ಆಂಧ್ರದ ಮುಂದಿನ ಸಿ.ಎಂ ಜಗನ್ ಕಾದು, ಪವನ್ ಕಲ್ಯಾಣ್...

ಸಿನಿಮಾಗಳಿಗಿಂತ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಟಾಲಿವುಡ್ ಮತ್ತು ಬಾಲಿವುಡ್ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಈಗ ಮತ್ತೊಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
‘ಜನಸೇನಾ ರಾಜಕೀಯ ಪಕ್ಷ ಸ್ಥಾಪಕ ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಯೇ ಹೊರತು ಜಗನ್ ಮೋಹನ್ ರೆಡ್ಡಿ ಅಲ್ಲ’ ಎಂದು ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಪವನ್ ಕಲ್ಯಾಣ್ ಅಣ್ಣ ಚಿರಂಜೀವಿ ಅವರ ರಾಜಕೀಯ ಭವಿಷ್ಯ ಏನು ಎಂಬ ಮರು ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ...
‘ಚಿರಂಜೀವಿ ಅದ್ಭುತ ನಟ. ಒಬ್ಬ ನಟನಾಗಿ ಆತ ನನಗೆ ಇಷ್ಟವಾಗುತ್ತಾರೆ. ಆದರೆ, ರಾಜಕಾರಣಿಯಾಗಿ ಅಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.
ಹೈದರಾಬಾದ್ನ 'ಎಪಿ7ಎಎಂ ಡಾಟ್ ಕಾಮ್' ಡಿಜಿಟಲ್ ಸುದ್ದಿಜಾಲವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎನ್ಟಿಆರ್ ಮತ್ತು ಜೂನಿಯರ್ ಎನ್ಟಿಆರ್ ಇಬ್ಬರಲ್ಲಿ ಯಾರಿಷ್ಟ ಎಂಬ ಮತ್ತೊಂದು ಪ್ರಶ್ನೆಗೆ, ‘ಸಿನಿಯರ್ ಎನ್.ಟಿ.ಆರ್ಗಿಂತ ಜೂನಿಯರ್ ಎನ್.ಟಿ.ಆರ್ ಮೇಲು’ ಎಂಬ ಮತ್ತೊಂದು ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸದ್ಯ ರಾಮ್ಗೋಪಾಲ್ ವರ್ಮಾ ಅವರು ಇಡೀ ದೇಶದ ಗಮನ ಸೆಳೆದ ಪ್ರಣಯ್ ಮತ್ತು ಅಮೃತಾ ಎಂಬ ಯುವ ಜೋಡಿಗಳ ದುರಂತ ಪ್ರೇಮಕತೆ, ಮರ್ಯಾದೆಗೇಡು ಹತ್ಯೆ ನೈಜ ಘಟನೆಗಳನ್ನು ‘ಮರ್ಡರ್’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಅದಕ್ಕೂ ಮುನ್ನ ಇಂತಹ ಹೇಳಿಕೆಗಳ ಮೂಲಕ ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಪ್ರತಿ ಹೊಸ ಸಿನಿಮಾದ ಮುಹೂರ್ತದ ದಿನದಿಂದಲೇ ವಿವಾದಾತ್ಮಕ ವಿಷಯಗಳಿಂದಲೇ ಆರ್ಜಿವಿ ಪ್ರಚಾರದಲ್ಲಿರುತ್ತಾರೆ. ಚಿತ್ರದ ಪ್ರಮೋಶನ್ಗಾಗಿ ಅವರ ಇಂಥ ಸ್ಟಂಟ್ ಮಾಮೂಲು ಎನ್ನುತ್ತಾರೆ ತೆಲುಗು ಸಿನಿಮಾ ಇಂಡಸ್ಟ್ರಿ ಮಂದಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.