ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರಮುಖ ನಾಯಕರು ದೆಹಲಿಗೆ ಹೋಗಿದ್ದಾರೆಂದರೆ ಅದಕ್ಕೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಪಕ್ಷದ ಕೆಲಸಕ್ಕಾಗಿ ಅಥವಾ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ದೆಹಲಿಗೆ ಹೋಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
‘ನನಗೆ ಟಿಕೆಟ್ ತಪ್ಪಿಸಲು ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ನಾನು ಒಪ್ಪುವುದಿಲ್ಲ. ಬೇರೆ ಬೇರೆ ರಾಜ್ಯಗಳ ಟಿಕೆಟ್ ಹಂಚಿಕೆ ಬಗ್ಗೆಯೂ ಚರ್ಚೆ ನಡೆದಿದೆ. ಇದಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬೇರೆ ಬೇರೆ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಟಿಕೆಟ್ ಹಂಚಿಕೆ ವಿಳಂಬವಾಗಿದೆ ಹೊರತು ಬೇರೆ ಯಾವುದೇ ಕಾರಣ ಅಲ್ಲ’ ಎಂದು ಹೇಳಿದರು.
‘ಬೆಳಗಾವಿ ಟಿಕೆಟ್ ನನಗೆ ಸಿಗುವ ಭರವಸೆ ಇದೆ. ಅಲ್ಲಿನ ಬಿಜೆಪಿ ಮುಖಂಡರಾದ ಪ್ರಭಾಕರ ಕೋರೆ, ಅಭಯ ಪಾಟೀಲ, ಈರಣ್ಣಾ ಕಡಾಡಿ ಸೇರಿದಂತೆ ಎಲ್ಲರ ಜೊತೆ ಮಾತನಾಡಿದ್ದೇನೆ. ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಿಸಿದ ಮೇಲೆ ಬೆಳಗಾವಿಗೆ ತೆರಳುತ್ತೇನೆ’ ಎಂದು ತಿಳಿಸಿದರು.