ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಗುಬ್ಬಚ್ಚಿ ದಿನ: ಕಾಂಕ್ರಿಟ್ ಕಾಡಿನಲ್ಲಿ ಕ್ಷೀಣಿಸಿದ ಚಿಂವ್ ಚಿಂವ್ ಸದ್ದು

ಆವಾಸ ಕುಗ್ಗಿ ಸಂತತಿಗೆ ಎದುರಾಗಿದೆ ಅಪಾಯ
Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಯಳಂದೂರು:ಗುಬ್ಬಿ ಗುಬ್ಬಿ ಗುಬ್ಬಚ್ಚಿ ಚಿಂವ್ ಚಿಂವ್ ಅಂತ ಒದರುತ್ತಿ ಪುಟ್ಟಗೂಡು ಕಟ್ಟಿಕೊಂಡು ಚಿಕ್ಕದಾಗಿ ಇರುತ್ತಿ...

ಡಾ.ಪ್ರಭು ಗಂಜಿಹಾಳ್ ಅವರ ಈ ಪುಟ್ಟ ಕವನ ಗುಬ್ಬಚ್ಚಿ ಜೀವನ ಶೈಲಿಯನ್ನು ಸರಳವಾಗಿ ಕಟ್ಟಿಕೊಡುತ್ತದೆ. ಸದಾ ಲವಲವಿಕೆಯಿಂದ ಕುಣಿಯುವ, ಜಾಗವೇ ಇಲ್ಲದ ಪುಟ್ಟಗೂಡಿನಲ್ಲಿ ಮೆರೆಯುವ ಇದರ ಸಂಭ್ರಮ ನಮ್ಮ ಬದಕಿಗೂ ಪಾಠವಾಗಬಲ್ಲದು. ಕಾಂಕ್ರೀಟ್‌ ಕಾಡಿನ ಭರಾಟೆಯಲ್ಲಿ ಅಪರೂಪವಾಗುತ್ತಿರುವ ಗುಬ್ಬಚ್ಚಿಗಳಿಗಾಗಿಯೇ ಮೀಸಲಾಗಿರುವ ದಿನ ‘ಮಾರ್ಚ್-20’.

ಕಾಣದ ಗುಬ್ಬಚ್ಚಿಗಳು:ತಾಲ್ಲೂಕಿನ ಸುತ್ತಮುತ್ತಲೂ ಗುಬ್ಬಚ್ಚಿಗಳು ಭತ್ತದ ಕಟಾವು ಮುಗಿಯುತ್ತಿದ್ದಂತೆ ಒಂದೊಂದೇ ಹುಲ್ಲಿನ ತುಂಡು ಹೆಕ್ಕುತ್ತ ಸಾಗುವ ತವಕ ಸೋಜಿಗವನ್ನು ಉಂಟುಮಾಡುತ್ತಿತ್ತು. ಮುಂಗಾರಿಗೂ ಮುನ್ನ ಗೂಡು ಕಟ್ಟಿಕೊಂಡು ಮರಿಗಳೊಡನೆ ಹಾಡುವ ಗಾನದ ಪುಳಕಕ್ಕೆ ಮಕ್ಕಳುಕಿವಿಯಾನಿಸಿ ಆಲಿಸುತ್ತಿದ್ದರು. ಬಿಸಿಲಿನ ಬೇಗೆ ಏರುತ್ತಿದ್ದಂತೆ ಪುಟ್ಟ ಪುಟ್ಟ ನೀರಿನ ಒರತೆಗಳ ಬಳಿ ಮಿಂದೆದ್ದು ಸಂಭ್ರಮಿಸುವ ಗುಬ್ಬಿಗಳ ಕಿಚಕಿಚ ಶಬ್ದ ಮಕ್ಕಳ ಸ್ಫೂರ್ತಿಗೆ ಕಾರಣವಾಗುತ್ತಿತ್ತು. ಗೆಳೆಯರ ಗುಂಪು ಹಿಗ್ಗುತ್ತ ಪುಟ್ಟ ಹಕ್ಕಿಯ ಹಾಡಿಗೆ ಧ್ವನಿಯಾಗುತ್ತಿತ್ತು. ಆದರೆ, ಇಂತಹ ಸಂತಸ-ಸಡಗರ ತಂದೊಡ್ಡುತ್ತಿದ್ದ ಗುಬ್ಬಚ್ಚಿ ಸಂಸಾರದ ಗುನುಗು, ಗುಂಗು ಈಗ ಕಾಣದಾಗಿದೆ. ಮಾನವ ಸಂಪರ್ಕಕ್ಕೆ ಸದಾ ಹಾತೊರೆಯುತ್ತಿದ್ದ ಗುಬ್ಬಚ್ಚಿಗಳ ಆವಾಸದಲ್ಲಿ ಆಗುತ್ತಿರುವ ಪಲ್ಲಟದಿಂದ ಇವುಗಳ ಸಂತತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದೆ.

ಗ್ರಾಮೀಣ ಭಾಗಗಳ ಮನೆಯಂಗಳಗಳಲ್ಲಿ ಈಗಲೂ ನೇಸರನ ಆಗಮನದೊಂದಿಗೆ ಚೆಲ್ಲಾಟ ಆಡುವ ಹಕ್ಕಿಗಳನ್ನು ಕಾಣಬಹುದು. ಅವುಗಳಲ್ಲಿ ಗುಬ್ಬಚ್ಚಿಗಳದ್ದೇ ಕಾರುಬಾರು. ಮುಂಜಾನೆ ಬಂದುಕಾಳು ಹೆಕ್ಕಿಪರಿಸರವನ್ನು ಸ್ವಚ್ಛಗೊಳಿಸುತ್ತವೆ. ಈಗ ಗುಂಪುಗಳಿಗೆ ಬದಲಾಗಿ ಬೆರಳೆಣಿಕೆಯಲ್ಲಿಆಗಮಿಸುತ್ತಿವೆ. ಬರುತ್ತಲೇ ಚಿಂವ್ ಚಿಂವ್ ಸಂಗೀತದ ಲಹರಿ ಹರಿಸುತ್ತವೆ. ತನ್ನಬಳಗಕ್ಕೆ ಬೇಕಾದ ಆಹಾರ ಅರಸುತ್ತದೆ. ಈಗಲೂ, ಭಯ ಇಲ್ಲದೆ ಜನ ಜಂಗುಳಿಯ ನಡುವೆ ಹಾದುಬರುವ ಗುಬ್ಬಚ್ಚಿಗಳ ದರ್ಶನ ನಿಸರ್ಗದ ಚಲುವನ್ನು ವಿಸ್ತರಿಸುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

ಕುಸಿದ ಆವಾಸ– ಹಿಗ್ಗಿದ ಸಿಮೆಂಟ್ ದಾರಿ: ಗುಬ್ಬಚ್ಚಿಗಳ ಆವಾಸ ಮಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಪಕ್ಷಿ ಸಂಶೋಧಕರು, ವೀಕ್ಷಕರು ಮತ್ತು ಪರಿಸರ ಪ್ರಿಯರು ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ.ಗ್ರಾಮೀಣ ಭಾಗಗಳಲ್ಲಿ ಧಾನ್ಯದ ಒಕ್ಕಣೆ ಯಾಂತ್ರೀಕರಣದಿಂದ ಕಾಳು, ಬೇಳೆಸಿಗುವುದೇ ಈ‌ಗ ಕಷ್ಟವಾಗಿದೆ. ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ಚೆಲ್ಲುತ್ತಿದ್ದ ದವಸ ಧಾನ್ಯಗಳನ್ನು ಸಿಮೆಂಟ್ ರಸ್ತೆಯಲ್ಲಿ ಹುಡುಕುವುದೇ ಸವಾಲಾಗಿದೆ.

ಗೋಣಿ ಚೀಲ ಹುಡುಕಿ ಆಹಾರ ಸೇವಿಸುತ್ತಿದ್ದ ದಿನಗಳು ಕಾಣೆಯಾಗಿವೆ. ಪ್ಲಾಸ್ಟಿಕ್ ಬ್ಯಾಗ್‌ಗಳ ಭರಾಟೆಯಿಂದ ದೈನಂದಿನಅಕ್ಕಿ-ರಾಗಿ ಇವುಗಳು ಹುಡುಕಾಟಕ್ಕೆ ನಿಲುಕದಾಗಿವೆ. ನಗರಗಳ ಮನೆ ನಿರ್ಮಾಣ ಶೈಲಿ ಗ್ರಾಮೀಣ ಪ್ರದೇಶಗಳ ರಸ್ತೆ, ಬಡವಾಣೆಗಳು ಕಾಂಕ್ರೀಟ್‌ನಿಂದ ಸಜ್ಜುಗೊಂಡು ನಿಸರ್ಗಸ್ನೇಹಿ ನೆಲೆಗಳು ಅಳಿಯುತ್ತಿವೆ. ಸಿಮೆಂಟ್ ಹಾದಿಗಳಲ್ಲಿ ಗಿಡ, ಮರ, ಬಳ್ಳಿಗಳುಅಸ್ತಿತ್ವ ಕಳೆದುಕೊಂಡು, ಗುಬ್ಬಿಗಳಿಗೆ ಸೂಕ್ತ ಸ್ಥಳಾವಕಾಶಕ್ಕೂ ಕಂಟಕವಾಗಿದೆ ಎನ್ನುತ್ತಾರೆ ಪಕ್ಷಿತಜ್ಞರು.

ಗುಬ್ಬಚ್ಚಿ ಉಳಿಸಲು ನಾವೇನು ಮಾಡಬಹುದು?
‘ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟುಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಕಟ್ಟಡಗಳ ಬಳಿಯೂ ಗೂಡುಗಳಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು. ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು. ಇದರಿಂದ ಹುಳು-ಹುಪ್ಪಟೆ ಹೆಚ್ಚು ದೊರೆತು ಗುಬ್ಬಚ್ಚಿಗಳ ಆವಾಸಹಿಗ್ಗುತ್ತದೆ. ಬೆಳೆಗಳನ್ನು ಕಾಡುವ ಕೀಟಗಳನ್ನು ಜೈವಿಕವಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ’ ಎಂದು ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT