ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಇಸ್ರೇಲ್‌ ದಾಳಿ– ಇರಾನ್‌ ಪ್ರತಿದಾಳಿ.. ಆತಂಕ ತಂದ ಪ್ರಾದೇಶಿಕ ಸಂಘರ್ಷ
ಆಳ–ಅಗಲ: ಇಸ್ರೇಲ್‌ ದಾಳಿ– ಇರಾನ್‌ ಪ್ರತಿದಾಳಿ.. ಆತಂಕ ತಂದ ಪ್ರಾದೇಶಿಕ ಸಂಘರ್ಷ
ಇರಾನ್‌ ಮತ್ತು ಇಸ್ರೇಲ್‌ ನಡುವಣ ಈ ಸಂಘರ್ಷ ನಿನ್ನೆ–ಮೊನ್ನೆಯದ್ದಲ್ಲ.
Published 14 ಏಪ್ರಿಲ್ 2024, 20:41 IST
Last Updated 14 ಏಪ್ರಿಲ್ 2024, 20:41 IST
ಅಕ್ಷರ ಗಾತ್ರ

ಇಸ್ರೇಲ್‌ ಮೇಲೆ ಇರಾನ್‌ ಶನಿವಾರ ಮಧ್ಯರಾತ್ರಿ ದಾಳಿ ನಡೆಸಿದಾಗ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಮೂರನೇ ಮಹಾಯುದ್ಧ ಆರಂಭವಾಗಿಯೇ ಹೋಯಿತು ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದರು. ಇರಾನ್‌ನ ದಾಳಿಯನ್ನು ಇಸ್ರೇಲ್‌ ವಿಫಲಗೊಳಿಸಿತು. ಇದು ಇರಾನ್‌ಗಾದ ಸೋಲು ಎಂದು ಒಂದೆಡೆ ಚರ್ಚೆಯಾಗುತ್ತಿದ್ದರೆ, ಯುದ್ಧ ಮುಂದುವರಿಸುವುದು ಇರಾನ್‌ಗೇ ಬೇಕಿರಲಿಲ್ಲ. ಹೀಗಾಗಿ ಇಂತಹ ದಾಳಿ ನಡೆಸಿದೆ ಎಂಬ ಚರ್ಚೆ ಇನ್ನೊಂದೆಡೆ. ಇರಾನ್‌ ಮತ್ತು ಇಸ್ರೇಲ್‌ ನಡುವಣ ಈ ಸಂಘರ್ಷ ನಿನ್ನೆ–ಮೊನ್ನೆಯದ್ದಲ್ಲ. ಅದರ ಇತಿಹಾಸ 1980ರ ದಶಕದವರೆಗೂ ಹೋಗುತ್ತದೆ. ಆದರೆ ಈ ಸಂಘರ್ಷದ ಕಾರಣ ಮಾತ್ರ ‘ಪ್ಯಾಲೆಸ್ಟೀನ್‌’. ಆ ಕಾರಣ ಬದಲಾಗಿಲ್ಲ. ಈಗಿನ ಸಂಘರ್ಷಕ್ಕೂ ಪ್ಯಾಲೆಸ್ಟೀನೇ ನೆವ.

––––––––

ಐರೋಪ್ಯ ಒಕ್ಕೂಟದಿಂದ ಹೊರದೂಡಲ್ಪಟ್ಟ ಯಹೂದಿಗಳಿಗೆ ಬ್ರಿಟನ್‌–ಫ್ರಾನ್ಸ್‌ ಈಗಿನ ಇಸ್ರೇಲ್‌ನಲ್ಲಿ (ಹಿಂದಿನ ಪ್ಯಾಲೆಸ್ಟೀನ್‌) ನೆಲೆ ಕಲ್ಪಿಸಿಕೊಟ್ಟವು. ಕೆಲವೇ ದಶಕಗಳಲ್ಲಿ ಯಹೂದಿಗಳು ಇಸ್ರೇಲ್‌ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋದರು. ಅದರ ಜತೆಯಲ್ಲೇ ಶಿಯಾ ಮುಸ್ಲಿಮರ ಪ್ರಾಬಲ್ಯದ ಪ್ಯಾಲೆಸ್ಟೀನ್‌ನ ವ್ಯಾಪ್ತಿ ಕುಗ್ಗುತ್ತಾ ಹೋಯಿತು. 1970ರ ದಶಕದ ವೇಳೆಗೆ ಅದು ಜೆರುಸಲೇಂನ ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾಪಟ್ಟಿಗೆ ಸೀಮಿತವಾಯಿತು. ಇಡೀ ಮಧ್ಯಪ್ರಾಚ್ಯದಲ್ಲಿ ಶಿಯಾ ಮುಸ್ಲಿಮರ ಎರಡನೇ ದೊಡ್ಡ ನಾಡಾಗಿದ್ದ ಪ್ಯಾಲೆಸ್ಟೀನ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗಿತ್ತು. ವಿಶ್ವದ ಬೇರಾವ ದೇಶವೂ ಆ ಬಗ್ಗೆ ಹೆಚ್ಚು ಗಮನ ಹರಿಸದಿದ್ದರೂ, ಅತೀಹೆಚ್ಚು ತಲೆಕೆಡಿಸಿಕೊಂಡದ್ದು ಇರಾನ್‌. ಏಕೆಂದರೆ ಪ್ಯಾಲೆಸ್ಟೀನ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮತ್ತು ಮಧ್ಯಪ್ರಾಚ್ಯದ ಅತ್ಯಂತ ದೊಡ್ಡ ಶಿಯಾ ಮುಸ್ಲಿಮರ ದೇಶವಾಗಿತ್ತು ಇರಾನ್‌. ಪ್ಯಾಲೆಸ್ಟೀನ್‌ ಅನ್ನು ಇಸ್ರೇಲ್‌ ಕುಗ್ಗಿಸುತ್ತಾ ಹೋದಂತೆ, ಅದರೊಟ್ಟಿಗೆ ಇರಾನ್‌ ಸಂಬಂಧ ಹಳಸುತ್ತಾ ಬಂದಿತು.

1979ರವರೆಗೂ ಪ್ಯಾಲೆಸ್ಟೀನ್‌ನ ವಿಚಾರದಲ್ಲಿ ಇರಾನ್‌ ಸರ್ಕಾರ ಬಹಿರಂಗವಾಗಿ ತನ್ನ ನಿಲುವನ್ನು ವ್ಯಕ್ತಪಡಿಸಿರಲೇ ಇಲ್ಲ. ಏಕೆಂದರೆ ಅದಕ್ಕೂ ಮುನ್ನ ಇರಾನ್‌ ಮುಖ್ಯಸ್ಥರಾಗಿದ್ದ ಶಾ ಮೊಹಮ್ಮದ್ ರೆಜಾ ಪಹ್ಲಾವಿ ಇಸ್ರೇಲ್‌ನೊಟ್ಟಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದರು. ಆದರೆ 1979ರಲ್ಲಿ ಶಾ ಅವರನ್ನು ಅಧಿಕಾರದಿಂದ ಕಿತ್ತೊಗೆದ ಶಿಯಾ ಧಾರ್ಮಿಕ ನಾಯಕ ಅಯಾತ್‌–ಉಲ್ಲಾ–ಅಲ್‌ ಖಮೆನಿ, ಇಸ್ರೇಲ್‌ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದರು. ತನ್ನನ್ನು ತಾನು ಇರಾನ್‌ನ ಪರಮೋಚ್ಚ ನಾಯಕ ಎಂದು ಘೋಷಿಸಿಕೊಂಡಿದ್ದ ಖಮೆನಿ, ‘ಪ್ಯಾಲೆಸ್ಟೀನ್‌ ಅನ್ನು ಬಿಡುಗಡೆಗೊಳಿಸುವುದು ನಮ್ಮ ಧ್ಯೇಯ. ಅದರಲ್ಲೇ ಇಸ್ರೇಲ್‌ನ ಸಾವು ಅಡಗಿದೆ’ ಎಂದು ಆಗ ಘೋಷಿಸಿದ್ದರು. 

ಅಂತಹ ಘೋಷಣೆಯ ನಂತರವೂ ಎರಡೂ ದೇಶಗಳ ಮಧ್ಯೆ ನೇರಾನೇರ ಸಂಘರ್ಷ ನಡೆದಿರಲಿಲ್ಲ. ಬದಲಿಗೆ ಇರಾನ್‌–ಇರಾಕ್‌ ಯುದ್ಧದಲ್ಲಿ, ಕುವೈತ್ ಯುದ್ಧದಲ್ಲಿ ಅಮೆರಿಕವು ಇಸ್ರೇಲ್‌ ಮೂಲಕ ಇರಾನ್‌ಗೆ ಯುದ್ಧೋಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿತ್ತು. ಇಸ್ರೇಲ್‌ ಸಹ ಇರಾನ್‌ನಿಂದ ಕಚ್ಚಾತೈಲವನ್ನು ದೊಡ್ಡ ಪ್ರಮಾಣದಲ್ಲೇ ಖರೀದಿಸಿತ್ತು. ಆದರೆ ಪರಸ್ಪರ ಸಂಬಂಧ ಮಾತ್ರ ಸುಧಾರಿಸಿರಲಿಲ್ಲ.ಇರಾಕ್‌ ವಿರುದ್ಧದ ಯುದ್ಧದ ಭಾಗವಾಗಿ ಅಮೆರಿಕವು ಇರಾನ್‌ ಅನ್ನು ಬಳಸಿಕೊಂಡಿತ್ತೇ ವಿನಾ, ಇರಾನ್‌ನೊಟ್ಟಿಗೆ ಅಮೆರಿಕದ ಸಂಬಂಧವೂ ಚೆನ್ನಾಗಿರಲಿಲ್ಲ. ಪ್ಯಾಲೆಸ್ಟೀನ್‌ನ ಪರವಾಗಿ ಇರಾನ್‌ ಪದೇ–ಪದೇ ಮಾತನಾಡುತ್ತಿದ್ದರೆ, ಅಮೆರಿಕವು ಇಸ್ರೇಲ್‌ನ ಪರವಾಗಿ ನಿಂತಿತು. ಈ ಕಾರಣದಿಂದ ಅಮೆರಿಕ–ಇರಾನ್‌ನ ಸಂಬಂಧ ಮತ್ತಷ್ಟು ಹಳಸಿತು. ಖಮೆನಿಯಂತೂ ಒಮ್ಮೆ, ‘ಅಮೆರಿಕವು ದೊಡ್ಡ ಸೈತಾನ್‌, ಇಸ್ರೇಲ್‌ ಮರಿ ಸೈತಾನ್‌’ ಎಂದು ಕರೆದಿದ್ದರು.

ಸುನ್ನಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದ ಮಧ್ಯಪ್ರಾಚ್ಯದಲ್ಲಿ ಶಿಯಾಗಳ ಪ್ಯಾಲೆಸ್ಟೀನ್‌ನ ರಕ್ಷಣೆಗೆ ಬೇರೆ ದೇಶಗಳು ಬರಲಿಲ್ಲ. ಆ ಪರಿಸ್ಥಿತಿಯನ್ನು ಬೇರೆ ರೀತಿ ನಿರ್ವಹಿಸಲು ಮುಂದಾದ ಇರಾನ್‌, ಇಸ್ರೇಲ್‌ ನೆರೆಯ ದೇಶಗಳಲ್ಲಿ ಬಂಡುಕೋರರನ್ನು ಬೆಳೆಸಿತು. ಲೆಬನಾನ್‌ನಲ್ಲಿ ಹಿಜಬುಲ್ಲಾ, ಯೆಮನ್‌ನಲ್ಲಿ ಹುತಿ ಮತ್ತು ಗಾಜಾಪಟ್ಟಿಯಲ್ಲಿ (ಪಶ್ಚಿಮ ಪ್ಯಾಲೆಸ್ಟೀನ್‌) ಹಮಾಸ್‌ ಬಂಡುಕೋರರನ್ನು ಬೆಳೆಸಿತು. ಈ ಬಂಡುಕೋರ ಗುಂಪುಗಳಿಗೆ ಹಣಕಾಸು, ಶಸ್ತ್ರಾಸ್ತ್ರ ಪೂರೈಕೆ ಮತ್ತು ತರಬೇತಿ ನೀಡಿತು. ಇಸ್ರೇಲ್‌ ಮೇಲೆ ಇರಾನ್‌ ನೇರವಾಗಿ ದಾಳಿ ನಡೆಸದೆ, ಈ ಬಂಡುಕೋರರ ಮೂಲಕ ದಾಳಿ ನಡೆಸುತ್ತಿತ್ತು. ಅದಕ್ಕೆ ಇಸ್ರೇಲ್‌ ಪ್ರತಿದಾಳಿ ನಡೆಸುತ್ತಿತ್ತು. ಸರಿಸುಮಾರು 40–45 ವರ್ಷದವರೆಗೆ ಇರಾನ್‌ ಮತ್ತು ಇಸ್ರೇಲ್‌ ಇದೇ ಸ್ವರೂಪದ ತೆರೆಮರೆಯ ಯುದ್ಧ ನಡೆಸುತ್ತಿದ್ದವು. 2023ರ ಅಕ್ಟೋಬರ್‌ನಲ್ಲಿ ಹಮಾಸ್‌ ಬಂಡುಕೋರರು ಇಸ್ರೇಲ್‌ನ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದರ ಹಿಂದೆಯೂ ಇರಾನ್‌ನದ್ದೇ ಕೈವಾಡವಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿತ್ತು. ಇಸ್ರೇಲ್‌ ಗಾಜಾಪಟ್ಟಿಯ ಮೇಲೆ ವಿಧ್ವಂಸಕಾರಿ ಯುದ್ಧ ಆರಂಭಿಸಿತು, ಅದಿನ್ನೂ ನಿಂತಿಲ್ಲ.

ಇಸ್ರೇಲ್‌ನ ಯುದ್ಧವನ್ನು ಬಹಿರಂಗವಾಗಿಯೇ ಖಂಡಿಸಿದ ಇರಾನ್‌ ಶನಿವಾರದವರೆಗೂ ತೆರೆಮರೆಯ ಯುದ್ಧಕ್ಕೇ ಕಟ್ಟುಬಿದ್ದಿತ್ತು. ಹಿಜಬುಲ್ಲಾ ಬಂಡುಕೋರರು ಇಸ್ರೇಲ್‌ನ ಗಡಿಯಲ್ಲಿ ನಿಂತು ದಾಳಿ ನಡೆಸುತ್ತಿದ್ದರೆ, ಹುತಿ ಬಂಡುಕೋರರು ಇಸ್ರೇಲ್‌ ಮತ್ತು ಅದರ ಮಿತ್ರರಾಷ್ಟ್ರಗಳ ಸರಕು ಸಾಗಣೆ ಹಡಗುಗಳ ದಾಳಿ ನಡೆಸಲಾರಂಭಿಸಿದ್ದರು. ಇಸ್ರೇಲ್‌ ಸಹ ಪ್ರತಿದಾಳಿ ನಡೆಸುತ್ತಲೇ ಇತ್ತು. ಆದರೆ ಈ ತೆರೆಮರೆಯ ಯುದ್ಧಕ್ಕೆ ತಿಲಾಂಜಲಿ ಇಟ್ಟು ನೇರ ಯುದ್ಧಕ್ಕೆ ಮುಂದಾಗಿದ್ದು ಇದೇ ಇಸ್ರೇಲ್‌. ಇದೇ ಏಪ್ರಿಲ್‌ 1ರಂದು ಇಸ್ರೇಲ್‌ನ ಪಡೆಗಳು, ಸಿರಿಯಾದ ಡಮಾಸ್ಕಸ್‌ನ ದಕ್ಷಿಣದಲ್ಲಿದ್ದ ಇರಾನ್‌ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಇರಾನ್‌ ಸೇನಾ ಕಮಾಂಡರ್‌, ಪ್ರಮುಖ ಸೇನಾಧಿಕಾರಿಗಳು ಸೇರಿ ಏಳು ಜನರು ಮೃತಪಟ್ಟಿದ್ದರು. ಆ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಖಮೆನಿ ಅಂದೇ ಘೋಷಿಸಿದ್ದರು. ಅದರ ಭಾಗವಾಗಿಯೇ ಶನಿವಾರ ಇರಾನ್‌ ದಾಳಿ ನಡೆಸಿದ್ದು. ಆ ದಾಳಿಯನ್ನು ಇಸ್ರೇಲ್‌ ವಿಫಲಗೊಳಿಸಿದೆ. ಆದರೆ ಮತ್ತೆ ದಾಳಿಯ ಬೆದರಿಕೆ ಒಡ್ಡಿದೆ. ಹೀಗಾಗಿ ಯುದ್ಧದ ಕಾರ್ಮೋಡ ಇನ್ನೂ ಚದುರಿಲ್ಲ.

ಯುದ್ಧವನ್ನು ತಡೆಯಿತೇ ಯುದ್ಧದ ಭೀತಿ...

ಇದೇ ಶನಿವಾರ ಅಥವಾ ಭಾನುವಾರ ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ್ದರು. ಆ ದಾಳಿಯೊಂದಿಗೆ ಮೂರನೇ ವಿಶ್ವಯುದ್ಧ ಆರಂಭವಾಗಿಯೇ ಬಿಡುತ್ತದೆ ಎಂದು ಕಳವಳವೂ ವ್ಯಕ್ತವಾಗಿತ್ತು. ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಅದರ ಮಿತ್ರ ರಾಷ್ಟ್ರಗಳೇ ಹೇಳಿಕೆ ನೀಡಿದ್ದವು. ಅಮೆರಿಕ ಮತ್ತು ಬ್ರಿಟನ್‌ನ ನಾಯಕರು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಬೇಕು ಎಂದು ಹೇಳಿದ್ದರು. ಅಂತಹ ಸಂದರ್ಭದಲ್ಲೇ ಇರಾನ್‌ನ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಆ ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ಅಮೆರಿಕವು ಅಂತರ ಕಾಯ್ದುಕೊಂಡಿತ್ತು. ಆದರೆ ಇರಾನ್‌ನ ದಾಳಿಯ ವೇಳೆ ಇಸ್ರೇಲ್‌ನ ರಕ್ಷಣೆಗೆ ನಿಂತಿತು.

ಇಸ್ರೇಲ್‌ನ ನೆರವಿಗೆ ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಧಾವಿಸಿದ ಕಾರಣಕ್ಕೇ ಯುದ್ಧ ಆರಂಭವಾಗಿಲ್ಲ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಇರಾನ್‌ ನಡೆಸಿದ ದಾಳಿಯಿಂದ ಹೆಚ್ಚು ಹಾನಿಯಾಗಿದ್ದಿದ್ದರೆ, ಇಸ್ರೇಲ್‌ ತೀವ್ರ ಪ್ರತಿದಾಳಿಗೆ ಮುಂದಾಗುತ್ತಿತ್ತು. ಮತ್ತು ಅಮೆರಿಕವು ಯುದ್ಧಕ್ಕೆ ಕಾಲಿಡುತ್ತಿತ್ತು. ಅದು ವಿಶ್ವಯುದ್ಧದ ಸ್ವರೂಪ ಪಡೆಯುತ್ತಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಅಂತಹ ಯುದ್ಧದ ಸಾಧ್ಯತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ. 

ಒಂದೊಮ್ಮೆ ಯುದ್ಧ ಆರಂಭವಾದರೆ ಭಾರತವೂ ಸೇರಿ ವಿಶ್ವದ ಬಹುತೇಕ ದೇಶಗಳು ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯುದ್ಧ ಆರಂಭವಾದರೆ ಕಚ್ಚಾತೈಲ ಉತ್ಪಾದನೆ ಚಟುವಟಿಕೆಗೆ ಅಡಚಣೆಯಾಗಿ, ಅದರ ಬೆಲೆ ವಿಪರೀತ ಏರಿಕೆಯಾಗುವ ಅಪಾಯವಿದೆ. ಜತೆಗೆ ಯೆಮನ್‌ ಕೊಲ್ಲಿಯಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರ ವ್ಯತ್ಯಯವಾಗಿ, ಜಾಗತಿಕ ಮಟ್ಟದ ವ್ಯಾಪಾರ ವಹಿವಾಟಿನಲ್ಲಿ ವಿಪರೀತ ಮಟ್ಟದ ಏರುಪೇರಾಗುವ ಅಪಾಯವೂ ಇದೆ. ಇಸ್ರೇಲ್‌ ಮತ್ತು ಇರಾನ್‌ ಎರಡರ ಬಳಿಯೂ ಅಣ್ವಸ್ತ್ರಗಳಿವೆ. ಒಂದೊಮ್ಮೆ ಯುದ್ಧ ಆರಂಭವಾಗಿ ಅಣ್ವಸ್ತ್ರ ಬಳಕೆಯಾಗುವ ಅಪಾಯವೂ ಹೆಚ್ಚಿದೆ. ಏಕೆಂದರೆ ಬೆಂಜಮಿನ್‌ ನೆತನ್ಯಾಹುವಾಗಲೀ, ಖಮೆನಿಯಾಗಲೀ ಸಂಘರ್ಷದ ಸಂದರ್ಭದಲ್ಲಿ ಇತರರ ಮಾತು ಕೇಳಿಸಿಕೊಳ್ಳುವುದೇ ಇಲ್ಲ ಎಂಬುದು ಈವರೆಗಿನ ಸಂಘರ್ಷಗಳಲ್ಲಿ ಸಾಬೀತಾಗಿದೆ. ಅವುಗಳ ಪರಿಣಾಮವನ್ನು ಯುದ್ಧದಲ್ಲಿ ತೊಡಗುವ ದೇಶಗಳೂ ಎದುರಿಸಬೇಕಾಗುತ್ತದೆ. ಈ ಕಾರಣದಿಂದಲೇ ಇಸ್ರೇಲ್‌–ಇರಾನ್‌ ಸಂಘರ್ಷವು ಇನ್ನೂ ಯುದ್ಧಕ್ಕೆ ತಿರುಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತಕ್ಕೂ ಹಾನಿ...

ಭಾರತಕ್ಕೆ ಇದು ಸಂಕಷ್ಟದ ಸ್ಥಿತಿ. ಭಾರತ–ಇರಾನ್‌ನದ್ದು ಬಹಳ ಹಳೆಯ ಸಂಬಂಧ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ–ಇಸ್ರೇಲ್‌ ಸಂಬಂಧ ಹಲವು ರೀತಿಯಲ್ಲಿ ರೂಪುಗೊಂಡಿದೆಯಷ್ಟೆ. ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಿದ್ದರ ಕುರಿತು ಭಾರತ ಪ್ರತಿಕ್ರಿಯಿಸಿದೆ. ‘ಹಿಂಸೆಯ ಹಾದಿಯಿಂದ ತಕ್ಷಣವೇ ಹಿಂದೆ ಸರಿದು, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ. ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧವು ಆರಂಭವಾದಲ್ಲಿ, ಭಾರತಕ್ಕೂ ಹೆಚ್ಚಿನ ಹಾನಿಯಾಗಲಿದೆ.‌

ನಾಲ್ಕ ವರ್ಷಗಳ ಹಿಂದೆ ಭಾರತವು ಇರಾನ್‌ನಿಂದಲೇ ಶೇ 85ರಷ್ಟು ಕಚ್ಚಾ ತೈಲವನ್ನು ಖರೀದಿಸುತ್ತಿತ್ತು. ಅಮೆರಿಕವು ಇರಾನ್‌ ಮೇಲೆ ನಿರ್ಬಂಧ ಹೇರಿದ್ದರಿಂದ ಭಾರತವು ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿತು. ಈಗ ಭಾರತವು ರಷ್ಯಾದಿಂದ ಮತ್ತು ಮಧ್ಯ ಪ್ರಾಚ್ಯದ ಇತರ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಯುದ್ಧ ಹೀಗೇ ಮುಂದುವರಿದರೆ, ಬೆಲೆಯು ಇನ್ನಷ್ಟು ಹೆಚ್ಚಲಿದೆ. ಇದು ಭಾರತದ ಮೇಲೂ ಪರಿಣಮಿಸಲಿದೆ. ಭಾರತದಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ ₹100ರ ಆಸುಪಾಸಿನಲ್ಲಿದೆ. ಇದು ಇನ್ನಷ್ಟು ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಭಾರತ ಜನರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಯುದ್ಧವು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ವ್ಯಾವಹಾರಿಕವಾಗಿಯೊಂದೇ ಅಲ್ಲದೆ, ಇರಾನ್‌ ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯರ ಸುರಕ್ಷತೆಯ ವಿಚಾರವೂ ಇಲ್ಲಿ ಪ್ರಮುಖವಾಗಿದೆ. ಭಾರತದ ಕಾರ್ಮಿಕರು ಉದ್ಯೋಗ ಅರಸಿ ಇತ್ತೀಚೆಗೆ ದೊಡ್ಡ ಸಂಖ್ಯೆಯಲ್ಲಿ ಯುದ್ಧಪೀಡಿತ ಇಸ್ರೇಲ್‌ಗೆ ತೆರಳಿದ್ದಾರೆ. ಭಾರತ ಸರ್ಕಾರದ ನೆರವಿನೊಂದಿಗೆ ಕಾರ್ಮಿಕರು ಇಸ್ರೇಲ್‌ಗೆ ತೆರಳಿದ್ದಾರೆ. ಈಗ ಈ ಕಾರ್ಮಿಕರ ಜೀವ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇನ್ನು ಈಗಾಗಲೇ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರ ಜೀವಗಳಿಗೆ ಕುತ್ತಾಗುವ ಸಾಧ್ಯತೆ ಇದೆ. ಇರಾನ್‌ನಲ್ಲಿಯೂ ಸುಮಾರು 4,300 ಭಾರತೀಯರು ನೆಲೆಸಿದ್ದಾರೆ. ಇವರೂ ಆತಂಕಕ್ಕೆ ಸಿಲುಕಿದ್ದಾರೆ.

ಆಧಾರ: ಎಎಫ್‌ಪಿ, ನ್ಯಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌, ಬಿಬಿಸಿ ವರದಿಗಳು, ಪಿಟಿಐ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT