ಒಡಿಶಾದ ‘ರೇಷ್ಮೆ ನಗರಿ’ ಎಂದೇ ಪ್ರಸಿದ್ಧವಾಗಿರುವ ಬರ್ಹಾಂಪುರದ ಲೋಕಸಭಾ ಕ್ಷೇತ್ರವು ಈ ಬಾರಿ ಪಕ್ಷಾಂತರಿಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಈಚೆಗೆ ಬಿಜೆಪಿ ತೊರೆದು ಪಕ್ಷಕ್ಕೆ ಸೇರಿದ್ದ ಭೃಗು ಬಕ್ಷಿ ಪಾತ್ರಾ ಅವರನ್ನು ಬಿಜು ಜನತಾ ದಳವು (ಬಿಜೆಡಿ) ಕಣಕ್ಕಿಳಿಸಿದೆ. ಭೃಗು ಅವರು ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಭೃಗು ಅವರ ವಿರುದ್ಧ ಸೆಣಸಲು ಬಿಜೆಪಿಯು, ಬಿಜೆಡಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಪ್ರದೀಪ್ ಕುಮಾರ್ ಪಾಣಿಗ್ರಾಹಿ ಅವರನ್ನು ಅಖಾಡಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ ಕೂಡ ರಶ್ಮಿ ರಂಜನ್ ಪಟ್ನಾಯಕ್ ಅವರನ್ನು ಕಣಕ್ಕೆ ಇಳಿಸಿದೆ. 2019ರ ಚುನಾಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಡಿಯ ಚಂದ್ರಶೇಖರ ಸಾಹು ಅವರು 94,844 ಮತಗಳ ಅಂತರದಿಂದ ಬಿಜೆಪಿಯ ಭೃಗು ಬಕ್ಷಿ ಪಾತ್ರಾ ಅವರನ್ನು ಸೋಲಿಸಿದ್ದರು. ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಆದರೆ 2009ರಿಂದ ಇದು ಬಿಜೆಡಿಯ ಬಿಗಿಮುಷ್ಟಿಯಲ್ಲಿದೆ. ಬಿಜೆಪಿಯು ಕಣಕ್ಕಿಳಿಸಿರುವ ಪ್ರದೀಪ್ ಕುಮಾರ್ ಅವರು ಒಂದು ಕಾಲದಲ್ಲಿ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ ಆಪ್ತರಲ್ಲಿ ಒಬ್ಬರಾಗಿದ್ದರು. ಪ್ರದೀಪ್ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ‘ಜನ ವಿರೋಧಿ ಚಟುವಟಿಕೆ’ ಆರೋಪದಲ್ಲಿ ಅವರನ್ನು ಬಿಜೆಡಿಯಿಂದ ಉಚ್ಚಾಟಿಸಲಾಗಿತ್ತು. ಎರಡು ತಿಂಗಳ ಹಿಂದೆಯಷ್ಟೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋಪಾಲ್ಪುರ ಕ್ಷೇತ್ರದಿಂದ ಪ್ರದೀಪ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಭೃಗು ಬಕ್ಷಿ ಮತ್ತು ಪ್ರದೀಪ್ ಕುಮಾರ್ ಅವರು ಸ್ಥಳೀಯವಾಗಿ ಪ್ರಭಾವಿ ನಾಯಕರಾಗಿರುವುದರಿಂದ ಈ ಬಾರಿ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.