ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರ ಜತೆಗಿನ ಮಾತುಕತೆಯ ಮಾಹಿತಿ ಸುಮಲತಾ ನೀಡಿಲ್ಲ: ಬಿಜೆಪಿ ನಾಯಕರ ಅಸಮಾಧಾನ

Published 26 ಮಾರ್ಚ್ 2024, 15:20 IST
Last Updated 26 ಮಾರ್ಚ್ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಬಗ್ಗೆ ಸಂಸದೆ ಸುಮಲತಾ ಅಂಬರೀಷ್‌ ಅವರು ಪಕ್ಷದ ವರಿಷ್ಠರ ಭೇಟಿಯ ಬಳಿಕ ತಮಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ನಡೆಸಿದ ಮಂಡ್ಯ ಜಿಲ್ಲಾ ಬಿಜೆಪಿ ನಾಯಕರ ಸಭೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ‘ದೆಹಲಿಗೆ ಹೋಗಿ ಬಂದ ಬಳಿಕ ಅಲ್ಲಿ ಏನೆಲ್ಲ ಮಾತುಕತೆ ಆಗಿದೆ ಎಂಬ ಮಾಹಿತಿ ನೀಡಿಲ್ಲ. ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೆ ನಾನೇ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದೆ. ಅವರಿಗೇ ಟಿಕೆಟ್‌ ನೀಡಬೇಕು ಎಂದು ನಾವೆಲ್ಲ ಒಕ್ಕೊರಲಿನಿಂದ ಹೇಳಿದ್ದೆವು. ಬಿಜೆಪಿ ಸೇರುವಂತೆಯೂ ಅವರಿಗೆ ಮನವಿ ಮಾಡಿದ್ದೆವು’ ಎಂದು ತಿಳಿಸಿದರು.

ವಿಜಯೇಂದ್ರ ಮಾತನಾಡಿ, ‘ರಾಜ್ಯದ 28 ಕ್ಷೇತ್ರಗಳನ್ನೂ ಬಿಜೆಪಿ– ಜೆಡಿಎಸ್‌ ಒಗ್ಗಟ್ಟಿನಿಂದ ಗೆಲ್ಲಬೇಕಾಗಿದೆ. ಈ ಕಾರಣಕ್ಕೆ ಮೈತ್ರಿ ಆಗಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆ‌ಲ್ಲಬೇಕು. ಮೋದಿ ಅವರ ಕೈ ಬಲಪಡಿಸಬೇಕು. ನಾರಾಯಣಗೌಡ ಸೇರಿ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಮಂಡ್ಯ ಸಂಸದೆ ಸುಮಲತಾ ಅವರ ಬಗ್ಗೆ ಬಿಜೆಪಿ ವರಿಷ್ಠರಿಗೆ ಅಪಾರ ಗೌರವವಿದೆ. ಮಂಡ್ಯ ಮತ್ತು ಮೈಸೂರು ಪ್ರವಾಸದ ನಂತರ ಸುಮಲತಾ ಅವರನ್ನು ಭೇಟಿಯಾಗುತ್ತೇನೆ. ಸುಮಲತಾ ಅವರನ್ನು ಪಕ್ಷದಲ್ಲಿ ಗೌರವದಿಂದ ನಡೆಸಿಕೊಳ್ಳುತ್ತೇವೆ. ಕೆ.ಸಿ.ನಾರಾಯಣಗೌಡ ಅವರು ಪಕ್ಷ ಬಿಡುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಮಂಡ್ಯ ಬಿಜೆಪಿ ನಾಯಕರಾದ ಅಶೋಕ್ ಜಯರಾಂ, ಇಂಡವಾಳು ಸಚ್ಚಿದಾನಂದ, ಮುನಿರಾಜು, ಸ್ವಾಮಿ, ಇಂದ್ರೇಶ್ ಕುಮಾರ್, ಎಲ್‌.ಆರ್‌.ಶಿವರಾಮೇಗೌಡ, ಚೇತನ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT