ಬೆಂಗಳೂರು:‘ಆರ್ಆರ್ಆರ್ ಸಿನಿಮಾಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡುವುದಿಲ್ಲ’ ಎಂದು ನಿರ್ದೇಶಕ ಎಸ್.ಎಸ್. ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಆರ್ಆರ್ಆರ್ ಸಿನಿಮಾದ ಟ್ರೈಲರ್ನಲ್ಲಿ ತೋರಿಸಬೇಕಾಗಿದ್ದನ್ನು ತೋರಿಸಲಾಗಿದೆ. ಇನ್ನೇನಿದ್ದರು ಚಿತ್ರಮಂದಿರಗಳಲ್ಲಿ ನೇರವಾಗಿ ಸಿನಿಮಾ ತೋರಿಸಲಾಗುವುದು’ ಎಂದು ರಾಜಮೌಳಿ ಹೇಳಿದರು.
‘ಆರ್ಆರ್ಆರ್ ಯಾವುದೇ ನೈಜ ಘಟನೆ ಆಧಾರಿತ ಅಥವಾ ಐತಿಹಾಸಿಕ ಚಿತ್ರವಲ್ಲ. ಯಾರೊಬ್ಬರಿಗೂ ಸಂಬಂಧಿಸಿದ್ದಲ್ಲ. ಇದೊಂದು ಪರಿಪೂರ್ಣ ಫಿಕ್ಷನ್ (ಕಾಲ್ಪನಿಕ) ಸಿನಿಮಾ’ ಎಂದರು.
‘ನಾನು ಪ್ರತಿಯೊಂದು ಸಿನಿಮಾವನ್ನು ನನ್ನ ಮೊದಲ ಸಿನಿಮಾ ಎಂದು ನಿರ್ದೇಶನ ಮಾಡುತ್ತೇನೆ. ಅದರ ಸಾಧಕ ಬಾಧಕಗಳ ಬಗ್ಗೆ ಹೆಚ್ಚು ವಿಚಾರಿಸಲು ಹೋಗುವುದಿಲ್ಲ. ನನ್ನನ್ನೂ, ನನ್ನ ಕುಟುಂಬದವರೂ ಸೇರಿದಂತೆ ಸಾಕಷ್ಟು ಜನ ವಿಮರ್ಶೆ ಮಾಡುವವರು ಇದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ಕೆಲಸ ಮಾಡುತ್ತೇನೆ’ ಎಂದರು.
‘ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಆಂಧ್ರಪ್ರದೇಶದಲ್ಲಿ, ವೃತ್ತಿ ಜೀವನ ಪ್ರಾರಂಭಿಸಿದ್ದು ತಮಿಳುನಾಡಿನಿಂದ. ಇವಾಗ ಇರುವುದು ತೆಲಂಗಾಣದಲ್ಲಿ. ಪ್ರತಿಯೊಂದು ಊರಿಗೆ ಅದರದ್ದೇಯಾದ ಮಹತ್ವವಿದೆ. ನಾನು ಎಲ್ಲವನ್ನೂ ಪ್ರೀತಿಸುತ್ತೇನೆ. ಆದರೆ, ಒಂದಕ್ಕೆ ಅಂಟಿಕೊಂಡಿರಲು ಇಷ್ಟಪಡುವುದಿಲ್ಲ’ ಎಂದರು.
‘ಆರ್ಆರ್ಆರ್ ಒಂದು ಪಕ್ಕಾ ಮನೋರಂಜನೆ ನೀಡುವ ಸಿನಿಮಾ. ಸಿನಿಮಾ ಮೂಲಕ ನಾನು ಯಾವುದೇ ಸಂದೇಶವನ್ನೂ ಯಾರಿಗೂ ಕೊಡಲು ಹೋಗುವುದಿಲ್ಲ’ ಎಂದರು.
ಕಾರ್ಯಕ್ರಮದಲ್ಲಿ ನಟ ಜೂನಿಯರ್ ಎನ್ಟಿಆರ್, ರಾಮ್ಚರಣ್, ವೆಂಕಟರಾಜು ಇದ್ದರು.