ಕೊಪ್ಪಳ: 'ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ. ತಾಕತ್ತಿದ್ದರೆ ಅವರೇ ಸ್ಪರ್ಧೆ ಮಾಡಬೇಕಿತ್ತು' ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸೋಲಿನ ಭೀತಿಯಿಂದ ಹಿಟ್ನಾಳ ನಾನು ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಬೇರೆಯವರ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರು. ಮುಂದಿನ ಚುನಾವಣೆಯಲ್ಲಿ ಅವರ ಠೇವಣೆ ಕಳೆಯುತ್ತೇನೆ ಎಂದು ರೆಡ್ಡಿ ಬುಧವಾರದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಶಾಸಕ ಹಿಟ್ನಾಳ ‘ಮತದಾರರು ಯಾವ ಅಭ್ಯರ್ಥಿ ಪರವಾಗಿರುತ್ತಾರೆ ಅವರು ಗೆಲ್ಲುತ್ತಾರೆ. ಯಾರು ಠೇವಣೆ ಕಳೆದುಕೊಳ್ಳುತ್ತಾರೊ ನೋಡೋಣ. ನಾವು ಆರೋಗ್ಯಕರ ರೀತಿಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ವಿನಾಕಾರಣ ಟೀಕೆ ಮಾಡುತ್ತಿರುವ ರೆಡ್ಡಿಗೆ ಫಲಿತಾಂಶದ ದಿನ ಜನರ ಮನದ ಮಾತು ಏನೆಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
‘ಸಂಗಣ್ಣ ಕರಡಿ ಹಾಗೂ ನಾವು ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಸಂಗಣ್ಣ ಕರಡಿ ಅವರು ಕೇವಲ ವ್ಯಕ್ತಿಯಲ್ಲ, ಕಾಂಗ್ರೆಸ್ ಪಕ್ಷಕ್ಕೆ ಅವರೊಂದು ದೊಡ್ಡಶಕ್ತಿಯಾಗಿದ್ದಾರೆ’ ಎಂದರು.