ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಬಂತು ರಂಗಶಂಕರ ನಾಟಕೋತ್ಸವ: ಇಲ್ಲಿವೆ ಪ್ರದರ್ಶನಗೊಳ್ಳಲಿರುವ 5 ನಾಟಕಗಳ ವಿವರ

Ranga Shankara Theatre Festival
Last Updated 22 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್ ಕಾರಣಕ್ಕಾಗಿ ಕೆಲಕಾಲ ಸ್ಥಗಿತವಾಗಿದ್ದ ರಂಗಚಟುವಟಿಕೆಗಳು ನಗರದಲ್ಲಿ ಪುನರಾರಂಭವಾಗಿದ್ದು, ರಂಗಶಂಕರದ ನಾಟಕೋತ್ಸವ ಮತ್ತೆ ಮರಳಿ ಬಂದಿದೆ. ಈ ವರ್ಷ 17ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ರಂಗಶಂಕರದಲ್ಲಿ ಇದೇ ಅ. 27ರಿಂದ 31ರವರೆಗೆ ಐದು ನಾಟಕಗಳು ಪ್ರದರ್ಶನವಾಗಲಿವೆ.

ರಂಗದ ಮೇಲೆ ಭೌತಿಕವಾಗಿ ಅಥವಾ ಡಿಜಿಟಲ್ ಎರಡೂ ರೂಪದಲ್ಲಿ ಈ ಬಾರಿಯ ನಾಟಕೋತ್ಸವ ನಡೆಯುತ್ತಿರುವುದು ವಿಶೇಷ.

‘ಜೀವಂತಿಕೆಯಿಂದಿರುವುದು’ ಅಥವಾ ‘ಜೀವಂತವಾಗಿ ಉಳಿಯುವುದು’ ಈ ಬಾರಿ ನಾಟಕೋತ್ಸವ ಮೂಲ ಉದ್ದೇಶವಾಗಿದೆ. ನಮ್ಮ ಕಲೆಗಳನ್ನು ಹಂಚಿಕೊಳ್ಳುವುದು, ಸಂಭ್ರಮಿಸುವುದು, ಆಚರಿಸುವುದು ಸೇರಿದಂತೆ ಜೀವಂತಿಕೆ ಅನ್ನುವ ಪದಕ್ಕೆ ಹಲವು ಆಯಾಮಗಳಿವೆ. ಈ ಬಾರಿಯ ನಾಟಕೋತ್ಸವದಲ್ಲಿ ನಾವು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿರುವ ಕಥೆಗಳು ಸಂತೋಷ, ದುಃಖ, ಚಿಂತನೆ ಮತ್ತು ಸತ್ಯವನ್ನು ಬೆಳಗಿಸುವ ಮೂಲಕ ಪ್ರೇಕ್ಷಕರನ್ನು ಜಗತ್ತಿನೆಡೆಗೆ ಸೆಳೆಯುವಂಥವು’ ಎಂದು ರಂಗಶಂಕರದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಕಲಾತ್ಮಕ ಸಲಹೆಗಾರರಾದ ಆರುಂಧತಿ ನಾಗ್ ಹೇಳುತ್ತಾರೆ.

ರಂಗಶಂಕರ 17ನೇ ವರ್ಷದ ಸಂಭ್ರಮದಲ್ಲಿರುವುದರಿಂದ ಈ ಬಾರಿ ರಂಗಶಂಕರದ ವಾಸ್ತುಶಿಲ್ಪ ಮತ್ತು ಅದರ ಇತಿಹಾಸ ಕುರಿತು ಕಟ್ಟಡದ ಅಲ್ಲಲ್ಲಿ ಸಣ್ಣಸಣ್ಣ ತುಣುಕುಗಳನ್ನು ಪ್ರದರ್ಶಿಸಲಾಗುತ್ತದೆ. 5 ದಿನಗಳ ಕಾಲ ನಡೆಯುವ ನಾಟಕೋತ್ಸವದಲ್ಲಿ ವಿಭಿನ್ನ ವಿಷಯಗಳ ಕುರಿತು 5 ನಾಟಕಗಳು ಪ್ರೇಕ್ಷಕರನ್ನು ರಂಜಿಸಲಿವೆ ಎನ್ನುತ್ತಾರೆ ಆಯೋಜಕರು.

1 ಕಾಂತ ಮತ್ತು ಕಾಂತ (‌ರಚನೆ, ನಿರ್ದೇಶನ: ಸುರೇಂದ್ರನಾಥ್ ಎಸ್. ತಂಡ: ಸಂಕೇತ್, ಅವಧಿ: 90 ನಿಮಿಷ)

ರಂಗಭೂಮಿಯ ಹಿರಿಯ ನಟರಿಬ್ಬರ ಕುರಿತ ಕಥೆಯನ್ನೊಳಗೊಂಡಿರುವ ನಾಟಕ ‘ಕಾಂತ ಮತ್ತ ಕಾಂತ’. ಪ್ರತಿಭಾವಂತರಾಗಿರುವ ಈ ಇಬ್ಬರು ನಟರಿಗೆ ಅಹಂಕಾರವೇ ದೊಡ್ಡ ಸಮಸ್ಯೆ. ಒಂದು ಕಾಲದಲ್ಲಿ ರಂಗದ ಮೇಲೆ ಜನಪ್ರಿಯ ಜೋಡಿಯಾಗಿದ್ದ ಈ ಇಬ್ಬರೂ ದೀರ್ಘಕಾಲದಿಂದ ಮಾತು ಬಿಟ್ಟು, ಪರಸ್ಪರ ಭೇಟಿಯೂ ಆಗಿರುವುದಿಲ್ಲ. 16 ವರ್ಷಗಳ ಕಾಲ ಪರಸ್ಪರ ದೂರವಿದ್ದ ಈ ರಂಗಜೋಡಿಗೆ ವೇದಿಕೆಯ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳಬೇಕೆಂಬ ತುಡಿತ ಒಳಗೊಳಗೇ ಇರುತ್ತದೆ. ಆಕಸ್ಮಿಕವೆಂಬಂತೆ ಇಬ್ಬರೂ ಒಮ್ಮೆ ಒಟ್ಟಿಗೆ ಒಂದೇ ವೇದಿಕೆಯೇರಿದಾಗ ಅವರಿಬ್ಬರ ನಡುವೆ ಮತ್ತು ಜುಗಲ್ ಬಂದಿ ಆಯಿತೇ ಎಂಬುದು ನಾಟಕದ ಕುತೂಹಲದ ಕೇಂದ್ರಬಿಂದು.

2 ಲಾಕ್‌ಡೌನ್ (ರಚನೆ, ನಿರ್ದೇಶನ: ಅಭಿಷೇಕ್ ಅಯ್ಯಂಗಾರ್, ತಂಡ: ವೀಮೂವ್ ಥಿಯೇಟರ್ ಬೆಂಗಳೂರು. ಅವಧಿ: 50–60 ನಿಮಿಷ)

‘ಲಾಕ್‌ಡೌನ್’ ನಾಟಕವು ನಗರ, ಗ್ರಾಮೀಣ ಮತ್ತು ಅಂತರರಾಷ್ಟ್ರೀಯ ಪರಿಸರ ವ್ಯವಸ್ಥೆಯಲ್ಲಿನ ಸವಾಲುಗಳ ಕಥೆಯನ್ನು ಹೊಂದಿದೆ. ನಾಲ್ಕ ಕಥೆಗಳ ಸಂಕಲನದ ಒಟ್ಟು ರೂಪವಾಗಿರುವ ಈ ನಾಟಕವು ಸಂಬಂಧಗಳ ಮಹತ್ವವನ್ನು ಸಾರುತ್ತದೆ. ಅನಿಶ್ಚಿತತೆಯ ಸಮಯದಲ್ಲಿ ಸಂಬಂಧವು ಹೇಗೆ ರೂಪಿತವಾಗುತ್ತದೆ ಎನ್ನುವುದನ್ನು ಮಗಳು–ಮಲತಾಯಿ, ನವವಿವಾಹಿತ ಜೋಡಿ, ದತ್ತು ಮೊಮ್ಮಗ ಮತ್ತು ಒಂಟಿ ಹೆಂಡತಿಯ ಕಥೆಯ ಮೂಲಕ ಅನಾವರಣಗೊಳಿಸುತ್ತದೆ.

3 ಜುಂಡ್‌ (ಹಿಂದಿನಾಟಕ) (ರಚನೆ, ನಿರ್ದೇಶನ: ಚಾಣಕ್ಯ ವ್ಯಾಸ್, ತಂಡ: ಭಾರತೀಯ ಮೇಳ ಬೆಂಗಳೂರು, ಅವಧಿ: 60–70 ನಿಮಿಷ)

‘ಜುಂಡ್’ ಹಿಂದಿ ನಾಟಕ : ಸ್ಟ್ರಿಪ್‍ಟೀಸ್, ಸ್ಲಾವೊಮಿರ್ ವ್ರೋಜೆಕ್ ಎನ್ನುವ ಎರಡು ಕೃತಿಗಳು ಮತ್ತು ಗುಜರಾತಿ ಲೇಖಕ ಘನಶ್ಯಾಮ್ ದೇಸಾಯಿ ಅವರ ‘ತೋಡು’ ಸಣ್ಣ ಕಥೆಯನ್ನೊಳಗೊಂಡಿರುವ ನಾಟಕ. ಹೊರಗಿನ ಅಪರಿಚಿತ ಮತ್ತು ಅಪಾಯಕಾರಿ ಘಟನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಮುಚ್ಚಿದ ಕೋಣೆಗೆ ಬಲವಂತವಾಗಿ ಬಂದ ಎರಡು ಪಾತ್ರಗಳ ಸುತ್ತ ನಾಟಕ ಕೇಂದ್ರೀಕೃತವಾಗಿದೆ.

4 ಕಾಮರೂಪಿಗಳು (ರಂಗರೂಪ, ನಿರ್ದೇಶನ: ಗಣೇಶ್ ಮಂದಾರ್ತಿ, ತಂಡ: ಸಂಚಯ ಬೆಂಗಳೂರು, ಅವಧಿ: 75 ನಿಮಿಷ)

‘ಕಾಮರೂಪಿಗಳು’ ನಾಟಕ ರಾಮಾಯಣದ ಅಮೂರ್ತವಾಗಿದ್ದು, ಶೂರ್ಪನಖಿಯ ವಿಘಟನೆಯಿಂದ ಆರಂಭವಾಗಿ ಜಟಾಯುವಿನ ಮರಣದವರೆಗೂ ಘಟನೆಗಳನ್ನು ಹೊಂದಿರುವದ್ದು.

5 ಹುಂಕರೋ (ಮಾರ್ವಾಡಿ, ಹಿಂದಿ, ಹರಿಯಾಣ್ವಿ): ರಚನೆ: ವಿಜಯಧನ್ ದೇಥಾ, ನಿರ್ದೇಶನ: ಮೋಹಿತ್ ಟಾಕಲ್ಕರ್, ಅರವಿಂದ್ ಚರಣ್. ತಂಡ: ಉಜಾಗರ್ ನಾಟಕೀಯ ಸಂಘ, ಜೈಪುರ, ಅವಧಿ: 85ನಿಮಿಷ)

‘ಹುಂಕರೋ’ ನಾಟಕ ಸ್ಲಾವೊಮಿರ್ ಮ್ರೋಜೆಕ್ ಅವರ ಕಿರು ನಾಟಕ. ಮೂರು ಕಥೆಗಳನ್ನೊಳಗೊಂಡಿರುವ ಈ ನಾಟಕವು ಭರವಸೆಯನ್ನು ಹುಟ್ಟು ಹಾಕುತ್ತದೆ ಮತ್ತು ಭರವಸೆಯಿಲ್ಲದ ಜೀವನವನ್ನು ಹೇಗೆ ಉಳಿಸಿಕೊಳ್ಳುವುದು ಅಸಾಧ್ಯ ಎಂಬ ಕುರಿತು ಹೇಳುತ್ತದೆ.

ಎಲ್ಲಾ ನಾಟಕಗಳು ರಂಗಶಂಕರದ ಮುಖ್ಯ ವೇದಿಕೆಯಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನವಾಗಲಿವೆ. ಟಿಕೆಟ್ ದರ ₹ 200

ಈ ನಾಟಕಗಳ ಜೊತೆಗೆ ರಂಗಶಂಕರದ ವಿವಿಧ ಸ್ಥಳಗಳಲ್ಲಿ ಪ್ರತಿದಿನ ಸಂಜೆ ಸಣ್ಣ ಗುಂಪಿನ ಪ್ರೇಕ್ಷಕರಿಗೆ ಕಿರು ಪ್ರದರ್ಶನಗಳು ನಡೆಯುತ್ತವೆ ಮತ್ತು ಅಂಜು ಕೆಫೆಯಲ್ಲಿ ಆಹಾರ ಮತ್ತು ಇನ್ನೂ ಅನೇಕ ಸಂವಾದಾತ್ಮಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಿಗೆ ಪ್ರವೇಶ ದರ ₹ 100. ಒಂದು ಪ್ರದರ್ಶನವು 10ರಿಂದ 20 ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT