ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 100 ದಿನಗಳನ್ನು ಮುಗಿಸಿದೆ. ಕೋವಿಡ್ನಿಂದ ಅರ್ಧಕ್ಕೆ ನಿಂತಿದ್ದ ಶೋನ ಎರಡನೇ ಆರಂಭವಾಗಿರುವುದರಿಂದ ನೂರಕ್ಕೆ ಮುಗಿಸದೆ ಮತ್ತಷ್ಟು ದಿನ ಮುಂದುವರಿಸಲಾಗುತ್ತಿದೆ. ಈ ಮಧ್ಯೆ, ಮನೆಯ ಸದಸ್ಯರ ನಡುವಿನ ಪೈಪೋಟಿ ಮತ್ತಷ್ಟು ಹೆಚ್ಚಾಗಿದೆ. ತೀರಾ ಹತ್ತಿರದಲ್ಲಿದ್ದವರ ನಡುವೆಯೇ ಮನಸ್ತಾಪ, ಜಗಳಗಳು ಕಂಡುಬರುತ್ತಿವೆ.
ಉರುಡುಗ–ಅರವಿಂದ್ ನಡುವೆ ಕಲಹ: ಮನೆಯ ಜೋಡಿಹಕ್ಕಿಗಳಂತಿದ್ದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ನಡುವೆಯೇ ಟಾಸ್ಕ್ ವಿಚಾರವಾಗಿ ಕಲಹ ಏರ್ಪಟ್ಟಿದ್ದೆ. ಕೆಸರಿನಲ್ಲಿ ಮುತ್ತುಗಳನ್ನು ಹುಡುಕುವ ಟಾಸ್ಕ್ನಲ್ಲಿ ಗ್ಲೌಸ್ ಎತ್ತಿಕೊಳ್ಳಲು ಮೊದಲೇ ಕಾದು ನಿಂತಿದ್ದ ವೈಷ್ಣವಿ, ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ಅವರನ್ನು ಕೆಣಕಿದ ಅರವಿಂದ್, ನಿಯಮದ ಪ್ರಕಾರ ಆಟವಾಡಬೇಕೆಂದು ಹೇಳ್ತೀರಲ್ಲ. ನೀವ್ಯಾಕೆ ಇಷ್ಟು ಬೇಗ ಹೋಗಿ ನಿಂತಿದ್ದೀರಾ? ಎಂದು ಪ್ರಶ್ನಿಸಿದರು.
ಅರವಿಂದ್ ಮಾತಿಗೆ ಪ್ರತಿಕ್ರಿಯಿಸಿದ ಉರುಡುಗ, ನೀವೂ ಬಂದು ನಿಂತುಕೊಳ್ಳಬಹುದಿತ್ತು. ನೀವು ಬರಲಿಲ್ಲ. ಅದು ನಿಮ್ಮ ಸಮಸ್ಯೆ. ನಾವು ಯಾಕೆ ನಿಲ್ಲಬಾರದು? ಎಂದು ಖಾರವಾಗಿ ಉತ್ತರಿಸಿದರು. ಇದರಿಂದ ಕೋಪಗೊಂಡ ಅರವಿಂದ್ ಅವರು, ದಿವ್ಯಾ ವಿರುದ್ಧ ಗೊಣಗಾಡಿದರು. ಈ ಸಂದರ್ಭ ಬಿಸಿಯೇರಿದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ದಿನ ರಾತ್ರಿ ಮಲಗುವಾಗ ವಿಶ್ ಮಾಡುತ್ತಿದ್ದ ಅರವಿಂದ್ ನಿನ್ನೆ ಕೋಪದಲ್ಲೇ ದಿವ್ಯಾ ಜೊತೆ ಮಾತಾಡಲು ಸದ್ಯಕ್ಕೆ ಮೂಡಿಲ್ಲ ಎಂದು ಹೇಳಿ ಕಳುಹಿಸಿದರು.
ಮತ್ತೆ ಮುಂದುವರಿದ ಜಗಳ: ಅವರಿಬ್ಬರ ಜಗಳ ಅಷ್ಟಕ್ಕೆ ನಿಲ್ಲದೆ ಮತ್ತೆ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. ಅದು ನನ್ನ ಪ್ರಯತ್ನ ನಾನು ಹೋಗಿ ನಿಂತುಕೊಂಡಿದೆ. ನೀವೂ ಬೇಕಾದರೆ ಬಂದು ನಿಲ್ಲಬಹುದಿತ್ತು ಎಂದು ದಿವ್ಯಾ ಮತ್ತೆ ತಿರುಗೇಟು ಕೊಟ್ಟಿದ್ದಾರೆ. ಇದರಿಂದ ಕೆರಳಿದ ಅರವಿಂದ್, ಇನ್ನುಮುಂದೆ, ನಮ್ಮ ಆಟ ನಾವು ಆಡಬೇಕು. ಯಾರಿಗೂ ಅಡ್ವೊಕೆಸಿ ಮಾಡಬಾರದು. ಫೇರ್ ಗೇಮ್ ಆಡುವಂತೆ ಪ್ರಶಾಂತ್ ಅವರಿಗೆ ನಾನು ಹೇಳಿದ್ದು ತಪ್ಪಾಯಿತು ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
ಇನ್ನು, ಮನೆಯಲ್ಲಿ ಆಪ್ತರಾಗಿದ್ದ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ನಡುವೆಯೂ ಟಾಸ್ಕ್ ವಿಚಾರದಲ್ಲಿ ಮುನಿಸು ಶುರುವಾಗಿದೆ. ದಿವ್ಯಾ ಸುರೇಶ್ ನಿರ್ಧಾರಗಳ ಬಗ್ಗೆ ಮಂಜು ಅಸಮಾಧಾನ ಹೊರ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.