ನವದೆಹಲಿ: ‘ಭಾರತದ ಸಂವಿಧಾನದ ಪೀಠಿಕೆಯಲ್ಲಿ ಅಚಲವಾದ ನಂಬಿಕೆ ಹೊಂದಿರುವ ಮತ್ತು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯದ ಉದ್ದೇಶಗಳಿಗೆ ಬದ್ಧವಾಗಿರುವ ಎಲ್ಲ ರಾಜಕೀಯ ಪಕ್ಷಗಳನ್ನು ‘ಇಂಡಿಯಾ’ ಮೈತ್ರಿಕೂಟ ಸ್ವಾಗತಿಸುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಹ್ವಾನ ನೀಡಿದರು.
ಮೋದಿ ನೇತೃತ್ವದ ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಮೈತ್ರಿಕೂಟ ಹೋರಾಟ ಮುಂದುವರಿಸಲಿದೆ ಎಂದೂ ಹೇಳಿದರು. ಬಿಜೆಪಿ ಸರ್ಕಾರವು ಆಡಳಿತ ನಡೆಸಬಾರದು ಎಂಬ ಜನರ ಆಶಯವನ್ನು ಅರಿತು ಮೈತ್ರಿಕೂಟವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದೂ ಅವರು ತಿಳಿಸಿದರು.
ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮೈತ್ರಿಕೂಟದ ನಾಯಕರು ಖರ್ಗೆ ಅವರ ನಿವಾಸದಲ್ಲಿ ಬುಧವಾರ ಸಂಜೆ ಸಭೆ ನಡೆಸಿದರು. ವಿರೋಧ ಪಕ್ಷಗಳ 33 ನಾಯಕರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ‘ಈ ಚುನಾವಣೆಯಲ್ಲಿ ಮೈತ್ರಿಕೂಟದ ನಾಯಕರು ಒಟ್ಟಾಗಿ ಹೋರಾಡಿದೆವು. ಸಮನ್ವಯದಿಂದ ಹಾಗೂ ಪೂರ್ಣ ಶಕ್ತಿಯಿಂದ ಹೋರಾಟ ನಡೆಸಿದೆವು’ ಎಂದರು.
‘18ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ. ಅವರ ಹೆಸರು ಹಾಗೂ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತ್ತು. ಬಿಜೆಪಿಗೆ ಬಹುಮತ ನೀಡದೆ ಮೋದಿ ನಾಯಕತ್ವದ ಬಗ್ಗೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ವೈಯಕ್ತಿಕವಾಗಿ ಮೋದಿ ಅವರಿಗೆ ಇದು ರಾಜಕೀಯ ಸೋಲು ಮಾತ್ರವಲ್ಲ ನೈತಿಕ ಸೋಲು ಕೂಡ’ ಎಂದು ಅವರು ಹೇಳಿದರು.
ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶರದ್ ಪವಾರ್, ಎಂ.ಕೆ. ಸ್ಟಾಲಿನ್, ಕೆ.ಸಿ.ವೇಣುಗೋಪಾಲ್, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಸೇರಿದಂತೆ ಮಿತ್ರ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.