ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ವಿಸ್ತರಣೆಗೆ ಮುಂದಾಗಿವೆ. ಭಾರತಕ್ಕೆ ಮೈತ್ರಿ ರಾಜಕಾರಣವು ಹೊಸ ವಿಚಾರ ಅಲ್ಲ. 60–70ರ ದಶಕದಲ್ಲೇ ದೇಶದಲ್ಲಿ ಮೈತ್ರಿಕೂಟ ರಚನೆಯಾಗಿತ್ತು. ಕೇಂದ್ರದಲ್ಲಿ ಪ್ರಬಲ ಪಕ್ಷದ ಬಹುಮತದ ಸರ್ಕಾರ ಇದ್ದಾಗ, ಅದರ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿದ್ದು ಭಾರತದಲ್ಲಿ ಹಲವು ಭಾರಿ ನಡೆದಿದೆ. ಈಗ ಮತ್ತೆ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಈಚಿನ ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಏಕಪಕ್ಷದ ಪಾರಮ್ಯವೇ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತಾದರೂ, ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮೊರೆ ಹೋಗುತ್ತಿವೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ವಿಸ್ತರಣೆಗೆ ಮುಂದಾಗಿವೆ. ಭಾರತಕ್ಕೆ ಮೈತ್ರಿ ರಾಜಕಾರಣವು ಹೊಸ ವಿಚಾರ ಅಲ್ಲ. 60–70ರ ದಶಕದಲ್ಲೇ ದೇಶದಲ್ಲಿ ಮೈತ್ರಿಕೂಟ ರಚನೆಯಾಗಿತ್ತು. ಕೇಂದ್ರದಲ್ಲಿ ಪ್ರಬಲ ಪಕ್ಷದ ಬಹುಮತದ ಸರ್ಕಾರ ಇದ್ದಾಗ, ಅದರ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿದ್ದು ಭಾರತದಲ್ಲಿ ಹಲವು ಭಾರಿ ನಡೆದಿದೆ. ಈಗ ಮತ್ತೆ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಈಚಿನ ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಏಕಪಕ್ಷದ ಪಾರಮ್ಯವೇ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತಾದರೂ, ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮೊರೆ ಹೋಗುತ್ತಿವೆ
1967ರ ಲೋಕಸಭಾ ಚುನಾವಣೆಯಲ್ಲೇ ಇಂದಿರಾ ಅವರ ವಿರುದ್ಧ ಅಸಮಾಧಾನ ಕೇಳಿಬಂದಿತ್ತಾದರೂ, ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿತ್ತು. ಆ ಕ್ಷಣಕ್ಕೆ ಅಸಮಾಧಾನವು ಹಿನ್ನೆಲೆಗೆ ಸರಿದರೂ, ಇಂದಿರಾ ನೇತೃತ್ವದ ಸರ್ಕಾರದ ನೀತಿಗಳ ಕಾರಣದಿಂದ ನಂತರದ ವರ್ಷಗಳಲ್ಲಿ ಆ ಅಸಮಾಧಾನ ದೊಡ್ಡದಾಯಿತು. ಬ್ಯಾಂಕ್ಗಳ ರಾಷ್ಟ್ರೀಕರಣದಂತಹ ಕ್ರಮಗಳು ಕಾಂಗ್ರೆಸ್ ಎಡಚಿಂತನೆಯತ್ತ ವಾಲುತ್ತಿರುವುದರ ಪ್ರತೀಕ ಎಂಬುದು ಹಿರಿಯ ಕಾಂಗ್ರೆಸ್ಸಿಗರ ಆರೋಪವಾಗಿತ್ತು. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಇಂದಿರಾ ಅವರನ್ನು 1969ರಲ್ಲಿ ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿತ್ತು. ಇದು ಹಿರಿಯ ಕಾಂಗ್ರೆಸ್ಸಿಗರಿದ್ದ ಕಾಂಗ್ರೆಸ್ (ಸಂಸ್ಥಾ) ಮತ್ತು ಇಂದಿರಾ ನೇತೃತ್ವದ ಕಾಂಗ್ರೆಸ್ (ಆರ್) ಸ್ಥಾಪನೆಗೆ ಕಾರಣವಾಯಿತು.
ಇಂದಿರಾ ಗಾಂಧಿ ಅವರ ನಿಲುವುಗಳನ್ನು ವಿರೋಧಿಸಿದ್ದ ಹಿರಿಯ ಕಾಂಗ್ರೆಸ್ಸಿಗರು ಸಂಸ್ಥಾ ಕಾಂಗ್ರೆಸ್ನಲ್ಲಿ ಉಳಿದರು ಮತ್ತು ಹೊಸ ತಲೆಮಾರಿನ ಕಾಂಗ್ರೆಸ್ಸಿಗರು ಇಂದಿರಾ ನೇತೃತ್ವದ ಕಾಂಗ್ರೆಸ್ (ಆರ್) ಸೇರಿದರು. ಸಂಸ್ಥಾ ಕಾಂಗ್ರೆಸ್ ಬಲಪಂಥೀಯ ನಿಲುವುಗಳನ್ನು ಹೊಂದಿದ್ದರೆ, ಕಾಂಗ್ರೆಸ್ (ಆರ್) ನಾಯಕರು ಎಡಪಂಥದತ್ತ ವಾಲಿದ್ದರು ಎಂದು ಬ್ರಿಟಾನಿಕಾ ಎನ್ಸೈಕ್ಲೊಪೀಡಿಯಾದಲ್ಲಿ ಉಲ್ಲೇಖಿಸಲಾಗಿದೆ. 1971ರ ಲೋಕಸಭಾ ಚುನಾವಣೆ ಘೋಷಣೆಯಾದಾಗ ಇಂದಿರಾ ಕಾಂಗ್ರೆಸ್ (ಆರ್) ಏಕಾಂಗಿಯಾಗಿ ಕಣಕ್ಕೆ ಇಳಿದಿತ್ತು. ಅದರ ವಿರುದ್ಧ ಸಂಸ್ಥಾ ಕಾಂಗ್ರೆಸ್ ನೇತೃತ್ವದಲ್ಲಿ ನಾಲ್ಕು ಪಕ್ಷಗಳು ಒಟ್ಟಾಗಿ ಜನತಾ ಮೋರ್ಚಾ ಎಂಬ ಹೆಸರಿನಲ್ಲಿ ಚುನಾವಣಾ ಕಣಕ್ಕೆ ಇಳಿದವು.
ಮೊರಾರ್ಜಿ ದೇಸಾಯಿ ನೇತೃತ್ವದ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಾರ್ಟಿ, ಜನಸಂಘ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ ಸೇರಿ ಜನತಾ ಮೋರ್ಚಾ ಎಂಬ ಮೈತ್ರಿಕೂಟವನ್ನು ಮಾಡಿಕೊಂಡವು. ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಚುನಾವಣಾ ಪೂರ್ವ ಮೈತ್ರಿಕೂಟ ಎನಿಸಿದೆ. ಇಂದಿರಾ ನೇತೃತ್ವದ ಕಾಂಗ್ರೆಸ್ (ಆರ್) ‘ಬಡತನ ತೊಲಗಿಸಿ’ ಎಂದು ಕಣಕ್ಕೆ ಇಳಿದರೆ, ಜನತಾ ಮೋರ್ಚಾ ಮೈತ್ರಿಕೂಟವು ‘ಇಂದಿರಾ ತೊಲಗಿಸಿ’ ಎಂದು ಕಣಕ್ಕೆ ಇಳಿದಿತ್ತು. ಆದರೆ, ಮೈತ್ರಿಕೂಟವು 46 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಆಧಾರ: ಗ್ರಾನ್ವಿಲ್ ಆಸ್ಟಿನ್ ಅವರ ‘ಇಂದಿರಾ ಗಾಂಧಿ ಡಿಫೀಟೆಡ್–ಜನತಾ ಫಾರ್ಮ್ಸ್ ಗವರ್ನಮೆಂಟ್’ ಪುಸ್ತಕ, ಬ್ರಿಟಾನಿಕಾ ಎನ್ಸೈಕ್ಲೊಪೀಡಿಯಾ, ಎಂ.ಪಿ. ಸಿಂಗ್ ಅವರ ‘ಇಂಡಿಯಾಸ್ ನ್ಯಾಷನಲ್ ಫ್ರಂಟ್ ಅಂಡ್ ಯುನೈಟೆಡ್ ಫ್ರಂಟ್ ಕೊಯಲಿಷನ್ ಗವರ್ನಮೆಂಟ್ಸ್’ ಲೇಖನ, ಚುನಾವಣಾ ಆಯೋಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.