ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕ ಸೇವಾ ಪರೀಕ್ಷೆ | ಕನಸು ಸಾಕಾರಕ್ಕೆ ಐಸಿಎಸ್‌ಟಿ ಅಕಾಡೆಮಿ

Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಯುವಕರಲ್ಲಿನ ಪ್ರತಿಭೆ, ಸಾಮರ್ಥ್ಯವನ್ನು ಅವರಿಗೇ ಮನದಟ್ಟು ಮಾಡಿಸುವ ಹಾಗೂ ಅದನ್ನು ಪ್ರಕಟಗೊಳಿಸುವ ರೀತಿಯ ಬಗ್ಗೆ ತರಬೇತಿ ನೀಡುತ್ತಿರುವ ಸಂಸ್ಥೆ ಮೈಸೂರಿನ ಕುವೆಂಪು ನಗರದ ಇಂಡಿಯನ್ ಸಿವಿಲ್‌ ಸರ್ವೀಸಸ್ ಟ್ರೈನಿಂಗ್‌ ಅಕಾಡೆಮಿ (ಐಸಿಎಸ್‌ಟಿಎ).

ಬಹುತೇಕ ಕೇಂದ್ರಗಳು, ನಾಗರಿಕ ಸೇವಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪದವಿ ಹಂತದಲ್ಲಿ ತರಬೇತಿ ನೀಡಿದರೆ, ಈ ಸಂಸ್ಥೆಯು ಪಿಯು ಮೊದಲ ವರ್ಷದಿಂದಲೇ ನೀಡುತ್ತದೆ. ಈ ರೀತಿ ಪಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ದೇಶದ ತರಬೇತಿ ಕೇಂದ್ರಗಳ ಪೈಕಿ ಮೊದಲನೆಯದು ಎಂಬ ಹೆಗ್ಗಳಿಕೆ ಇದರದ್ದು.

ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ತರಬೇತಿ ನೀಡಲಾಗುತ್ತಿದ್ದು, 2017ರಲ್ಲಿ ಆರಂಭವಾದ ಅಕಾಡೆಮಿಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದಾರೆ.

ಆರಂಭವಾದ ವರ್ಷದ ಬ್ಯಾಚ್‌ನಲ್ಲಿ ತರಬೇತಿ ಪಡೆದ ಅರ್ಜುನ್ ಒಡೆಯರ್‌ (ಕಂದಾಯ ವಿಭಾಗದಲ್ಲಿ 2ನೇ ಸ್ಥಾನ), ಎಸ್‌.ಅಭಿಷೇಕ್‌ (ಕಂದಾಯ ವಿಭಾಗದಲ್ಲಿ 22ನೇ ಸ್ಥಾನ) ಹಾಗೂ ಎಸ್‌.ಡಿ.ಸುಪ್ರೀತ್‌ ದೇವ್‌ (ವಾಣಿಜ್ಯ ತೆರಿಗೆ ವಿಭಾಗದಲ್ಲಿ 1ನೇ ಸ್ಥಾನ) ಅವರು 2019 ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ.

ಮೊದಲ ಪ್ರಯತ್ನದಲ್ಲೇ 2019ರ ಯುಪಿಎಸ್‌ಸಿ ಪ್ರಿಲಿಮ್ಸ್‌ ಹಾಗೂ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಎಂ.ಆರ್‌.ನಿಖಿಲ್ ಸಂದರ್ಶನ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

‘ಇಂಥ ಸಾಧನೆ ಸಾಧ್ಯವಾಗಿದ್ದು, ಅಕಾಡೆಮಿ ಆರಂಭಿಸುವಾಗ ವಹಿಸಿದ ಶ್ರದ್ಧೆ ಹಾಗೂ ನಡೆಸಿದ ಸಂಶೋಧನೆಯ ಫಲ’ ಎನ್ನುತ್ತಾರೆ ಸಂಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಟೇಲ್‌ ಎಸ್‌. ರಮೇಶ್‌ಗೌಡ. ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಸಂಗೀತಾ ಹೆಗಡೆ ಮತ್ತ ಪ್ರಸನ್ನ ಹೆಗಡೆ. ಮುಖ್ಯ ಸಲಹಾ ಸಮಿತಿಯ ಗೌರವ ಅಧ್ಯಕ್ಷರಾದ ಡಾ. ಎ. ರವೀಂದ್ರ (ಐಎಎಸ್‌, ನಿವೃತ್ತ ಮುಖ್ಯ ಕಾರ್ಯದರ್ಶಿ), ಎಂ. ಆರ್. ಶ್ರೀನಿವಾಸಮೂರ್ತಿ (ನಿವೃತ್ತ ಐಎಎಸ್‌ ಅಧಿಕಾರಿ), ಎನ್‌. ಪಾರ್ಥಸಾರಥಿ (ಐಎಫ್‌ಎಸ್‌ ಅಧಿಕಾರಿ) ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದೆ.

ಕೆಎಎಸ್‌ ಅಧಿಕಾರಿಯಾಗುವ ಬಯಕೆಯಿಂದ 1998ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿದ್ದ ರಮೇಶಗೌಡರು ಅದರಲ್ಲಿ ವಿಫಲರಾಗುತ್ತಾರೆ. ತಾವು ಎಡವಿದ್ದೆಲ್ಲಿ ಎಂಬುದರ ಅವಲೋಕನ ನಡೆದಾಗ ಪರೀಕ್ಷೆಯ ಸಿದ್ಧತೆ ಹೇಗಿರಬೇಕಿತ್ತು ಎಂಬ ಚಿತ್ರಣ ಅವರಿಗೆ ದಕ್ಕುತ್ತದೆ. ಆಗಲೇ ಅವರು, ತಮ್ಮಂಥ ಆಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾವೇ ಖುದ್ದಾಗಿ ತರಬೇತಿ ಕೇಂದ್ರವೊಂದನ್ನು ತೆರೆಯಲು ನಿರ್ಧರಿಸುತ್ತಾರೆ. ಆ ಕನಸು ನನಸಾಗಿದ್ದು ಒಂಬತ್ತು ವರ್ಷಗಳ ತರುವಾಯ!

‘ಅಕಾಡೆಮಿ ಆರಂಭಕ್ಕೆ ಮೊದಲು, ದಕ್ಷಿಣ ಭಾರತದಲ್ಲಿ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗೆ ಹೇಗೆ ತರಬೇತಿ ಸಿಗುತ್ತಿದೆ ಎಂಬುದನ್ನು ಅರಿತುಕೊಂಡೆ. ಇದಕ್ಕಾಗಿ 3–4 ತಿಂಗಳು ಸಂಶೋಧನೆ ಮಾಡಿದೆವು’ ಎನ್ನುತ್ತಾರೆ ಅವರು.

ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡಿನಿಂದಲೂ ವಿದ್ಯಾರ್ಥಿಗಳು ಇಲ್ಲಿ ಬಂದು ಕೋಚಿಂಗ್‌ ಪಡೆಯುತ್ತಿದ್ದಾರೆ. ಅಕಾಡೆಮಿಯ ಗೌರವಾನ್ವಿತ ಸದಸ್ಯರ ಸಹಕಾರ ಮತ್ತು ಪ್ರಾಜೆಕ್ಟ್‌ ಇನ್‌ವೆಸ್ಟರ್‌ಗಳ ಸಹಯೋಗದೊಂದಿಗೆ ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಸಂಸ್ಥೆಯಾಗಿ ಬೆಳೆಸುವ ಉದ್ದೇಶ ಅಕಾಡೆಮಿಯದು.

ಪ್ರತಿ ವರ್ಷ ಕೇವಲ 300 ಅಭ್ಯರ್ಥಿಗಳಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಪ್ರವೇಶ ಪರೀಕ್ಷೆಯ (ಸಿಇಟಿ) ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಆಸಕ್ತರಿಗೆ ಮೊದಲು ಕೌನ್ಸೆಲಿಂಗ್‌ ಮಾಡಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅರ್ಹತೆ ಪಡೆದ ಮೇಲೆ ಪ್ರವೇಶಾತಿ ನೀಡಲಾಗುತ್ತದೆ.

‘ಉತ್ತರ ಭಾರತದಲ್ಲಿ ಪದವಿಯೊಂದಿಗೆ ತರಬೇತಿಯನ್ನೂ ಪಡೆದು 21 ವರ್ಷಕ್ಕೇ ಯುಪಿಎಸ್‌ಸಿ ಪರೀಕ್ಷೆ ಎದುರಿಸುತ್ತಾರೆ. ಆದ್ದರಿಂದ, ದಕ್ಷಿಣ ಭಾರತದಲ್ಲಿ ಪಿಯುಸಿಯಿಂದಲೇ ತರಬೇತಿ ಕೊಡಬೇಕು ಎಂಬ ಉದ್ದೇಶದಿಂದ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಫೌಂಡೇಷನ್‌ ಕೋರ್ಸ್‌, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಅಡ್ವಾನ್ಸ್ಡ್ ಫೌಂಡೇಷನ್‌ ಕೋರ್ಸ್‌ ಹಾಗೂ ವೀಕೆಂಡ್‌ ಕೋರ್ಸ್‌ ಆರಂಭಿಸಿದ್ದೇವೆ’ ಎಂದು ಹೇಳುತ್ತಾರೆ ರಮೇಶಗೌಡ.

ಸ್ಕಾಲರ್‌ಶಿಪ್‌ ವ್ಯವಸ್ಥೆ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಅಕಾಡೆಮಿಯಲ್ಲಿ ಗ್ರಂಥಾಲಯ, ಸಂವಹನ ಕೌಶಲ ತರಬೇತಿ, ಡಿಜಿಟಲ್ ಎಸಿ ತರಗತಿಗಳು, ಸರಣಿ ಪರೀಕ್ಷೆ, ಮಾರ್ಗದರ್ಶನ ಕಾರ್ಯಕ್ರಮ, ಪರೀಕ್ಷಾ ತಯಾರಿಗಾಗಿ ವೈಯಕ್ತಿಕ ಮಾರ್ಗದರ್ಶನದ ಸೌಲಭ್ಯವಿದೆ.

ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸುವವರಿಗೆ ಅನುಕೂಲವಾಗಲೆಂದು ‘ನ್ಯಾಷನಲ್‌ ಟ್ಯಾಲೆಂಟ್‌ ಸರ್ಚ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಂ’ ಎಂಬ ಯೋಜನೆಯನ್ನೂ ಈ ಅಕಾಡೆಮಿ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಫೆ. 5ರವರೆಗೆ ಆನ್‌ಲೈನ್‌ ಸ್ಕಾಲರ್‌ಶಿಪ್‌ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಇದರಲ್ಲಿ ಭಾಗವಹಿಸಿದವರಿಗೆ ಶುಲ್ಕ ರಿಯಾಯಿತಿಯನ್ನೂ ಪ್ರಕಟಿಸಿದೆ.

ಈ ಅಕಾಡೆಮಿಯನ್ನು ದಕ್ಷಿಣ ಭಾರತದಲ್ಲಿಯೇ ಅತ್ಯುತ್ತಮ ‌‌‌‌ಸಂಸ್ಥೆಯನ್ನಾಗಿ ಬೆಳಸಲು ಆಸಕ್ತಿ ಹೂಡಿಕೆದಾರರ ಸಹಯೋಗದೊಂದಿಗೆ ಹಾಗೂ ನಮ್ಮ ಸದಸ್ಯರುಗಳ ಸಹಕಾರದಲ್ಲಿ ಯೋಜನೆ ರೂಪಿಸಿ ಮುನ್ನಡೆಸುವ ಸದುದ್ದೇಶ ಹೊಂದಿದ್ದೇವೆ. ಮೈಸೂರು ನಗರವು ಯುಪಿಎಸ್‌ಸಿ/ ಕೆಪಿಎಸ್‌ಸಿ ಶಿಕ್ಷಣಕ್ಕೆ ಪೂರಕ ವಾತಾವರಣ ಹೊಂದಿದ್ದು ವಿಶ್ವವಿದ್ಯಾಲಯಗಳು, ಉತ್ತಮ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿವೆ. ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ವಿದ್ಯಾಭ್ಯಾಸಕ್ಕೆ ವಲಸೆ ಹೋಗುವ ಬದಲು ಅತ್ಯುತ್ತಮ ಶಿಕ್ಷಣವನ್ನು ಮೈಸೂರಿನ ಐಸಿಎಸ್‌ಟಿ ಅಕಾಡೆಮಿಯಲ್ಲಿ ಪಡೆದು ಸಾಧಿಸಲು ಸಾಧ್ಯವಿದೆ.

ಮಾಹಿತಿಗೆ: WWW.ICSTA.IN, ದೂ. 0821–4191595, ಮೊ.91089 82242 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT