ಚಿತ್ರದುರ್ಗ: ಪ್ರಜಾತಾಂತ್ರಿಕವಾಗಿ ಅಧಿಕಾರಕ್ಕೆ ಬಂದ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸುವ ‘ಆಪರೇಷನ್ ಕಮಲ’ಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಗಿದೆ. ಈ ಹಣ ಎಲ್ಲಿಂದ ಬಂದಿತು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಚಿತ್ರದುರ್ಗದಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ–2’ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
‘ತನ್ನನ್ನು ಚೌಕಿದಾರ್ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ, ‘ಹಣ ಮುಟ್ಟಲ್ಲ’ ಎಂಬುದಾಗಿ ನಂಬಿಸಿದ್ದಾರೆ. ಪಕ್ಷಾಂತರಗೊಂಡ ಪ್ರತಿ ಶಾಸಕರಿಗೆ ₹25 ಕೋಟಿ ಕೊಟ್ಟು, ಚುನಾವಣಾ ಖರ್ಚಿಗೂ ಹಣ ನೀಡಲಾಗಿದೆ. ಈ ಹಣವನ್ನು ಎಲ್ಲಿಂದ ಹಣ ತಂದಿದ್ದೀರಿ ಎಂಬ ಅನುಮಾನ ಜನರಲ್ಲಿದೆ. ಜನಾಶೀರ್ವಾದ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದರು.