ಯಾದಗಿರಿ: ಆನೆಕಾಲು ರೋಗದಿಂದ ಮುಕ್ತಿ ಪಡೆಯಲು ಇದೇ ಡಿ.15ರಿಂದ 24ರ ವರೆಗೆ ಜಿಲ್ಲೆಯಾದ್ಯಂತ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ರೋಗ ಹರಡದಂತೆ ತ್ರಿವಳಿ ಮಾತ್ರೆಗಳನ್ನು ನುಂಗಿಸುವರು. ಈ ಸಮಯದಲ್ಲಿ ಜಿಲ್ಲೆಯ ಜನರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಆನೆಕಾಲು ರೋಗ ನಿರ್ಮೂಲನೆಗಾಗಿ 2ನೇ ಸುತ್ತಿನ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತ್ರೆಗಳ ಸೇವನೆಯಿಂದ ವಂಚಿತರಾದವರಿಗೆ ಮಾಪ್-ಆಪ್ ಕಾರ್ಯಕ್ರಮದ ಮೂಲಕ ಗುಳಿಗೆಗಳನ್ನು ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಫಲಾನುಭವಿಗಳು ತ್ರಿವಳಿ ಗುಳಿಗೆಗಳನ್ನು ಸೇವಿಸಿ ಆನೆಕಾಲು ರೋಗದಿಂದ ಮುಕ್ತಿ ಪಡೆಯಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಲಿಂಫೆಟಿಕ್ ಫೈಲೇರಿಯಾ ರೋಗಿಗಳ ಸಂಖ್ಯೆ 2,123 ಇದ್ದು, 2,46,769 ಮನೆಗಳಿವೆ. 13,0,2331 ಜನರಿಗೆ ಮಾತ್ರೆ ನುಂಗಿಸಬೇಕಿರುತ್ತದೆ. 2,258 ಸಿಬ್ಬಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಮೇಲ್ವಿಚಾರಣೆಗಾಗಿ 226 ಜನರನ್ನು ನಿಯೋಜಿಸಲಾಗಿದೆ ಎಂದರು.
ರಾಷ್ಟ್ರೀಯ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿ, ರಾಷ್ಟ್ರದ ಏಳಿಗೆಗೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಆನೆಕಾಲು ರೋಗವನ್ನು 2021 ರೊಳಗೆ ಸಂಪೂರ್ಣವಾಗಿ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಯಶಸ್ವಿಗೆ ತೆಗೆದುಕೊಂಡಿರುವ ಕ್ರಮ ಉತ್ತಮವಾಗಿದ್ದು, ಔಷಧಿ ಸೇವನೆಯಿಂದ ಸಮಾಜದಲ್ಲಿ ಸೋಂಕು ಹರಡದಂತೆ ತಡೆಗಟ್ಟಿ ಮುಂದಿನ ಪೀಳಿಗೆಯನ್ನು ರೋಗ ಮುಕ್ತ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಎನ್ವಿಬಿಡಿಸಿಪಿ ಹೆಚ್ಚುವರಿ ನಿರ್ದೇಶಕ ಡಾ.ನೂಪುರ್ ರಾಯ್, ಎನ್ವಿಬಿಡಿಸಿಪಿ ಸಹ ನಿರ್ದೇಶಕ ಡಾ.ರಮೇಶ ಕೆ.ಕೌಲಗುಡ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಲಕ್ಷ್ಮಿಕಾಂತ್ ಇದ್ದರು.
***
2 ವರ್ಷ ಮೇಲ್ಪಟ್ಟು ವಿವಿಧ ವಯೋಮಾನದವರು ವರ್ಷದಲ್ಲಿ ಒಂದು ಬಾರಿ ಐವರ್ಮೆಕ್ಟಿನ್, ಡಿಇಸಿ ಮಾತ್ರೆಗಳನ್ನು ಸೇವಿಸುವುದರಿಂದ ಆನೆಕಾಲು ರೋಗ ತಡೆಗಟ್ಟಬಹುದು ಡಾ. ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ