‘ಸಪ್ತ ಸಾಗರದಾಚೆ ಎಲ್ಲೋ’ ಹೊರಡಲು ಸಜ್ಜಾಗಿರುವ ನಟ ರಕ್ಷಿತ್ ಶೆಟ್ಟಿ ಅವರು ಹೇಗಿರುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಿವರಾತ್ರಿ ಸಂದರ್ಭದಲ್ಲಿ ‘ಮನು’ ಪಾತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ರಕ್ಷಿತ್ ತೆರೆಯ ಮೇಲೆ ಬರಲಿದ್ದಾರೆ.
ಕುರುಚಲು ಗಡ್ಡ, ಬಾಚದ ಕೂದಲು, ಕಳೆದುಕೊಂಡ ಮುಖಭಾವ ಹೀಗೆ ಭಿನ್ನವಾಗಿ ‘ಪ್ರಿಯ’ ಎಂಬ ನಾಯಕಿ ಪಾತ್ರಕ್ಕೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಇದು ವಿಭಿನ್ನವಾದ, ವಿಶೇಷ ಪಾತ್ರವಾಗಿರಲಿದೆ’ ಎನ್ನುತ್ತಾರೆ ರಕ್ಷಿತ್. ಕಳೆದ ತಿಂಗಳಷ್ಟೇ ಚಿತ್ರತಂಡವು ನಾಯಕಿ ರುಕ್ಮಿಣಿ ವಸಂತ್ ಅವರ ಫಸ್ಟ್ಲುಕ್ ಬಿಡುಗಡೆ ಮಾಡಿತ್ತು. ಇದರಲ್ಲಿ ನಾಯಕಿ ಎಡಕ್ಕೆ ನೋಡುತ್ತಿದ್ದರೆ, ಇದೀಗ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ನಾಯಕ ನಾಯಕಿಯನ್ನು ನೋಡುತ್ತಿರುವಂತಿದೆ. ಆದರೆ ಇಬ್ಬರ ಹಿಂದಿನ ದೃಶ್ಯಗಳು ಪರಸ್ಪರ ವಿರುದ್ಧವಾಗಿದೆ. ಇದುವೇ ‘ಮನು’ ಪಾತ್ರದ ಕುರಿತು ಹೆಚ್ಚಿನ ವಿವರಣೆ ನೀಡುತ್ತದೆ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.
ಈ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಹಿಂದೆ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ ನೀಡಿದ್ದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವು ಪ್ರೇಕ್ಷಕರನ್ನು ಸೆಳೆದಿತ್ತು. ಇದೇ ಜೋಡಿ ಇದೀಗ ಈ ಚಿತ್ರದ ಮುಖಾಂತರ ಮತ್ತೆ ಒಂದಾಗಿದೆ.
‘ಚಿತ್ರವು ಪ್ರೇಮಕಥೆ. 2010ರಲ್ಲಿ ನಡೆಯುವ ಕಥೆ ಇದು. ದಶಕದ ಹಿಂದೆ ಪ್ರಪಂಚವೇ ಬೇರೆ ರೀತಿಯಾಗಿತ್ತು. ತಂತ್ರಜ್ಞಾನ, ಇಂಟರ್ನೆಟ್ ಎಲ್ಲವೂ ಹೊಸದಾಗಿತ್ತು. ಆಗಿನ ಸನ್ನಿವೇಶಗಳ ಜತೆ ಕಥೆ ಹೆಣೆಯಲಾಗಿದೆ. ರಕ್ಷಿತ್ ಅವರು ಬೇರೆ ಬೇರೆ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ಹೇಮಂತ್ ರಾವ್.
All the best to #ParamVahPictures @paramvah_studios on venturing into #SapthaSagaraDaacheEllo 😍 ur character look is amazing guru @rakshitshetty Manu ..looking forward for this wonderful film 🤗 @hemanthrao11 @charanrajmr2701 pic.twitter.com/gJ1UDh3oj7
— Pushkara Mallikarjunaiah (@Pushkara_M) March 11, 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.