‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿರುವುದರಿಂದ ರಾಜಸ್ಥಾನ ಜನರಿಗೆ ಆಗುವ ಉಪಯೋಗವೇನು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದ ಚುನಾವಣಾ ಪ್ರಚಾರವೊಂದಲ್ಲಿ ಆಡಿದ ಮಾತು, ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಕೂಡ ಪ್ರಧಾನಿ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಧ್ಯೆಯೂ ಜಟಾಪಟಿ ನಡೆದಿದೆ...
ಕಾಂಗ್ರೆಸ್ನ ಅಧ್ಯಕ್ಷನಾಗುವುದು ಎಂದರೆ ಸಣ್ಣ ಮಾತಲ್ಲ. 370ನೇ ವಿಧಿಗೂ ರಾಜಸ್ಥಾನಕ್ಕೂ ಸಂಬಂಧ ಇಲ್ಲ ಎಂದು ಈ ನಾಯಕ ಭಾವಿಸುತ್ತಿದ್ದಾರೆ. ಹಾಗಾದರೆ, ಜಮ್ಮು ಮತ್ತು ಕಾಶ್ಮೀರವು ಈ ದೇಶದ ಭಾಗವಲ್ಲವೇ? ಅವರ ಆಲೋಚನೆಯು ತುಕ್ಡೆ ತುಕ್ಡೆ ಗುಂಪಿನ ರೀತಿಯಲ್ಲಿಯೇ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಾ ರಾಜಸ್ಥಾನ ಹಾಗೂ ಬಿಹಾರ ಸೇರಿ ದೇಶದ ಎಲ್ಲ ಭಾಗಗಳ ಸೈನಿಕರೂ ಹುತಾತ್ಮರಾಗಿದ್ದಾರೆ. ಇವರ ದೇಹಗಳು ತ್ರಿವರ್ಣ ಧ್ವಜದಲ್ಲಿ ಸುತ್ತಿಕೊಂಡೇ ಅವರವರ ಊರುಗಳಿಗೆ ತೆರಳಿದ್ದಾವೆ.
-ನರೇಂದ್ರ ಮೋದಿ, ಪ್ರಧಾನಿ (ಪಶ್ಚಿಮ ಬಂಗಾಲದ ಜಲ್ಪಾಯಿಗುಡಿ ಹಾಗೂ ಬಿಹಾರದ ನವಾದದಲ್ಲಿ ಆಡಿದ ಮಾತುಗಳು)
ಭ್ರಷ್ಟಾಚಾರಕ್ಕಾಗಿ, ಪಶ್ಚಿಮ ಬಂಗಾಳವನ್ನು ಲೂಟಿ ಮಾಡುವುದಕ್ಕಾಗಿ, ರಾಜ್ಯದಲ್ಲಿ ಗಲಭೆ ಎಬ್ಬಿಸುವುದಕ್ಕಾಗಿ ಪರವಾನಗಿ ನೀಡಬೇಕು ಎನ್ನುವುದು ಟಿಎಂಸಿಯ ಆಸೆ. ಈ ಕಾರಣದಿಂದಲೇ ಕೇಂದ್ರೀಯ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ತನಿಖೆ ನಡೆಸುತ್ತಿವೆ. ರಾಜ್ಯದಲ್ಲಿ ‘ಟಿಎಂಸಿ ಸಿಂಡಿಕೇಟ್ ರಾಜ್’ ಇದೆ. ಇದು ತಮ್ಮ ಲೂಟಿಕೋರ ಹಾಗೂ ಭ್ರಷ್ಟ ನಾಯಕರನ್ನು ರಕ್ಷಿಸಿಕೊಳ್ಳಲು ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲೆ ದಾಳಿ ಮಾಡಿಸುತ್ತದೆ
-ನರೇಂದ್ರ ಮೋದಿ, ಪ್ರಧಾನಿ (ಪಶ್ಚಿಮ ಬಂಗಾಳದ ಜಲಪಾಯೀಗುಡಿಯಲ್ಲಿ ಆಡಿದ ಮಾತು)
ರಾಮ ನವಮಿಯು ಸಮೀಪಿಸುತ್ತಿದೆ. ಇವರುಗಳ (ವಿರೋಧ ಪಕ್ಷದ ನಾಯಕರ) ಪಾಪಗಳನ್ನು ಮರೆಯದಿರಿ.
(ಬಿಹಾರದ ನವಾದದಲ್ಲಿ ಆಡಿದ ಮಾತು)
**
ಜಾರಿ ನಿರ್ದೇಶನಾಲಯ, ಸಿಬಿಐ, ಎನ್ಐಎ ಹಾಗೂ ಐ.ಟಿ ಇಲಾಖೆ ಬಿಜೆಪಿಯ ‘ಅಂಗ ಸಂಸ್ಥೆ’ಗಳಂತೆ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳನ್ನು ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿಗೆ ಸೇರಿಕೊಳ್ಳಿ ಇಲ್ಲವೇ ತನಿಖೆ ಎದುರಿಸಿ ಎಂದು ಈ ಸಂಸ್ಥೆಗಳು ನಮ್ಮ ನಾಯಕರಿಗೆ, ಹೋರಾಟಗಾರರಿಗೆ ಹೇಳುತ್ತಿವೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಪಶ್ಚಿಮ ಬಂಗಾಳದ ಪುರೂಲಿಯಾದಲ್ಲಿ ಆಡಿದ ಮಾತು)
ರಾಮ ನವಮಿಯಂದು ಬಿಜೆಪಿಯು ಕೋಮುಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದೆ. ಏ.19ರಂದು ಮತದಾನ ಇದೆ. ಏ.17ಕ್ಕೆ ಗಲಭೆ ನಡೆಸಲಿದೆ.
**
ರಾಷ್ಟ್ರೀಯ ಪಕ್ಷ ಎನ್ನಿಸಿಕೊಳ್ಳುವ ಸ್ಥಾನಮಾನವನ್ನು ಕಾಂಗ್ರೆಸ್ ಹೆಚ್ಚುಕಡಿಮೆ ಕಳೆದುಕೊಂಡಿದೆ. 370ನೇ ವಿಧಿ ಕುರಿತು ಮಾತಾಡಿದ ಮೇಲಂತೂ, ನೈತಿಕ ನೆಲೆಯಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗುವ ಹಕ್ಕನ್ನೂ ಕಳೆದುಕೊಂಡಿದೆ.
-ಸುಧಾಂಶು ತ್ರಿವೇದಿ, ಬಿಜೆಪಿ ವಕ್ತಾರ
**
ಪ್ರಧಾನಿ ಮೋದಿ ಅವರ ಸುಳ್ಳುಗಳಿಂದ ಭಾರತದ ಜನರು ರೋಸಿಹೋಗಿದ್ದಾರೆ. ಜೂನ್ 4ರ ನಂತರ, ಮೋದಿ ಅವರು ದೀರ್ಘ ರಜೆಗೆ ತೆರಳಲಿದ್ದಾರೆ. ಇದು ಭಾರತದ ಜನರ ಗ್ಯಾರಂಟಿ.
-ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಕಾಂಗ್ರೆಸ್ ಪ್ರಣಾಳಿಕೆಗೆ ಮುಸ್ಲಿಂ ಲೀಗ್ನ ಮೊಹರು ಬಿದ್ದಿದೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ‘ಎಕ್ಸ್’ ಖಾತೆಯಲ್ಲಿನ ಪೋಸ್ಟ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.