ಕೊರಟಗೆರೆ: ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ನಿಲುಗಡೆ ಖಂಡಿಸಿ ಜೆಡಿಎಸ್ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
`ಸರ್ಕಾರ ನೀಡುತ್ತಿದ್ದ ಮಾಸಾಶನಗಳನ್ನು ಯಾವುದೇ ಕಾರಣ ನೀಡದೆ ಸ್ಥಗಿತಗೊಳಿಸಿದೆ. ತಾಲ್ಲೂಕಿನ ಸುಮಾರು 7,500 ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
`ಪಿಂಚಣಿ ಪರಿಶೀಲಿಸುವ ಅಧಿಕಾರವನ್ನು ಸರ್ಕಾರ ನೇರವಾಗಿ ಬೆಂಗಳೂರು ಪಿಂಚಣಿ ನಿರ್ದೇಶನಾಲಯ ಮತ್ತು ಖಜಾನೆ ಮುಖ್ಯಸ್ಥರಿಗೆ ನೀಡಿದೆ. ಪಿಂಚಣಿ ನಿರ್ದೇಶನಾಲಯಕ್ಕೆ ನೀಡಿರುವ ಅಧಿಕಾರವನ್ನು ಹಿಂಪಡೆದು ಪುನರ್ ಪರಿಶೀಲನೆ, ಮುಂಜೂರಾತಿ ಅಧಿಕಾರವನ್ನು ತಾಲ್ಲೂಕು ಆಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಎಸ್ಎಸ್ಆರ್ ವೃತ್ತದಲ್ಲಿ ಕ್ಷಣಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಪಿ.ಆರ್.ಸುಧಾಕರ್ಲಾಲ್, ಪ್ರೇಮ ಮಹಾಲಿಂಗಪ್ಪ, ದಾಕ್ಷಾಯಿಣಿ ರಾಜಣ್ಣ, ರಂಗಮುತ್ತಯ್ಯ, ಜೆ.ಎನ್.ನರಸಿಂಹರಾಜು, ಸುಕನ್ಯಾ ಮಂಜುನಾಥ್, ಎಲ್.ವಿ.ಪ್ರಕಾಶ್, ಅನಿತಾ ಅಶ್ವತ್ಥ್, ನಾರಾಯಣ ಮೂರ್ತಿ, ಎಲ್.ರಾಜಣ್ಣ, ಮಹಾಲಿಂಗಪ್ಪ, ದಾಡಿ ವೆಂಕಟೇಶ್, ಕೆರೆಯಾಗ್ಲಹಳ್ಳಿ ಲಕ್ಷ್ಮಣ್, ಟಿ.ವಿ.ದೊಡ್ಡಯ್ಯ, ಟಿ.ಸಿ.ಕಾಮರಾಜು, ಟಿ.ಸಿ.ಲಕ್ಷ್ಮೀಶ್, ಕೋಡ್ಲಹಳ್ಳಿ ವೆಂಕಟೇಶ್, ಕೆ.ಟಿ.ಶಿವರಾಮಯ್ಯ, ಚಿಕ್ಕರಂಗಯ್ಯ, ಆನಂದ್, ರವಿವರ್ಮ ಮತ್ತಿತರರು ಭಾಗವಹಿಸಿದ್ದರು.