ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ವಸತಿ ರಹಿತರಿಗೆ ‘ಸೌಲಭ್ಯಗಳೇ’ ಮರೀಚಿಕೆ

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರ ವಸತಿ ರಹಿತರಿಗೆ ಆಶ್ರಯ ಕೇಂದ್ರ
Published : 26 ಆಗಸ್ಟ್ 2024, 5:14 IST
Last Updated : 26 ಆಗಸ್ಟ್ 2024, 5:14 IST
ಫಾಲೋ ಮಾಡಿ
Comments
ಸುರಪುರದ ನಿರಾಶ್ರಿತರ ಕೇಂದ್ರದಲ್ಲಿ ಇರುವ ಹಾಸಿಗೆ ವ್ಯವಸ್ಥೆ. ಪಕ್ಕದಲ್ಲಿ ಬಟ್ಟೆಯಿಂದ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು
ಸುರಪುರದ ನಿರಾಶ್ರಿತರ ಕೇಂದ್ರದಲ್ಲಿ ಇರುವ ಹಾಸಿಗೆ ವ್ಯವಸ್ಥೆ. ಪಕ್ಕದಲ್ಲಿ ಬಟ್ಟೆಯಿಂದ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು
ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ನಾನು ಶೀಘ್ರ ಭೇಟಿ ನೀಡಿ ಪರಿಶೀಲಿಸುತ್ತೇನೆ. ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ
ಶರಣಬಸಪ್ಪ ಕೋಟೆ‍ಪ್ಪಗೋಳ ಹೆಚ್ಚುವರಿ ಜಿಲ್ಲಾಧಿಕಾರಿ
ಆಶ್ರಯ ಕೇಂದ್ರದ ಸೌಕರ್ಯದ ಬಗ್ಗೆ ಈಗಾಗಲೇ ಹಲವರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಕಟ್ಟಡದ ಸರಹದ್ದು ಗುರುತಿಸಲು ಸಂಬಂಧಿಸಿದವರ ಗಮನಕ್ಕೂ ತರಲಾಗಿದೆ
ಭೀಮಣ್ಣ ವೈದ್ಯ ಸಮುದಾಯ ಸಂಘಟನಾ ಅಧಿಕಾರಿ ಯಾದಗಿರಿ ನಗರಸಭೆ
ನಿರಾಶ್ರಿತರ ಸರ್ವೆ ಕಾರ್ಯ ಮಾಡುವಾಗ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಹೀಗಾಗಿ ಅಗತ್ಯವಿದ್ದಲ್ಲಿ ಪೊಲೀಸರ ನೆರವು ಪಡೆಯುತ್ತೇನೆ
ಚಿದಾನಂದ ಯಾಳವಾರ ಕೇಂದ್ರದ ವ್ಯವಸ್ಥಾಪಕ ಸುರಪುರ
ಆಶ್ರಯ ಕೇಂದ್ರ ಹುಡುಕಿಕೊಡಿ’
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 2019–20ರಲ್ಲಿ ನಗರ ವಸತಿ ರಹಿತರಿಗೆ ಆಶ್ರಯ ಕೇಂದ್ರ ಆರಂಭಿಸಲಾಗಿದೆ. ಮೊದಲಿಗೆ ಗಂಜ್‌ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಕೇಂದ್ರ ನಡೆಸಲಾಗಿತ್ತು. ಆದರೆ ಅದು ಜನರಿಗೆ ತಿಳಿದಿರಲಿಲ್ಲ. ಈಗ ರೈ‌ಲ್ವೆ ನಿಲ್ದಾಣ ಎದುರು ಶಹಾಪುರಕ್ಕೆ ತೆರಳುವ ನಿರ್ಜನ ಪ್ರದೇಶದಲ್ಲಿ ₹42 ಲಕ್ಷ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಈ ಬಗ್ಗೆ ಒಂದೇ ಒಂದು ಫಲಕ ಇಲ್ಲ. ಅಲ್ಲಿಗೆ ತೆರಳಲು ದಾರಿಯೇ ಇಲ್ಲ.‌‌ ಕಟ್ಟಿಗೆ ಕಂಬದ ಆಸರೆಯಿಂದ ಮುಖ್ಯ ರಸ್ತೆಯಿಂದ ವಿದ್ಯುತ್‌ ಪಡೆದಿದ್ದು ಜೋರು ಗಾಳಿ ಮಳೆ ಬಂದರೆ ವಿದ್ಯುತ್‌ ಕಡಿತವಾಗುತ್ತದೆ. ಅಲ್ಲದೇ ತಡೆಗೋಡೆ ಇಲ್ಲ. ಗುಣಮಟ್ಟದ ಕಟ್ಟಡವಿದೆ. ಆದರೆ ಸೌಲಭ್ಯಗಳ ಕೊರತೆಯಿದೆ. ಶೌಚಾಲಯ ಗುಂಡಿ ತುಂಬಿದ್ದರಿಂದ ಬಾಗಿಲು ಬಂದ್‌ ಮಾಡಿದ್ದು ಇಲ್ಲಿರುವವರು ಶೌಚಕ್ಕಾಗಿ ಬಯಲಿಗೆ ಹೋಗಬೇಕಾದ ಅನಿವಾರ್ಯವಿದೆ. ಸಿಸಿಟಿವಿ ಕ್ಯಾಮೆರಾ ಇಲ್ಲ. ಪುರುಷ ಮತ್ತು ಮಹಿಳಾ ಕೇರ್‌ ಟೇಕರ್‌ಗಳಿದ್ದು ನಿರಾಶ್ರಿತರನ್ನು ಕರೆತರಲು ಸರಿಯಾದ ಮಾರ್ಗ ಇಲ್ಲದೆ ಪರದಾಡುತ್ತಿದ್ದಾರೆ. ಈಗ ಮಳೆಗಾಲ ಆಗಿದ್ದರಿಂದ ರಸ್ತೆ ಕೆಸರುಮಯ ಆಗಿದ್ದು ಹೇಗೊ ಎದ್ದು ಬಿದ್ದು ಕೇಂದ್ರ ತಲುಪುತ್ತಿದ್ದಾರೆ. ನಗರದ ರೈಲ್ವೆ ನಿಲ್ದಾಣ ಬಸ್ ನಿಲ್ದಾಣ ಮಾರುಕಟ್ಟೆ ಪ್ರದೇಶ ದೇವಸ್ಥಾನ ಇನ್ನಿತರ ಕಡೆ ವಾಸಕ್ಕೆ ಯೋಗ್ಯವಲ್ಲದ ಸ್ಥಳಗಳಲ್ಲಿ ವಾಸಿಸುತ್ತಿರುವವರನ್ನು ರಾಪಿಡ್ ಸಮೀಕ್ಷೆ ಮೂಲಕ ಗುರುತಿಸಿ ಅವರನ್ನು ಆಶ್ರಯ ಕೇಂದ್ರಕ್ಕೆ ಕರೆತರಬೇಕಾಗಿದೆ. ಆದರೆ ಅವರನ್ನು ಕರೆತರಲು ಸರಿಯಾದ ದಾರಿಯೇ ಇಲ್ಲದ ಕಾರಣ ಹಲವರು ಬರಲು ಹಿಂದೇಟು ಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ. 2019-20ರಲ್ಲಿ ಕೇಂದ್ರ ಆರಂಭವಾಗಿದ್ದರೂ 2021ರಿಂದ ಮಾತ್ರ ರಿಜಿಸ್ಟರ್ ನಿರ್ವಹಣೆ ಮಾಡಲಾಗುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾಸದ ವ್ಯವಸ್ಥೆಯನ್ನು ಮಾಡಬೇಕೆಂದು ಆದೇಶವಿದ್ದರೂ ಎಲ್ಲಿಯೂ ಕೂಡ ಈ ನಿಯಮ ಪಾಲನೆ ಮಾಡಲಾಗುತ್ತಿಲ್ಲ. ಅಲ್ಲದೆ ಪುರುಷ ನಿರ್ಗತಿಕರು ಮಾತ್ರ ಈ ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದು ಮಹಿಳೆಯರು ವಾಸ ಮಾಡುತ್ತಿಲ್ಲ. ಎರಡ್ಮೂರು ದಿನ ಕೇಂದ್ರದಲ್ಲಿಟ್ಟುಕೊಂಡು ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ.
ಆಶ್ರಯ ತಾಣಕ್ಕೆ ಬೇಕಿದೆ ‘ಆಸರೆ’
ಶಹಾಪುರ: ನಿರ್ಗತಿಕ ಜನರು ಹಸಿವಿನಿಂದ ಬಳಲಬಾರದು. ಅಂತಹವರಿಗೆ ಆಶ್ರಯ ಒದಗಿಸಲು ಸರ್ಕಾರ ಪ್ರತಿ ವರ್ಷ ಟೆಂಡರ್ ಕರೆಯುತ್ತದೆ. ವಿಚಿತ್ರವೆಂದರೆ ನಗರದಲ್ಲಿ ವಸತಿ ರಹಿತರಿಗೆ ಆಶ್ರಯ ತಾಣವಿದೆ ಎಂಬುದೇ ಗೊತ್ತಿಲ್ಲ. ಆಶ್ರಯ ತಾಣಕ್ಕೆ ಆಸರೆ ಬೇಕಿದೆ. ಆಶ್ರಯ ತಾಣವು ಉಳ್ಳವರ ಸಂಸ್ಥೆಯ ಪಾಲಾಗಿದೆ. ಸರ್ಕಾರದ ಉದ್ದೇಶ ಈಡೇರಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ‘ಪ್ರತಿ ವರ್ಷ ಟೆಂಡರ್ ಮೂಲಕ ಕೇಂದ್ರ ಮುನ್ನಡೆಸುವ ಸಂಸ್ಥೆಯ ಮುಖ್ಯಸ್ಥರಿಗೆ ₹ 9.50 ಲಕ್ಷ ಹಣ ಸಂದಾಯವಾಗುತ್ತದೆ. ಆದರೆ ಯಾವುದೇ ಸೌಲಭ್ಯವಿಲ್ಲ. ನಗರಸಭೆಯ ಡೇ–ನಲ್ಮ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸಮಗ್ರ ತನಿಖೆ ನಡಸಬೇಕು’ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ. ‘ನಗರದ ಗಂಜ್ ಪ್ರದೇಶದಲ್ಲಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿಯೇ ವಸತಿ ರಹಿತರಿಗೆ ಆಶ್ರಯ ತಾಣವನ್ನು ಮಾಡಲಾಗಿದೆ. ರಾತ್ರಿ ವಸತಿ ಮಾಡಿ ಮತ್ತೆ ಬೆಳಿಗ್ಗೆ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಊಟದ ವ್ಯವಸ್ಥೆಗೆ ಆಹಾರ ಸಾಮಗ್ರಿಗಳನ್ನು ಹಾಗೂ ಅಗತ್ಯ ಸಾಮಾನುಗಳನ್ನು ನೀಡಿದೆ. ಸಂಸ್ಥೆಯವರು ನೀಡುವ ಹಾಜರಾತಿ ವರದಿಯಂತೆ ಹಣ ಸಂದಾಯ ಮಾಡುತ್ತೇವೆ. ಆಶ್ರಯ ತಾಣಕ್ಕೆ ತೆರಳಲು ನಾಮಫಲಕ ಅಳವಡಿಸಲು ಸಂಸ್ಥೆಗೆ ಸೂಚಿಸಿತ್ತು. ಇಂದಿಗೂ ಹಾಕಿಲ್ಲ’ ಎಂದು ನಗರಸಭೆಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.
‘ಕೇಂದ್ರದಲ್ಲಿ ಮಹಿಳಾ ಕೇರ್ ಟೇಕರ್ ಇಲ್ಲ’
ಸುರಪುರ: ಬಸ್‌ನಿಲ್ದಾಣದಿಂದ 200 ಮೀಟರ್‌ ಅಂತರದಲ್ಲಿ ಕೆಂಭಾವಿ ರಸ್ತೆಯಲ್ಲಿರುವ ವಸತಿ ರಹಿತ ನಿರಾಶ್ರಿತರ ಕೇಂದ್ರ ಒಂದು ದೊಡ್ಡ ಗೋದಾಮಿನಲ್ಲಿ ತೆರೆಯಲಾಗಿದೆ. ಪ್ರತಿ ನಿತ್ಯ 2ರಿಂದ 9 ಜನರು ಆಶ್ರಯ ಪಡೆಯುತ್ತಿದ್ದಾರೆ. 23 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಫ್ಯಾನ್‌ಗಳು ಇವೆ. ಚಹಾ ಊಟದ ವ್ಯವಸ್ಥೆ ಇದೆ. ಆದರೆ ಒಂದೇ ಬಾತ್‌ರೂಮ್ ಇದೆ. ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ಇಲ್ಲ. ಬಟ್ಟೆಯ ಮೂಲಕ ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಮಹಿಳಾ ಕೇರ್ ಟೇಕರ್ ಇಲ್ಲದಿರುವುದರಿಂದ ವಸತಿ ರಹಿತ ಮಹಿಳೆಯರು ಇಲ್ಲಿ ಆಶ್ರಯ ಪಡೆಯಲು ಹಿಂಜರಿಯುವಂತಾಗಿದೆ. ಕೇಂದ್ರ ಆರಂಭವಾಗಿ ಎರಡು ವರ್ಷಗಳಾಗಿವೆ. ಸರ್ಕಾರೇತರ ಸಂಸ್ಥೆಗಳಿಗೆ ಟೆಂಡರ್ ಮೂಲಕ ಕೇಂದ್ರ ನಡೆಸಲು ಅವಕಾಶ ನೀಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅಗತ್ಯ ಔಷಧ ಮಾತ್ರೆ ದಾಸ್ತಾನು ಮಾಡಲಾಗಿದೆ. ಪ್ರತಿ ತಿಂಗಳಿಗೆ ಒಮ್ಮೆ ಆರೋಗ್ಯ ಕ್ಯಾಂಪ್ ಏರ್ಪಡಿಸಲಾಗುತ್ತಿದೆ. ನಿರಾಶ್ರಿತರನ್ನು 4-5 ದಿನಗಳವರೆಗೆ ಮಾತ್ರ ಇರಿಸಿಕೊಳ್ಳಲಾಗುತ್ತಿದೆ. ನಂತರ ಅವರನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಒಪ್ಪಿಸಲಾಗುತ್ತದೆ. ಕೇಂದ್ರದ ವ್ಯವಸ್ಥಾಪಕರು ರಾತ್ರಿ 9 ಗಂಟೆಯ ನಂತರ ಪ್ರತಿ ದಿನ ಸರ್ವೆ ಕಾರ್ಯ ನಡೆಸುತ್ತಾರೆ. ಬಸ್‌ ನಿಲ್ದಾಣ ಜನನಿಬಿಡ ಪ್ರದೇಶಗಳಲ್ಲಿ ಅನುಮಾನ ಬಂದ ವ್ಯಕ್ತಿಗಳನ್ನು ಮಾತನಾಡಿಸುತ್ತಾರೆ. ಅವರಿಗೆ ಅಗತ್ಯವಿದ್ದಲ್ಲಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT