ಬೆಳಗಾವಿ: ‘ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಏಪ್ರಿಲ್ 27ರಂದು ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾಲ್ಲೂಕಿನ ಕಾಕತಿ ಗ್ರಾಮದ ಐಟಿಸಿ ವೆಲ್ಕಮ್ ಹೋಟೆಲ್ನಲ್ಲಿ ತಂಗುವರು’. ಅವರ ವಾಸ್ತವ್ಯಕ್ಕೆ ಭರ್ಜರಿ ತಯಾರಿ ನಡೆದಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವಿಶೇಷ ರಕ್ಷಣಾ ದಳ (ಎಸ್ಪಿಜಿ) ಸದಸ್ಯರು ಎಸ್ಪಿಜಿ ತಂಡದವರು ಬುಧವಾರ ಇಲ್ಲಿ ಸಭೆ ನಡೆಸಿ, ಭದ್ರತೆ ಮತ್ತು ಹೋಟೆಲ್ನಲ್ಲಿ ಇರುವ ಸೌಲಭ್ಯಗಳ ಕುರಿತು ಚರ್ಚಿಸಿದರು.
ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಈ ಹೋಟೆಲ್ ಐದು ಎಕರೆ ಜಾಗದಲ್ಲಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಪುತ್ರ ಬಸವಪ್ರಸಾದ ಜೊಲ್ಲೆ ಇದರ ಮಾಲೀಕರು.
‘ಶಿಷ್ಟಾಚಾರದಂತೆ ಪ್ರಧಾನಿ ವಾಸ್ತವ್ಯಕ್ಕೆ ಎಲ್ಲ ವ್ಯವಸ್ಥೆ ಮಾಡುತ್ತೇವೆ. ನಮಗೆ ಜವಾಬ್ದಾರಿ ಜೊತೆಗೆ ಖುಷಿಯೂ ಇದೆ. ಎಸ್ಪಿಜಿ ತಂಡದವರು ಈಗಾಗಲೇ ಹೋಟೆಲನ್ನು ಸುಪರ್ದಿಗೆ ಪಡೆದಿದ್ದಾರೆ’ ಎಂದು ಬಸವಪ್ರಸಾದ ಜೊಲ್ಲೆ ತಿಳಿಸಿದರು.
‘ಪ್ರಧಾನಿ 27ರ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡುವ ಸಂದೇಶ ಬಂದಿದೆ. ಎಸ್ಪಿಜಿ ತಂಡದವರು ಭದ್ರತೆ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಉಳಿದ ವ್ಯವಸ್ಥೆ ಆ ಪಕ್ಷದವರೇ ಮಾಡುತ್ತಾರೆ. ಭದ್ರತೆಗೆ ಜಿಲ್ಲಾಡಳಿತದಿಂದ ಸಹಕರಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.