ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ಹುಬ್ಬಳ್ಳಿಗೆ 2050ರ ಹೊತ್ತಿಗೆ ಜಲಕಂಟಕ!

2050ರ ಹೊತ್ತಿಗೆ ನೀರಿಗೆ ಸಂಬಂಧಿಸಿದ ಅಪಾಯ ತೀವ್ರ: ಡಬ್ಲ್ಯುಡಬ್ಲ್ಯುಎಫ್‌ ವರದಿ
Last Updated 2 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು 2050ರ ವೇಳೆಗೆ ‘ಜಲಕಂಟಕ’ಕ್ಕೆ ಒಳಗಾಗುವ ಅಪಾಯವಿದೆ. ಹವಾಮಾನ ವೈಪರೀತ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, 2050ರ ವೇಳೆಗೆ ಅತಿಹೆಚ್ಚು ನೀರಿನ ಕಂಟಕ (ವಾಟರ್ ರಿಸ್ಕ್‌) ಎದುರಿಸುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 30 ನಗರಗಳು ಸೇರಲಿವೆ. ಅವುಗಳಲ್ಲಿ ರಾಜ್ಯದ ಬೆಂಗಳೂರು ಮತ್ತು ಹುಬ್ಬಳಿ-ಧಾರವಾಡ ಸೇರಿವೆಎಂದು ವರ್ಲ್ಡ್‌ವೈಡ್‌ ಫಂಡ್‌ ಫಾರ್ ನೇಚರ್‌ (ಡಬ್ಲ್ಯುಡಬ್ಲ್ಯುಎಫ್‌) ಹೇಳಿದೆ.

ಡಬ್ಲ್ಯುಡಬ್ಲ್ಯುಎಫ್‌ನ ಜಲಕಂಟಕ ವಿಶ್ಲೇಷಣೆಯಲ್ಲಿ ಈ ಮಾಹಿತಿ ಇದೆ. ನೀರಿನ ಸಂಕಷ್ಟ ಎದುರಿಸಲಿರುವ ಭಾರತದ ನಗರಗಳಲ್ಲಿ ರಾಜಸ್ಥಾನದ ಜೈಪುರ ಮೊದಲ ಸ್ಥಾನದಲ್ಲಿದೆ. ಕೇರಳದ ಕಣ್ಣೂರು ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು 10 ಮತ್ತು ಹುಬ್ಬಳಿ-ಧಾರವಾಡ 16ನೇ ಸ್ಥಾನದಲ್ಲಿವೆ. 2020ರಲ್ಲಿ ನೀರಿನ ಕಂಟಕ ಎದುರಿಸುತ್ತಿರುವ ವಿಶ್ವದ ನೂರು ನಗರಗಳ ಪಟ್ಟಿಯಲ್ಲಿ ಭಾರತದ ಇಂದೋರ್ ಮಾತ್ರ ಇದೆ.

2050ರ ವೇಳೆಗೆ ನೀರಿನ ಸಮಸ್ಯೆಗೆ ಒಳಗಾಗುವ ಅಪಾಯ ಇರುವ ವಿಶ್ವದ ನೂರು ನಗರಗಳಲ್ಲಿ ಈಜಿಪ್ಟ್‌ನ ಅಲೆಕ್ಸಾಂಡ್ರಿಯ ಮೊದಲ ಸ್ಥಾನದಲ್ಲಿದೆ. ಚೀನಾದ 30 ನಗರಗಳು ಈ ಪಟ್ಟಿಯಲ್ಲಿ ಇವೆ.ಜಕಾರ್ತಾ, ಜೊಹಾನ್ಸ್‌ಬರ್ಗ್, ಇಸ್ತಾಂಬುಲ್, ಹಾಂಗ್‌ ಕಾಂಗ್, ಮೆಕ್ಕಾ, ರಿಯೊ ಡಿ ಜನೈರೊ ಮೊದಲಾದ ನಗರ
ಗಳು ಈ ಪಟ್ಟಿಯಲ್ಲಿ ಸೇರಿವೆ.ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಈ ನಗರಗಳು 2050ರ ವೇಳೆಗೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಲಿವೆ ಎಂದು ವಿಶ್ಲೇಷಣಾ ವರದಿಯಲ್ಲಿ ವಿವರಿಸಲಾಗಿದೆ.

ಈ 100 ನಗರಗಳಲ್ಲಿ ಈಗ 35 ಕೋಟಿಯಷ್ಟು ಜನರು ನೆಲೆಸಿದ್ದಾರೆ. ಈ ನಗರಗಳು ಆಯಾ ದೇಶ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. 2050ರ ವೇಳೆಗೆ ಈ ನಗರಗಳ ಜನಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ನೀರಿನ ಸಂಕಷ್ಟದ ಜತೆಗೆ ಜನ ಸಂಖ್ಯೆಯಲ್ಲೂ ಏರಿಕೆ ಆಗುವುದರಿಂದ ಪರಿಸ್ಥಿತಿ ಬಿಗಡಾಯಿಸಲಿದೆ. ಹೀಗಾಗಿ ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದು ಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ನಿರ್ವಹಣೆ ಅಗತ್ಯ

‘ಈ ನಗರಗಳು ಪದೇಪದೇ ಪ್ರವಾಹಕ್ಕೆ ಒಳಗಾಗುವುದನ್ನು, ನೀರಿನ ಕೊರತೆ ಎದುರಿಸುವುದನ್ನು ತಪ್ಪಿಸಲು ನೈಸರ್ಗಿಕವಾದ ಕ್ರಮಗಳನ್ನು ಕೈಗೊಳ್ಳಬೇಕು. ನಗರಗಳಲ್ಲಿ ನೀರಿನ ಮೂಲಗಳಾದ ಕೆರೆ-ಕಟ್ಟೆಗಳು, ಜೌಗು ಪ್ರದೇಶಗಳಲ್ಲಿ ಜಲಮರುಪೂರಣ ಮಾಡುವ ಕ್ರಮವು ಉಪಯೋಗಕ್ಕೆ ಬರಬಲ್ಲದು. ಈ ನಗರಗಳ ಭವಿಷ್ಯವನ್ನು ಮರುರೂಪಿಸುವ ಒಂದು ಅವಕಾಶ ನಮ್ಮ ಬಳಿ ಇದೆ’ ಎಂದು ಡಬ್ಲ್ಯುಡಬ್ಲ್ಯುಎಫ್‌ ಭಾರತದ ಕಾರ್ಯಕ್ರಮ ನಿರ್ದೇಶಕ ಡಾ.ಸೀಜಲ್ ವೋರಾ ಹೇಳಿದ್ದಾರೆ.


ಬಾಶೆಟ್ಟಿಹಳ್ಳಿ ಕೆರೆ ಸಂರಕ್ಷಣೆ ಮಾದರಿ

ನಗರ ಯೋಜನೆ, ಜಲಮೂಲಗಳ ಸಂರಕ್ಷಣೆ, ಜೌಗು ಪ್ರದೇಶಗಳ ಸಂರಕ್ಷಣೆ, ಜಲಮರುಪೂರಣದಂತಹ ಕ್ರಮಗಳನ್ನು ಒಳಗೊಂಡ ಸಮಗ್ರ ನೀರಿನ ನಿರ್ವಹಣೆ ಕಾರ್ಯಕ್ರಮವನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ರೂಪಿಸಬಹುದು. ಇದಕ್ಕಾಗಿ ಸರ್ಕಾರದ ಹಲವು ಸಂಸ್ಥೆಗಳು ಸಮನ್ವಯದಲ್ಲಿ ದುಡಿಯುವುದು ಅನಿವಾರ್ಯ. ಈ ಯೋಜನೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯೂ ಅತ್ಯಗತ್ಯ. ಬೆಂಗಳೂರಿನ ಬಾಶೆಟ್ಟಿಹಳ್ಳಿ ಕೆರೆ-ಜೌಗು ಪ್ರದೇಶ ಮತ್ತು ಇಂದೋರ್‌ನ ಶ್ರೀಪುರ ಕೆರೆ ಸಂರಕ್ಷಣೆ ಈ ಸ್ವರೂಪದ ಕ್ರಮಕ್ಕೆ ಉತ್ತಮ ಉದಾಹರಣೆ ಎಂದು ಡಬ್ಲ್ಯುಡಬ್ಲ್ಯುಎಫ್‌ ಹೇಳಿದೆ.

ಭಾರತದ 30 ನಗರಗಳು

ಜೈಪುರ, ಇಂದೋರ್, ಠಾಣೆ, ವಡೋದರಾ,ಶ್ರೀನಗರ,ರಾಜ್‌ಕೋಟ್, ಕೋಟಾ, ನಾಸಿಕ್, ವಿಶಾಖಪಟ್ಟಣ,ಬೆಂಗಳೂರು,ಕೋಲ್ಕತ್ತಾ,ಅಹಮದಾಬಾದ್, ಜಬಲ್‌ಪುರ,ಮುಂಬೈ, ಲಖನೌ, ಹುಬ್ಬಳಿ-ಧಾರವಾಡ,ನಾಗ್ಪುರ,ಚಂಡೀಗಡ,ಅಮೃತಸರ,ಲುಧಿಯಾನ,ಜಲಂಧರ್,ಪುಣೆ,ಧನಬಾದ್, ಭೋಪಾಲ್,ಗ್ವಾಲಿಯರ್,ಸೂರತ್,ದೆಹಲಿ,ಅಲೀಗಡ, ಕೋಯಿಕ್ಕೋಡ್, ಕಣ್ಣೂರು


- ಮಳೆ ನೀರಿನಿಂದಾಗುವ ಪ್ರವಾಹ ಮತ್ತು ಸಂಬಂಧಿತ ಅಪಾಯಗಳು, ದುಷ್ಪರಿಣಾಮಗಳು
- ನೀರಿನ ಕೊರತೆ, ಜಲಮೂಲಗಳ ನಾಶ, ಕುಡಿಯುವ ನೀರಿನ ಕೊರತೆ
- ನೀರಿನ ಕೊರತೆಯಿಂದ ಆಗುವ ಆರ್ಥಿಕ, ಸಾಮಾಜಿಕ ದುಷ್ಪರಿಣಾಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT