ನಾಲ್ವರಿಗೆ ಬೆಳಕಾದ ಅಪ್ಪು ಕಣ್ಣುಗಳು: ನಾರಾಯಣ ನೇತ್ರಾಲಯದ ವೈದ್ಯರ ಹೇಳಿಕೆ

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. ಇದರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಸೋಮವಾರ ತಿಳಿಸಿದರು.
ಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪಡಿಸುವ (ಸೀಳುವ) ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಕಣ್ಣಿನ ಮೇಲ್ಪದರದ ಕಾರ್ನಿಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಪದರದ ಕಾಯಿಲೆ ಇರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳಿಗೆ ದೃಷ್ಟಿ ಪುನಃಸ್ಥಾಪಿಸಲು ನಾವು ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ಮಾಡಿದ್ದೇವೆ. ಈ ರೀತಿ ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಭುಜಂಗ ಶೆಟ್ಟಿ ತಿಳಿಸಿದರು.
ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿಯ ಕಾರ್ಯವಿಧಾನ ಹೀಗಿದೆ.
1. ಡೀಪ್ ಆಂಟೀರಿಯರ್ ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿ (DALK) - ಕಾರ್ನಿಯಾದ ಹೊರ ಅಥವಾ ಬಾಹ್ಯ ಭಾಗವನ್ನು ಕಾರ್ನಿಯಲ್ ಡಿಸ್ಟ್ರೋಫಿ ಮತ್ತು ಕೆರಾಟೋಕೊನಸ್ ಹೊಂದಿರುವ ಇಬ್ಬರು ಯುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಈ ಎರಡೂ ಪರಿಸ್ಥಿತಿಗಳು ಪ್ರಧಾನವಾಗಿ ಕಾರ್ನಿಯಾದ ಮೇಲ್ಮೈ ಪದರದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಕಣ್ಣಿನ ಆಳವಾದ ಭಾಗವು ಸಾಮಾನ್ಯವಾಗಿದೆ. ಆದ್ದರಿಂದ, ಮೇಲಿನ ಭಾಗವನ್ನು ಮಾತ್ರ ಬದಲಾಯಿಸಲಾಯಿತು ಮತ್ತು ರೋಗಿಯ ಎಂಡೋಥೀಲಿಯಂ ಅನ್ನು ಉಳಿಸಿಕೊಳ್ಳಲಾಯಿತು ಎಂದು ಅವರು ವಿವರಿಸಿದರು.
2. ಡೆಸ್ಸೆಮೆಟ್ನ ಸ್ಟ್ರಿಪ್ಪಿಂಗ್ ಎಂಡೋಥೆಲಿಯಲ್ ಕೆರಾಟೊಪ್ಲ್ಯಾಸ್ಟಿ (DSEK) - ಕಾರ್ನಿಯಾದ ಒಳ ಅಥವಾ ಆಳವಾದ ಪದರವನ್ನು ಕಾರ್ನಿಯಾದ ಒಳಗಿನ ಪದರದ ಮೇಲೆ ಪರಿಣಾಮ ಬೀರುವ ಕಾರ್ನಿಯಲ್ ಎಂಡೋಥೀಲಿಯಲ್ ಡಿಕಂಪೆನ್ಸೇಶನ್ ಹೊಂದಿರುವ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಈ ಕಾರ್ಯವಿಧಾನದಲ್ಲಿ, ಎಂಡೋಥೀಲಿಯಂ ಅನ್ನು ಮಾತ್ರ ಬದಲಾಯಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಸಣ್ಣ ಛೇದನ ಮಾಡಿ ಬಳಿಕ ಹೊಲಿಯಲಾಗುತ್ತದೆ. ಪೂರ್ಣ ಕಾರ್ನಿಯಾ ಕಸಿ ಮಾಡುವ ಅಗತ್ಯವಿರುವುದಿಲ್ಲ. ಇದರಿಂದ ರೋಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯ ಎಂದರು.
ಕಸಿ ಮಾಡಲು ಬಳಸದ ಲಿಂಬಲ್ ರಿಮ್ (ಕಾರ್ನಿಯಾದ ಸುತ್ತಳತೆಯ ಬಳಿ ಕಣ್ಣಿನ ಬಿಳಿ ಭಾಗ) ಅನ್ನು ಲಿಂಬಾಲ್ ಸ್ಟೆಮ್ ಸೆಲ್ ಹೊಂದಿರುವ ರೋಗಿಗಳಲ್ಲಿ ಬಳಕೆಗಾಗಿ ‘ಇಂಡ್ಯೂಸ್ಡ್ ಪ್ಲುರಿಪೊಟೆಂಟ್ ಸ್ಟೆಮ್ ಸೆಲ್’ಗಳನ್ನು ಉತ್ಪಾದಿಸಲು ನಮ್ಮ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಸಾಯನಿಕ ಗಾಯಗಳು ಆಸಿಡ್ ಗಾಯಗಳು ಮತ್ತು ಇತರ ಗಂಭೀರ ಸಮಸ್ಯೆಗಳ ಸಂದರ್ಭ ಇದನ್ನು ಬಳಕೆ ಮಾಡಲು ಸಾಧ್ಯವಿದೆ ಎಂದೂ ಅವರು ಹೇಳಿದರು.
ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ.ಯತೀಶ್ ಶಿವಣ್ಣ, ಡಾ.ಶರೋನ್ ಡಿಸೋಜಾ, ಪ್ರಾರ್ಥನಾ ಭಂಡಾರಿ ಮತ್ತು ಡಾ.ಹರ್ಷ ನಾಗರಾಜ್ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಕಾರ್ನಿಯಾ ತಂಡದ ಡಾ.ಗೈರಿಕ್ ಕುಂದು ಮತ್ತು ವೀರೇಶ್ ನೆರವು ನೀಡಿದ್ದಾರೆ ಎಂದ ಭುಜಂಗ ಶೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಕಣ್ಣಿನ ದಾನ ಮಾಡಿದ ಡಾ.ರಾಜಕುಮಾರ ಕುಟುಬ ವರ್ಗಕ್ಕೆ ನಾವು ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.