ಅಜಂಗಢ(ಉತ್ತರಪ್ರದೇಶ): ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಮೈತ್ರಿ ಕೂಟ ‘ಇಂಡಿಯಾ’ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ‘ದೇಶದಲ್ಲಿ ಜೂನ್ 4ರಂದು ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ, ಜನರು ಅದನ್ನು ಉತ್ಸಾಹದಿಂದ ನೋಡಲಿದ್ದಾರೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಅಜಂಗಢದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಯಾದವ್ ಪರ ಪ್ರಚಾರ ನಡೆಸಿ ಬುಧವಾರ ಅಖಿಲೇಶ್ ಮಾತನಾಡಿದರು.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಬಿಜೆಪಿಯೊಂದಿಗೆ ಕೈಜೊಡಿಸಿದ್ದು, ಸಮಾಜವಾದಿ ಪಕ್ಷದ ಮತಗಳನ್ನು ವಿಭಜಿಸುವ ಮೂಲಕ ಕೇಸರಿ ಪಕ್ಷಕ್ಕೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿ ಹಂತದ ಮತದಾನದಲ್ಲಿ ಇಂಡಿಯಾ ಬಣ ಮುನ್ನುಗ್ಗುತ್ತಿದೆ, ಜೂನ್ 4 ರಂದು ಹೊಸ ಸಿನಿಮಾ ಬಿಡುಗಡೆಯಾಗಲಿದ್ದು, ಜನರು ನೋಡಲಿದ್ದಾರೆ ಎಂದರು.
ಐದು ಹಂತದ ಮತದಾನವನ್ನು ಗಮನಿಸಿದರೆ ಬಿಜೆಪಿ ಸರ್ಕಾರದಿಂದ ಹೊರಗುಳಿದಿರುವಂತೆ ಕಾಣುತ್ತಿದೆ. ಆರನೇ ಹಂತ ಮುಗಿಯುವಷ್ಟರಲ್ಲಿ ಅಧಿಕಾರದಿಂದ ಹೊರಹೋಗಲಿದೆ ಎಂದರು.