ಹಾಸನದಲ್ಲಿ ಕಾಂಗ್ರೆಸ್ನಿಂದ ಶ್ರೇಯಸ್ ಪಟೇಲ್, ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಆದರೆ, ಎರಡು ಕಡೆಯೂ ಅಸಮಾಧಾನದ ಅಲೆ ಎದ್ದಿದ್ದು, ಸ್ವತಂತ್ರ ಅಭ್ಯರ್ಥಿಯ ಮೂಲಕ ಕಾಂಗ್ರೆಸ್–ಜೆಡಿಎಸ್ ಅತೃಪ್ತರನ್ನು ಸೆಳೆಯಲು ಬಿಜೆಪಿಯು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ ಎಂಬ ಗುಸುಗುಸು ಕ್ಷೇತ್ರದಲ್ಲಿ ನಡೆದಿದೆ.
ಮಾಜಿ ಸಚಿವ ದಿ. ಎಚ್.ಸಿ. ಶ್ರೀಕಂಠಯ್ಯ ಅವರ ಪುತ್ರ ವಿಜಯಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಶ್ರೇಯಸ್ ಪಟೇಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಮೈತ್ರಿ ಅಭ್ಯರ್ಥಿ ಘೋಷಣೆಯಾಗದಿದ್ದರೂ, ಪ್ರಜ್ವಲ್ ಕಣಕ್ಕಿಳಿದಿರುವುದನ್ನು ಸ್ಥಳೀಯ ಬಿಜೆಪಿ ನಾಯಕರು ಒಪ್ಪುತ್ತಿಲ್ಲ. ಹೀಗಾಗಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವೊಂದು ಆರಂಭವಾಗಿದೆ.
ಪರಿಣಾಮವಾಗಿ, ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಪುತ್ರಿ, ವಿಜಯಕುಮಾರ್ ಪತ್ನಿ ರಾಜೇಶ್ವರಿ ಅವರನ್ನು ‘ಮೋದಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ’ಯಾಗಿ ಕಣಕ್ಕಿಳಿಸಬೇಕೆಂಬ ಚಿಂತನೆ ನಡೆದಿದೆಯಂತೆ. ರಾಜೇಶ್ವರಿ ಅವರು ಶ್ರೇಯಸ್ ಪಟೇಲ್ ಅವರ ಸೋದರತ್ತೆಯೂ ಹೌದು.
ಎರಡೂ ಕಡೆಯಿಂದ ಪ್ರಬಲ ರಾಜಕೀಯ ಹಿನ್ನೆಲೆಯುಳ್ಳ ರಾಜೇಶ್ವರಿಯವರನ್ನೇ ಕಣಕ್ಕಿಳಿಸಿದರೆ, ಕಾಂಗ್ರೆಸ್ ಅತೃಪ್ತರು ಬೆಂಬಲಿಸುತ್ತಾರೆ. ಬಿಜೆಪಿಯ ಮುಖಂಡರೂ ಬೆನ್ನಿಗೆ ನಿಲ್ಲಲಿದ್ದಾರೆ. ಅವರ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಪಾಠ ಕಲಿಸಬಹುದು ಎಂಬ ತಂತ್ರವನ್ನು ಹೆಣೆಯಲಾಗುತ್ತಿದೆ ಎನ್ನುವುದು ಜಿಲ್ಲೆಯಲ್ಲಿ ಇದೀಗ ಚರ್ಚೆಯ ವಿಷಯ.