ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ವಚನ ಗಾಯನ

Last Updated 1 ಜುಲೈ 2020, 14:14 IST
ಅಕ್ಷರ ಗಾತ್ರ

‘ವಚನಗಳಲ್ಲಿ ಜಾತಿ, ಲಿಂಗ ತಾರತಮ್ಯ ಹಾಗೂ ಮೌಢ್ಯ ನಿರ್ಮೂಲನೆಗೆ ಪರಿಹಾರವಿದೆ. ಸರ್ವಕಾಲಕ್ಕೂ ವಚನಗಳು ಸಲ್ಲುತ್ತವೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಭಾನುವಾರ’ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್‌ನಲ್ಲಿ ನಡೆದ ವಚನಗಳ ಗಾಯನದಲ್ಲಿ ಅವರು ಮಾತನಾಡಿದರು.

‘ವಚನಗಳು ಸತ್ಯದ ಸಾಕಾರವನ್ನು ಎತ್ತಿಹಿಡಿಯುತ್ತವೆ. ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳು ತಮ್ಮ ಅಂತರಂಗ ಮತ್ತು ಬಹಿರಂಗ ಬದುಕಿನ ಬೀಜಸದೃಶವಾದ ಮಾತುಗಳನ್ನು ವಚನ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಜನಪದ ಸಾಹಿತ್ಯ ಸಮಾಜಮುಖಿಯಾದುದು. ಅಂತೆಯೇ, ವಚನ ಸಾಹಿತ್ಯವೂ ಸಮಾಜಮುಖಿಯಾಗಿದೆ’ ಎಂದು ಹೇಳಿದರು.

ಅನುಭವ ಮಂಟಪದಲ್ಲಿ ತಳವರ್ಗದ ಕಾಯಕ ಜೀವಿಗಳು ಪ್ರಶ್ನೋತ್ತರ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ಶ್ರೇಷ್ಠ ಅನುಭಾವಿಗಳಾದರು. ಅವರ ಅನುಭಾವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ ಎಂದರು. ಪ್ರಸ್ತುತ ಕೋವಿಡ್‌ –19 ಇಡೀ ನಾಡನ್ನು ಕಾಡುತ್ತಿದೆ. ಜನರು ಮತ್ತೆ ವಚನ ಸಾಹಿತ್ಯದತ್ತ ಮುಖ ಮಾಡಿ ಬದುಕಿನಲ್ಲಿ ಧೈರ್ಯ, ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಕಾಯಕ ಜೀವಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಆಶಿಸಿದರು.

ಅಲ್ಲಮ ಪ್ರಭುವಿನ ‘ಹಾದಿಯಲ್ಲಿ ನೀನೇ ಗುರುವಾದ ಕಾರಣ...’ ವಚನದ ಮೂಲಕ ಆರಂಭವಾದ ಗಾಯನ ಕಾರ್ಯಕ್ರಮ ಕೇಳುಗರ ಮನ ರಂಜಿಸಿತು. ಕಲಾವಿದರಾದ ದಾಕ್ಷಾಯಿಣಿ ಕೆ., ಜ್ಯೋತಿ ಕೆ., ನಾಗರಾಜ್ ಹೆಚ್.ಎಸ್. ಮತ್ತು ಶರಣ್ ಕುಮಾರ್ ಎನ್.ಪಿ. ವಚನಗಳ ಗಾನ ಸುಧೆ ಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT