ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರಿಗೆಈ ತಿಂಗಳಾಂತ್ಯಕ್ಕೆ ಭರಪೂರ ಮನರಂಜನೆ ನೀಡುವ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಆ.21ರಂದು ನೆಟ್ಫ್ಲಿಕ್ಸ್ ನಲ್ಲಿ ‘ಕ್ಲಾಸ್ ಆಫ್ 83’ ಹಿಂದಿ ಚಿತ್ರ ಬಿಡುಗಡೆಯಾಗುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಬಾಬಿ ಡಿಯೋಲ್ ನಟನೆಯ ಮೊದಲ ಚಿತ್ರವಿದು. ಈ ಚಿತ್ರ ಮುಖೇನ ಡಿಜಿಟಲ್ ವೇದಿಕೆಗೂ ಬಾಬಿ ಕಾಲಿಡುತ್ತಿದ್ದಾರೆ. ಇದನ್ನು ಅತುತ್ ಸಬರ್ವಾಲ್ ನಿರ್ದೇಶಿಸಿದ್ದಾರೆ. ಹುಸೈನ್ ಜೈದಿ ಅವರ ‘ದಿ ಕ್ಲಾಸ್ ಆಫ್ 83’ ಪುಸ್ತಕವನ್ನು ಆಧರಿಸಿದ ಚಿತ್ರವಿದು. ಶಾರೂಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಗೌರಿ ಖಾನ್ ಮತ್ತು ಗೌರವ್ ವರ್ಮಾ ಈ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೈಲರ್ ಇದೇ ಶುಕ್ರವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯೂ ಆಗುತ್ತಿದೆ.
ಅಕಾಡೆಮಿ ಕೆಲಸಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿ ಹಾಗೂ ಅಕಾಡೆಮಿ ಮುಖ್ಯಸ್ಥರೂ ಆದ ಡೀನ್ ವಿಜಯ್ ಸಿಂಗ್ (ಬಾಬಿ ಡಿಯೋಲ್)ಭ್ರಷ್ಟಾಚಾರ ಮತ್ತು ಭೂಗತ ಜಗತ್ತಿನ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆಯ ಭಾಗವಾಗಿ ಐವರು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಕಥಾಹಂದರದ ಚಿತ್ರವಿದು.ಬಾಬಿ ಡಿಯೋಲ್ ಜತೆಗೆ ಅನುಪ್ ಸೋನಿ, ಜಾಯ್ ಸೇನ್ಗುಪ್ತಾ, ವಿಶ್ವಜೀತ್ ಪ್ರಧಾನ್, ಭೂಪೇಂದ್ರ ಜಾದಾವತ್, ಹಿತೇಶ್ ಭೋಜರಾಜ್, ಸಮೀರ್ ಪರಂಜಪೆ, ನಿನಾದ್ ಮಹಾಜನಿ ಹಾಗೂ ಪೃಥ್ವಿಕ್ ಪ್ರತಾಪ್ ಬಣ್ಣ ಹಚ್ಚಿದ್ದಾರೆ.
‘ಕ್ಲಾಸ್ ಆಫ್ 83‘ ಬಿಡುಗಡೆಯಾದ ಒಂದು ವಾರಕ್ಕೆ ಬಾಬಿ ಡಿಯೋಲ್ ನಟನೆಯ ಮತ್ತೊಂದು ವೆಬ್ ಸರಣಿಡಿಜಿಟಲ್ ವೇದಿಕೆ ಪ್ರವೇಶಿಸುತ್ತಿದೆ. ಪ್ರಕಾಶ್ ಝಾ ನಿರ್ದೇಶಿಸಿರುವ ‘ಆಶ್ರಮ್’ ವೆಬ್ ಸರಣಿ ಎಂಎಕ್ಸ್ ಪ್ಲೇಯರ್ (MXPlayer)ನಲ್ಲಿ ಆ.28ರಂದು ಬಿಡುಗಡೆಯಾಗಲಿದೆ.
ಜೈಲು ಪಾಲಾದ ಧಾರ್ಮಿಕ ಗುರುಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಹೋಲುವಂತಹ ಪಾತ್ರವನ್ನು ‘ಆಶ್ರಮ್’ ವೆಬ್ ಸರಣಿಯಲ್ಲಿಬಾಬಿ ಡಿಯೋಲ್ನಿರ್ವಹಿಸುತ್ತಿದ್ದಾರೆ. ಈ ವೆಬ್ ಸರಣಿಯು ರಾಜಕೀಯ ವಿಡಂಬನೆಯ ಕಥಾಹಂದರ ಒಳಗೊಂಡಿದೆ. ರಾಮ್ ರಹೀಮ್ ಅವರ ವೈಯಕ್ತಿಕ ಜೀವನದ ಅನೇಕ ಮಗ್ಗುಲುಗಳನ್ನುಈ ಸರಣಿ ತೆರೆದಿಡಲಿದೆ ಎಂದು ಹೇಳಲಾಗುತ್ತಿದೆ. ಈ ವೆಬ್ ಸರಣಿಯಲ್ಲಿ ಅನುಪ್ರಿಯಾ ಗೋಯೆಂಕಾ ಪ್ರಮುಖಪಾತ್ರದಲ್ಲಿದ್ದಾರೆ. ಈ ಪಾತ್ರ ರಾಮ್ ರಹೀಮ್ ಅವರ ದತ್ತುಪುತ್ರಿ ಹನಿಪ್ರೀತ್ ಸಿಂಗ್ ಅವರ ಬದುಕಿಗೆ ಹತ್ತಿರವಾಗಿರಲಿದೆ ಎನ್ನುವ ಮಾತು ಕೇಳಿಬರುತ್ತಿವೆ. ಆದಿತಿ ಪೊಹಾಂಕರ್, ಅಧ್ಯಾಯನ್, ಸುಮ್ಮನ್ ಹಾಗೂ ದರ್ಶನ್ ಕುಮಾರ್ ತಾರಾಬಳಗವಿದೆ.
ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಸಡಕ್ 2’ ಇದೇ ತಿಂಗಳ 28ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವಿಐಪಿಯಲ್ಲಿ (DisneyPlusHSVIP) ಬಿಡುಗಡೆಯಾಗುತ್ತಿದೆ. 1991ರಲ್ಲಿ ಬಾಲಿವುಡ್ ಚಿತ್ರರಸಿಕರ ಮನಗೆದ್ದ ಸಾದಕ್ ಚಿತ್ರದ ಮುಂದುವರಿದ ಭಾಗವಿದು. ಈ ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಮತ್ತುವಿಶೇಷ್ ಫಿಲ್ಮ್ ಬ್ಯಾನರ್ನಡಿ ಮುಕೇಶ್ ಭಟ್ ಮತ್ತು ಮಹೇಶ್ ಭಟ್ ಜಂಟಿಯಾಗಿ ನಿರ್ಮಿಸಿದ್ದಾರೆ.
ಪ್ರಮುಖ ತಾರಾಬಳಗದಲ್ಲಿ ಸಂಜಯ್ ದತ್, ಪೂಜಾ ಭಟ್, ಆಲಿಯಾ ಭಟ್ ಮತ್ತು ಆದಿತ್ಯಾ ರಾಯ್ ಕಪೂರ್ ಇದ್ದಾರೆ. ಈ ಚಿತ್ರದ ಮುಖೇನ ಮಹೇಶ್ ಭಟ್ ಮತ್ತೆ ಎರಡು ದಶಕಗಳ ನಂತರ ನಿರ್ದೇಶನದ ಅಖಾಡಕ್ಕೆ ಮರಳುತ್ತಿದ್ದಾರೆ. ಹಾಗಾಗಿಯೇ ಸಿನಿ ಪರಿಣತರು ಈ ಚಿತ್ರದ ಮೇಲೆ ಕಣ್ಣು ನೆಟ್ಟಿರುವುದುವಿಶೇಷ. ಸಿನಿಪ್ರಿಯರ ನಿರೀಕ್ಷೆಗಳು ಸಹಜವಾಗಿಯೇ ಇಮ್ಮಡಿಯಾಗಿವೆ.
ರವಿ ಎಂಬಾತನ ಖಿನ್ನತೆ ಮತ್ತು ಆಶ್ರಮ ನಡೆಸುತ್ತಿದ್ದ ನಕಲಿ ಬಾಬಾನ ಮುಖವಾಡವನ್ನು ಕಳಚಲು ದೇವಮಾನವನ ಜತೆಗೆ ಹೊರಟ ಯುವತಿಗೆ ಆತ ಹೇಗೆ ನೆರವಾಗುತ್ತಾನೆ ಎನ್ನುವ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಊಟಿ, ಮುಂಬೈ, ಉತ್ತರಾಖಂಡ ಹಾಗೂ ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.