ಕ ನ್ನಡ ರಾಜ್ಯೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಸಂಕಲ್ಪ ಮಾಡಿದವರು ಬೀಜ ಬಾವುಟಗಳನ್ನು ಖರೀದಿಸಬಹುದು.
ಸೀಡ್ ಇಂಡಿಯಾ ಪೇಪರ್ ವಿಭಿನ್ನ ಮಾದರಿಯ ಪರಿಸರ ಸ್ನೇಹಿ ಬೀಜ ಬಾವುಟಗಳನ್ನು ತಯಾರಿಸಿದೆ. ಈ ಬಾವುಟ ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. ಅಷ್ಟೇ ಅಲ್ಲ, ಈ ಬಾವುಟದಲ್ಲಿ ವಿವಿಧ ಪ್ರಬೇಧದ ಬೀಜಗಳು ಇರಲಿವೆ. ಮಣ್ಣಿನಲ್ಲಿ ಕರಗುವಂತಹ ದಪ್ಪ ಪೇಪರ್ನ ಅಲ್ಲಲ್ಲಿ ಬೇರೆ ಬೇರೆ ಹೂವು, ಕಾಯಿಗಳ ಬೀಜವನ್ನು ಹುದುಗಿಸಿಡಲಾಗಿದೆ. ಈ ಕಾಗದದ ಬಾವುಟ ಭೂಮಿಯಲ್ಲಿ ಕರಗಿದ ನಂತರ ಅದರಲ್ಲಿನ ಬೀಜ ಮೊಳಕೆಯೊಡೆದು, ಗಿಡವಾಗಿ ಬೆಳೆಯುತ್ತದೆ.
ರೋಶನ್ ರೇ ಅವರು ಅನೇಕ ವರ್ಷಗಳಿಂದ ಇಂತಹ ಜೈವಿಕ ಬಾವುಟಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಕಳೆದ ಹಲವು ತಿಂಗಳಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ಜನರಿಗೆ ಈ ಬಾವುಟಗಳನ್ನು ಮಾರಾಟ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಬಾವುಟವನ್ನು ತಯಾರಿಸಿದ್ದಾರೆ.
‘ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಾವುಟಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಈ ಬಾವುಟಗಳು ರಸ್ತೆ ಬದಿಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿಯ ಒಡಲನ್ನು ಸೇರಿ ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಇದರಿಂದ ಎಲ್ಲಾ ರೀತಿಯ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸೀಡ್ ಬಾವುಟಗಳನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನನ್ನಲ್ಲಿ ಬಂದಿತು. ಈ ಜೈವಿಕ ಕಾಗದದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮವಾಗುವುದಲ್ಲದೇ, ನೀರನ್ನೂ ಸಹ ಉಳಿತಾಯ ಮಾಡಲಿವೆ. ಈ ಬಾವುಟದಲ್ಲಿ ಬಳಸುವ ಬಣ್ಣದ ಇಂಕ್ ಕೂಡ ಪರಿಸರಕ್ಕೆ ಯಾವುದೇ ಹಾನಿಕಾರಕವಲ್ಲ’ ಎಂದು ಸೀಡ್ ಇಂಡಿಯಾ ಪೇಪರ್ ಸಂಸ್ಥಾಪಕ ರೋಶನ್ ರೇ ವಿವರಣೆ ನೀಡುತ್ತಾರೆ.
ಬಾವುಟವನ್ನು ಬಳಸುವುದು ಹೇಗೆ?
ಬಾವುಟವನ್ನು ಬಳಕೆ ಮಾಡಿದ ನಂತರ 2-3 ದಿನ ನೀರಿನಲ್ಲಿ ನೆನೆಸಿಡಬೇಕು. ನಂತರ ಮಣ್ಣಿನಲ್ಲಿ ಹಾಕಬೇಕು. ಪ್ರತಿದಿನ ನೀರನ್ನು ಹಾಕಬೇಕು. ಹೀಗೆ ದಿನ ಕಳೆದಂತೆ ಕಾಗದ ಮಣ್ಣಿನಲ್ಲಿ ಕರಗುತ್ತದೆ ಮತ್ತು 4-5 ವಾರಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ.
ಈ ಬೀಜ ಬಾವುಟದ ಬೆಲೆ ₹10.
ಖರೀದಿಗೆ– ಸೀಡ್ ಇಂಡಿಯಾ ಪೇಪರ್, ರೇ ಇಂಟರ್ನ್ಯಾಷನಲ್. 164/9, ವಿವಿ ಪುರಂ, ಆರ್.ವಿ.ರಸ್ತೆ. ಸಂಪರ್ಕಕ್ಕೆ– 6364– 699837.
www.seedpaperindia.com
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.