ತರು ಜಿಲ್ಲಾಧಿಕಾರಿಯ ಅನುಮತಿಯನ್ನು ಪಡೆದುಕೊಂಡು ಹರಾಜ ಟೆಂಡರ್ ಕರೆದು ಅರ್ಜಿ ವಿತರಣೆಯ ಕಾರ್ಯ ಚಾಲನೆ ನೀಡಿದಾಗ ಅಕ್ರಮದ ವಾಸನೆ ಹೊರ ಬಂದಿದೆ. ಇನ್ನೂ ಸಾಕಷ್ಟು ನಿವೇಶನಗಳು ಅಕ್ರಮವಾಗಿ ನೋಂದಣಿಯಾಗಿರುವ ಶಂಕೆ ಇದೆ. ಜಿಲ್ಲಾಧಿಕಾರಿ ಪ್ರತ್ಯೇಕವಾದ ತಂಡವನ್ನು ರಚಿಸಿ ತನಿಖೆ ನಡೆಯಿಸಿ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು ಹಾಗೂ ಮೋಸದಿಂದ ನಿವೇಶನಗಳನ್ನು ನೋಂದಣಿ ಮಾಡಿಸಿಕೊಂಡ ವ್ಯಕ್ತಿಗಳ ವಿರುದ್ಧ ಕ್ರೀಮಿನಲ್ ಕೇಸ್ ದಾಖಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಚಂದ್ರಶೇಖರ ಗುತ್ತೆದಾರ ಮನವಿ ಮಾಡಿದ್ದಾರೆ.

ಇದರ ಬಗ್ಗೆ ಸ್ಪಷ್ಟನೆ ಪಡೆಯಲು ಜಿಲ್ಲಾಧಿಕಾರಿಗೆ ಸಂಪರ್ಕಿಸಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಮೋಸದಿಂದ ಐಡಿಎಸ್ಎಂಟಿ ಯೋಜನೆ ಅಡಿ ನಿವೇಶನಗಳನ್ನು ನೋಂದಣಿ ಮಾಡಿಸಿಕೊಂಡ ವ್ಯಕ್ತಿಗಳು ಹಾಗೂ ನಗರಸಭೆಯ ಪೌರಾಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಬೇಕು.
ಚಂದ್ರಶೇಖರ ಗುತ್ತೆದಾರ, ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT