ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜು ಮಾಡಲು ಮೋದಿ ಹುಟ್ಟಿಲ್ಲ: ಈವರೆಗೂ ನೋಡಿದ್ದು ಟ್ರೇಲರ್ ಮಾತ್ರ: ಮೋದಿ ಗುಡುಗು

Published 2 ಏಪ್ರಿಲ್ 2024, 13:32 IST
Last Updated 2 ಏಪ್ರಿಲ್ 2024, 13:32 IST
ಅಕ್ಷರ ಗಾತ್ರ

ಕೋಟಪುಟ್ಲಿ (ರಾಜಸ್ಥಾನ): ‘ನನ್ನ ಜನ್ಮ ಮೋಜು ಮಾಡಲು ಆಗಿಲ್ಲ. ಕಠಿಣ ಪರಿಶ್ರಮದ ಮೂಲಕ ದೇಶದ ಅಭಿವೃದ್ಧಿ ಮತ್ತು ಜನರ ಕನಸುಗಳನ್ನು ಈಡೇರಿಸುವುದೇ ನನ್ನ ಗುರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಕೋಟಪುಟ್ಲಿಯಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಶಂಕನಾದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಶ್ರಮಪಡುವ ಸಲುವಾಗಿಯೇ ಮೋದಿ ಹುಟ್ಟಿದ್ದಾನೆ. ದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಕಳೆದ ಹತ್ತು ವರ್ಷಗಳಲ್ಲಿ ಏನು ಆಗಿದೆಯೋ ಅದು ಕೇವಲ ಟ್ರೇಲರ್ ಮಾತ್ರ’ ಎಂದಿದ್ದಾರೆ.

ಕಾಂಗ್ರೆಸ್‌ನ ಹತ್ತು ವರ್ಷಗಳ ಅವಧಿಯನ್ನು ಬಿಜೆಪಿಯ ಹತ್ತು ವರ್ಷಗಳ ಅವಧಿಯೊಂದಿಗೆ ಹೋಲಿಸಿದ ಪ್ರಧಾನಿ ಮೋದಿ, ‘ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆಗೊಳಿಸಿ ಆತ್ಮನಿರ್ಭರ ಭಾರತದ ನಿರ್ಮಾಣದ ಕಲ್ಪನೆ ನನ್ನ ಕನಸು. ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಇಂಡಿ ಮೈತ್ರಿಕೂಟವು ದೇಶಕ್ಕಾಗಿ ಚುನಾವಣೆ ಎದುರಿಸುತ್ತಿಲ್ಲ. ಬದಲಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಸ್ಪರ್ಧೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಗೆಲ್ಲುವ ಮಾತುಗಳನ್ನಾಡುತ್ತಿಲ್ಲ. ಬದಲಿಗೆ ಬಿಜೆಪಿ ಗೆದ್ದರೆ ಅಪಾಯ ಎದುರಾಗಲಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಕನಸುಗಳನ್ನು ಮೋದಿ ನನಸು ಮಾಡಲಿದ್ದಾರೆ. ಹಿಂದಿನ ಸರ್ಕಾರ ಯೋಚಿಸಲೂ ಸಾಧ್ಯವಿಲ್ಲದ್ದನ್ನು ಮೋದಿ ಸರ್ಕಾರ ಮಾಡಿ ತೋರಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ₹20 ಸಾವಿರ ಕೋಟಿ ಹಣವನ್ನು ರಾಜಸ್ಥಾನದ 85 ಲಕ್ಷ ರೈತರಿಗೆ ವಿತರಿಸಲಾಗಿದೆ’ ಎಂದು ಹೇಳಿದ್ದಾರೆ.

‘2024ರ ಚುನಾವಣೆಯಲ್ಲಿ ಸ್ಪಷ್ಟವಾಗಿ ಎರಡು ಬಣಗಳು ಸ್ಪರ್ಧಿಸುತ್ತಿವೆ. ಒಂದೆಡೆ ದೇಶವೇ ಮೊದಲು ಎನ್ನುವ ಬಿಜೆಪಿ ಇದೆ. ಮತ್ತೊಂದೆಡೆ ದೇಶವನ್ನು ಲೂಟಿ ಮಾಡುವ ಅವಕಾಶಕ್ಕೆ ಕಾದಿರುವ ಕಾಂಗ್ರೆಸ್‌ ಇದೆ. ಒಂದೆಡೆ ದೇಶವೇ ಒಂದು ಕುಟುಂಬ ಎಂದು ನಂಬಿರುವ ಬಿಜೆಪಿ ಇದ್ದರೆ, ಮತ್ತೊಂದೆಡೆ ತಮ್ಮ ಕುಟುಂಬವೇ ದೇಶಕ್ಕಿಂತ ದೊಡ್ಡದು ಎಂದು ನಂಬಿರುವ ಕಾಂಗ್ರೆಸ್‌ ಇದೆ. ದೇಶದ ಘನತೆಯನ್ನು ಎತ್ತಿ ಹಿಡಿದ ಬಿಜೆಪಿ ಒಂದೆಡೆಯಾದರೆ, ವಿದೇಶಗಳಿಗೆ ಹೋಗಿ ದೇಶದ ಮಾನ ಹರಾಜು ಹಾಕುತ್ತಿರುವ ಕಾಂಗ್ರೆಸ್‌ ಮತ್ತೊಂದೆಡೆ’ ಎಂದು ಮೋದಿ ವಾಗ್ದಾಳಿ ನಡೆಸಿದರು.

‘ಇಂದು ಬಿಜೆಪಿ ಎಂದರೆ ಅದು ಅಭಿವೃದ್ಧಿ ಮತ್ತು ಮಾರ್ಗೋಪಾಯ ಎಂಬ ಕಲ್ಪನೆ ಜನರಲ್ಲಿದೆ. ಆದರೆ ಕಾಂಗ್ರೆಸ್ ಎಂದರೆ ದೇಶದ ಎಲ್ಲಾ ಸಮಸ್ಯೆಗಳ ಮೂಲ ಎಂದು ಜನರು ಭಾವಿಸಿದ್ದಾರೆ. ದೇಶದ ಸ್ವಾತಂತ್ರ್ಯ ನಂತರ, ಏಳು ದಶಕಗಳ ಕಾಲ ಬಡತನವಿತ್ತು. ಅದಕ್ಕೆ ಕಾರಣ ಕಾಂಗ್ರೆಸ್‌. ಆತ್ಮನಿರ್ಭರರಾಗಲು ನಮ್ಮ ಸೇನೆಗೆ ಅವಕಾಶವನ್ನೇ ನೀಡಿಲ್ಲ. ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ನಮ್ಮ ಅಧಿಕಾರ ಅವಧಿಯಲ್ಲಿ ಶಸ್ತ್ರಾಸ್ತ್ರಗಳನ್ನು ಭಾರತ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಸ್ವತಂತ್ರ್ಯ ಭಾರತದ 75 ವರ್ಷಗಳಲ್ಲಿ ದೇಶವು ₹21 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದ್ದು ಬಿಜೆಪಿ ಅವಧಿಯಲ್ಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT