ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಗ್ಗೆ ಮಾತನಾಡಿದ ಸಮಿತಿ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ‘ದೇಶದ ಆರ್ಥಿಕ ಸಾರ್ವಭೌಮತೆಯನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಿಂದಾಗಿ ದೇಶವು ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಂವಿಧಾನದ ನಾಲ್ಕು ಆಧಾರ ಸ್ತಂಭಗಳನ್ನು ವ್ಯವಸ್ಥಿತವಾಗಿ ಕಳಚಿ ಹಾಕುತ್ತಿರುವ ಪ್ರಕ್ರಿಯೆಗೆ ದೇಶ ಸಾಕ್ಷಿಯಾಗುತ್ತಿದೆ. ದುಡಿಯುವ ಜನರ ಹಕ್ಕುಗಳನ್ನು ನಾಶಮಾಡಲು ಮೋದಿ ಸರ್ಕಾರವು ಸರ್ವಾಧಿಕಾರಿ-ಕೋಮುವಾದಿ ಆಳ್ವಿಕೆಯ ಫ್ಯಾಸಿಸ್ಟ್ ಮಾದರಿಯ ವಿಧಾನಗಳನ್ನು ಬಳಸುತ್ತಿದೆ. ಸರ್ಕಾರದ ಅಧಿಕಾರ ಯಂತ್ರಗಳನ್ನು ಮತ್ತು ತನ್ನ ಸಂಸದೀಯ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.