ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬುಧವಾರ ಬಿರುಸಿನ ಪ್ರಚಾರ ನಡೆಸಿದರು.
ಕ್ಷೇತ್ರದ ಹಲವು ಪ್ರದೇಶಗಳಲ್ಲಿ ತೆರೆದ ವಾಹನ ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸಿದ ಶೋಭಾ, ‘ದೇಶಕ್ಕೆ ಮತ್ತೊಮ್ಮೆ ಮೋದಿ. ಈ ಬಾರಿಯೂ ಬಿಜೆಪಿಗೆ ಮತ ನೀಡಿ’ ಎಂದು ಮತದಾರರನ್ನು ಕೋರಿದರು. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು–ಕಾರ್ಯಕರ್ತರು ಶೋಭಾ ಅವರ ಪ್ರಚಾರಕ್ಕೆ ಸಾಥ್ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಕಲ್ಲಳ್ಳಿ ವೀರಭದ್ರಸ್ವಾಮಿ ದೇವಸ್ಥಾನ, ಸೂಲಿಕೆರೆ, ಚುಂಚನಕುಪ್ಪೆ, ಚಿಕ್ಕನಹಳ್ಳಿ, ಚಂದ್ರಪ್ಪ ಸರ್ಕಲ್ ಹಾಗೂ ಚೋಳನಾಯಕನಹಳ್ಳಿಯಲ್ಲಿ ಮುಖಂಡರ ಸಭೆ ನಡೆಸಿ ಶೋಭಾ ಮತಯಾಚಿಸಿದರು.
ವಿದ್ಯಾರಣ್ಯಪುರ ವಾರ್ಡ್ನಲ್ಲಿ ಹಿರಿಯ ನಾಗರಿಕರ ವೇದಿಕೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಶೋಭಾ ಪಾಲ್ಗೊಂಡಿದ್ದರು. ಬಿಜೆಪಿಗೆ ಮತ ನೀಡುವಂತೆ ಕೋರಿದರು. ಕ್ಷೇತ್ರದಲ್ಲಿರುವ ಹಲವು ಅಪಾರ್ಟ್ಮೆಂಟ್ ಸಮುಚ್ಚಯಗಳಿಗೂ ಶೋಭಾ ಭೇಟಿ ನೀಡಿದರು.