ಖ್ಯಾತ ನಟ ಅರ್ಜುನ್ ಸರ್ಜಾ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಒಪ್ಪಂದ’ ಚಿತ್ರವು ಫೆ.11ರಂದು ತೆರೆ ಕಾಣಲಿದೆ.ಸಂಜಯ್ ಗೊಡಾವತ್ ಅರ್ಪಿಸುವ ಎಸ್.ಎಫ್. ಎಂಟರ್ಟೈನರ್ ಲಾಂಛನದಲ್ಲಿ ಫರ್ಹಿನ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಎಸ್.ಎಸ್. ಸಮೀರ್ ನಿರ್ದೇಶಿಸಿದ್ದಾರೆ.
ಬಾಹರ್ ಫಿಲಂಸ್ ಮೂಲಕ ವಿತರಕ ಭಾಷಾ ಅವರು ಈ ಚಿತ್ರವನ್ನು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ‘ಕಾಂಟ್ರ್ಯಾಕ್ಟ್’ ಎಂಬ ಶೀರ್ಷಿಕೆಯಡಿ ಮುಹೂರ್ತ ಕಂಡಿದ್ದ ಈ ಸಿನಿಮಾ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಮೂರ್ನಾಲ್ಕು ತಿಂಗಳ ಹಿಂದೆ ಚಿತ್ರದ ಹಾಡುಗಳು ಬಿಡುಗಡೆಯಾದರೂ, ಚಿತ್ರ ಬಿಡುಗಡೆ ಯಾವಾಗ ಎನ್ನುವುದರ ಬಗ್ಗೆ ಚಿತ್ರತಂಡ ನಿರ್ಧರಿಸಿರಲಿಲ್ಲ. ಇದೀಗ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಹಲವು ವರ್ಷಗಳ ಬಳಿಕ ಈ ಸಿನಿಮಾ ಮುಖಾಂತರ ರಾಧಿಕಾ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಸೋನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಸುಭಾಶ್ ಆನಂದ್ ಅವರ ಸಂಗೀತ, ಅಮೀರ್ ಲಾಲ್ ಛಾಯಾಗ್ರಹಣ, ಪ್ರಭು ಅವರ ಸಂಕಲನ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ ಮಾಡಿದ್ದು ಕಿಕಾಸ್ ಕಾಳಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.