ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ: 4 ಸಿನಿಮಾಗಳ ಮೇಲೆ ವ್ಯತಿರಿಕ್ತ ಪರಿಣಾಮ?

Published 11 ಜೂನ್ 2024, 15:04 IST
Last Updated 11 ಜೂನ್ 2024, 15:04 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಬಂಧಿತರಾಗಿದ್ದು, ಈ ಪ್ರಕರಣ ಅವರ ಮುಂದಿನ ಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಚರ್ಚೆ ಚಿತ್ರೋದ್ಯಮದಲ್ಲಿ ನಡೆಯುತ್ತಿದೆ. 

ಸತತ ಸೋಲುಗಳ ಬಳಿಕ ಕಳೆದ ವರ್ಷ ತೆರೆ ಕಂಡ ‘ಕಾಟೇರ’ ಹಿಟ್‌ ಆಗಿತ್ತು. ಹೀಗಾಗಿ ಮತ್ತೆ ಬೇಡಿಕೆ ಹೆಚ್ಚಾಗಿತ್ತು. ಮೂಲಗಳ ಪ್ರಕಾರ ಅವರ ಬಳಿ ಸದ್ಯ ನಾಲ್ಕು ಸಿನಿಮಾಗಳಿವೆ.

‘ಡೆವಿಲ್‌’ ಇವರ 57ನೇ ಚಿತ್ರ. ಮಿಲನ ಪ್ರಕಾಶ್‌ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷದ ಅಂತ್ಯಕ್ಕೆ ತೆರೆಗೆ ತರುವ ನಿರ್ಮಾಪಕರು ಉದ್ದೇಶಿಸಿದ್ದಾರೆ.

ದರ್ಶನ ಜೊತೆಗೆ ‘ಕರಿಯ’ ಸಿನಿಮಾ ಮಾಡಿದ್ದ ನಿರ್ದೇಶಕ ಪ್ರೇಮ್‌ ಅವರೊಂದಿಗೆ 58ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಕೆವಿಎನ್‌ ನಿರ್ಮಾಣ ಸಂಸ್ಥೆಯ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ. ದರ್ಶನ್‌ ವೃತ್ತಿ ಬದುಕಿನಲ್ಲಿಯೇ ಬಹುದೊಡ್ಡ ಬಜೆಟ್‌ನ ಸಿನಿಮಾವಿದು ಎಂದು ಮೂಲಗಳು ಹೇಳಿವೆ.

‘ಕಾಟೇರ’ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಅವರಿಗೆ ತಮ್ಮ 59ನೇ ಸಿನಿಮಾವನ್ನು ನಿರ್ದೇಶಿಸಲು ದರ್ಶನ್‌ ಕಾಲ್‌ಶೀಟ್‌ ನೀಡಿದ್ದಾರೆ. ಈ ಚಿತ್ರವನ್ನು ಬಿ.ಸುರೇಶ್‌, ವಿ.ಹರಿಕೃಷ್ಣ ಅವರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ನಿರ್ಮಾಪಕ ಸೂರಪ್ಪ ಬಾಬು ಕೂಡ ಮುಂಗಡ ನೀಡಿದ್ದಾರೆ. ಇದು ದರ್ಶನ್‌ 60ನೇ ಸಿನಿಮಾ ಎಂಬ ಮಾಹಿತಿ ಇದೆ. ಇದಲ್ಲದೆ ಈ ಹಿಂದೆಯೇ ಮುಂಗಡ ನೀಡಿದ್ದ ಕೆಲವು ನಿರ್ಮಾಪಕರು ದರ್ಶನ್‌ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ ಎನ್ನುತ್ತಿದೆ ಅವರ ಆಪ್ತವಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT