ನವದೆಹಲಿ: 'ಭಾರತ ಮಾತೆ ನೋವಿನಲ್ಲಿದ್ದಾಳೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಭಾನುವಾರ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಲೋಕತಂತ್ರ ಬಚಾವೋ' (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿ ನಡೆಸುತ್ತಿದೆ.
ರ್ಯಾಲಿಯಲ್ಲಿ ಪಾಲ್ಗೊಂಡ ಸುನೀತಾ, 'ದೆಹಲಿ ಜನರು ಕಳೆದ 75 ವರ್ಷಗಳಿಂದ ಅನ್ಯಾಯಕ್ಕೊಳಗಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಿದರೆ, ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು' ಎಂದಿದ್ದಾರೆ.
ದೆಹಲಿಯ ಎಎಪಿ ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ, ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಈ ಕುರಿತು ಮಾತನಾಡಿದ ಸುನೀತಾ, 'ಭಾರತ ಮಾತೆ ನೋವಿನಲ್ಲಿದ್ದಾಳೆ, ಇಂತಹ ದೌರ್ಜನ್ಯಗಳು ಕೆಲಸಕ್ಕೆ ಬರುವುದಿಲ್ಲ. ನನ್ನ ಪತಿಗೆ ಸಾಕಷ್ಟು ಜನರ ಆಶೀರ್ವಾದವಿದೆ' ಎಂದಿದ್ದಾರೆ.
'ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಉತ್ತಮ ಆಸ್ಪತ್ರೆಗಳು, ಅತ್ಯುತ್ತಮ ಶಿಕ್ಷಣ ಸೇರಿದಂತೆ ಆರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು. ಮೈತ್ರಿಕೂಟಕ್ಕೆ ಅವಕಾಶ ನೀಡಿದರೆ, ಶ್ರೇಷ್ಠ ಭಾರತ ನಿರ್ಮಾಣ ಮಾಡಲಾಗುವುದು' ಎಂದು ಅರವಿಂದ ಕೇಜ್ರಿವಾಲ್ ಬರೆದ ಸಂದೇಶವನ್ನು ಇದೇ ವೇಳೆ ಓದಿದರು.