ನಿರ್ದೇಶಕ ಬಿ.ಪಿ. ಹರಿಹರನ್ ಸದ್ದಿಲ್ಲದೇ‘ಕಿಲಾಡಿಗಳು’ ಶೀರ್ಷಿಕೆಯ ಮಕ್ಕಳ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳ ಚಿತ್ರೀಕರಣ, ಡಿಟಿಎಸ್ ಸೇರಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳುಅಮೆರಿಕದಲ್ಲಿನಡೆದಿವೆ. ತಂತ್ರಜ್ಞ ವಾಲ್ಡರ್ ತಮ್ಮ ತಂಡದ ನೆರವಿನೊಂದಿಗೆಚಿತ್ರದ ತಾಂತ್ರಿಕ ಕೆಲಸವನ್ನು ಮೂರು ತಿಂಗಳೊಳಗೆಮುಗಿಸಿಕೊಟ್ಟಿದ್ದಾರಂತೆ.
ಹರಿಹರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಜತೆಗೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.ಈ ಚಿತ್ರದಲ್ಲಿ 140 ಪಾತ್ರಗಳಿದ್ದು, ಈ ಪೈಕಿ 50 ಮಂದಿ ಮಕ್ಕಳು ತೆರೆ ಮೇಲೆ ವಿಜೃಂಭಿಸಿದ್ದಾರೆ.
ನಟ ಮಹೇಂದ್ರ ಮುನ್ನೋತ್ ದಕ್ಷ ಪೊಲೀಸ್ ಅಧಿಕಾರಿ, ಗುರುರಾಜ ಹೊಸಕೋಟೆ ಡಿಐಜಿ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ‘ಮಜಾ ಭಾರತ’ ಕಲಾವಿದರ ನಟನೆಯೂ ಇದೆ. ಅಲ್ಲದೆ ಡಾ.ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಏಳು ಸೆಕೆಂಡ್ಗಳ ಕಾಲ ತೋರಿಸಲಾಗಿದೆಯಂತೆ.
ಪೊಲೀಸ್ ಎಂದರೆ ಏನು? ಪೊಲೀಸರ ಜೀವನ ಹೇಗಿರುತ್ತದೆ ಎನ್ನುವುದು ಚಿತ್ರದ ಕೇಂದ್ರವಸ್ತು. ಇದಕ್ಕಾಗಿ ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದಷ್ಟು ಕುತೂಹಲದ ಮಾಹಿತಿಯನ್ನು ಅವರಿಂದ ಕಲೆಹಾಕಿ, ಅದನ್ನು ಸನ್ನಿವೇಶಕ್ಕೆ ತಕ್ಕಂತೆ ರೂಪಾಂತರಿಸಲಾಗಿದೆ ಎನ್ನುತ್ತಾರೆ ಹರಿಹರನ್.
ದುರುಳರು ಮಕ್ಕಳನ್ನು ಅಪಹರಿಸಿದಾಗ ಖಾಕಿ ಸಿಬ್ಬಿಂದಿ ಆ ಚಿಣ್ಣರನ್ನು ಹೇಗೆ ರಕ್ಷಿಸುತ್ತಾರೆ, ಅಪರಾಧಿಗಳನ್ನು ಅವರು ಹಿಡಿಯುವ ಪರಿ ಹೇಗಿರುತ್ತದೆ, ಯುವಕರು ವಿದೇಶಕ್ಕೆ ಹೋದಾಗ ತಂದೆ-ಮಕ್ಕಳ ಬಾಂಧವ್ಯ ಹೇಗಿರುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.ಈ ಚಿತ್ರವನ್ನು ವಿಶೇಷವಾಗಿ ಪೊಲೀಸರಿಗಾಗಿಯೇ ನಿರ್ಮಿಸಲಾಗಿದೆ ಎನ್ನುವುದು ಅವರ ಸಮಜಾಯಿಷಿ.
ಬೆಂಗಳೂರು ಸುತ್ತಮುತ್ತ 81 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಡಾ.ನಾಗೇಂದ್ರ ಪ್ರಸಾದ್, ಹೃದಯಶಿವ ಸಾಹಿತ್ಯದ ಐದು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ನಿರಂಜನ್ ಬೋಪಣ್ಣ, ಜಾನ್, ಸುರ್ಯೋದಯ, ಸಾಹಸ ಕೋಟೆರಾಜ್ ಅಪ್ಪು ವೆಂಕಟೇಶ್, ಅಲೆಕ್ಸ್ ನಿರ್ವಹಿಸಿದ್ದಾರೆ.
ಅನಂತ್ ಸಿನಿಮಾಸ್ ಬ್ಯಾನರ್ ಅಡಿ ಮಹೇಂದ್ರ ಮುನ್ನೋತ್ ಮತ್ತುಬಿ.ಪಿ. ಹರಿಹರನ್ ಬಂಡವಾಳ ಹೂಡಿದ್ದಾರೆ. ಪೂರ್ವಿಕಾಮೃತ ಕ್ರಿಯೇಷನ್ ಮೂಲಕ ಜೂನ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.