ಮುಂಬೈ: ಮಹಾರಾಷ್ಟ್ರದಿಂದ ಈ ಬಾರಿ ಲೋಕಸಭೆಗೆ ಚುನಾಯಿತರಾಗಿರುವ ಶೇ 50 ಸಂಸದರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ರಾಜ್ಯ ರಾಜಕಾರಣದಲ್ಲಿ ಹೊಂದಿರುವ ಪ್ರಭಾವಕ್ಕೆ ಇದು ಸಾಕ್ಷಿಯಾಗಿದೆ.
ರಾಜ್ಯದಲ್ಲಿರುವ 48 ಲೋಕಸಭಾ ಸ್ಥಾನಗಳ ಪೈಕಿ 5 ಕ್ಷೇತ್ರಗಳು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು 4 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿವೆ. ಆದಾಗ್ಯೂ, ಮರಾಠ ಸಮುದಾಯದ 26 ಮಂದಿ ಸಂಸತ್ಗೆ ಪ್ರವೇಶ ಪಡೆದಿದ್ದಾರೆ. 9 ಕ್ಷೇತ್ರಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು, 6 ಕಡೆ ಎಸ್ಸಿ, 4ರಲ್ಲಿ ಎಸ್ಟಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಇತರ ಜಾತಿಯವರಿಗೆ ಮೂರು ಕ್ಷೇತ್ರಗಳು ದಕ್ಕಿವೆ.
ಎಸ್ಸಿ ಹಾಗೂ ಎಸ್ಟಿ ಸುಮುದಾಯಕ್ಕೆ ಮೀಸಲಾಗಿರುವ 9 ಸ್ಥಾನಗಳ ಪೈಕಿ 8ರಲ್ಲಿ ಶಿವಸೇನಾ (ಯುಬಿಟಿ) ಕಾಂಗ್ರೆಸ್, ಎನ್ಸಿಪಿ ನೇತೃತ್ವದ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಎಂಟರಲ್ಲಿ 6 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು, ತಲಾ ಒಂದೊಂದು ಕಡೆ ಶಿವಸೇನಾ (ಯುಬಿಟಿ) ಮತ್ತು ಎನ್ಸಿಪಿ ಅಭ್ಯರ್ಥಿಗಳು ಇದ್ದಾರೆ. ಉಳಿದ ಒಂದು ಕ್ಷೇತ್ರ ಬಿಜೆಪಿ ಪಾಲಾಗಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಗಳಲ್ಲಿ ಮರಾಠ ಜಾತಿಗೆ ಸೇರಿದ ತಲಾ ಆರು ಸಂಸದರು ಇದ್ದಾರೆ.
ಇತರ ಜಾತಿಯವರು
ನಾಗಪುರದಿಂದ ಗೆದ್ದಿರುವ ನಿತಿನ್ ಗಡ್ಕರಿ ಬ್ರಾಹ್ಮಣರಾಗಿದ್ದರೆ, ಮುಂಬೈ ಉತ್ತರದಿಂದ ಜಯ ಸಾಧಿಸಿರುವ ಪಿಯೂಷ್ ಗೋಯಲ್ ಅವರು ಮಾರ್ವಾಡಿ. ಈ ಇಬ್ಬರೂ ಬಿಜೆಪಿಯವರು. ಮುಂಬೈ ದಕ್ಷಿಣ – ಕೇಂದ್ರದಲ್ಲಿ ಗೆಲುವು ಸಾಧಿಸಿರುವ ಶಿವಸೇನಾದ ಅನಿಲ್ ದೇಸಾಯಿ ಅವರು ಸಾರಸ್ವತ ಬ್ರಾಹ್ಮಣ ಜಾತಿಗೆ ಸೇರಿದವರು.