<p><em><strong>ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕಬ್ಬು ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಡಬೇಕು ಎಂದು ಆಗ್ರಹಿಸಿ ವಾರದಿಂದ ಆಂದೋಲನದ ರೂಪದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆನಿರತ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರು, ಸರ್ಕಾರ, ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಪ್ರತಿ ವರ್ಷ ಕಬ್ಬು ಅರೆಯುವಿಕೆ ಹಂಗಾಮು ಆರಂಭವಾಗುತ್ತಿದ್ದಂತೆಯೇ ಈ ಸಂಘರ್ಷ ಆರಂಭವಾಗುತ್ತದೆ. ಉತ್ತಮ ದರಕ್ಕಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಾರೆ. ಈ ಬಾರಿ ಅದು ತೀವ್ರ ಸ್ವರೂಪದೊಂದಿಗೆ ಶುರುವಾಗಿದೆ...</strong></em></p>.<p>ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಡುವಿನ ತ್ರಿಕೋನ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಬೆಳಗಾವಿಯಲ್ಲಿ ರೈತರು ಪ್ರಾಣ ಪಣಕ್ಕಿಟ್ಟು ‘ನ್ಯಾಯ ಸಮ್ಮತ’ ಬೆಲೆಗಾಗಿ ಹೋರಾಡುವ ದಿನಗಳು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ. ಇಲ್ಲಿ ವಾರದಿಂದ ನಡೆಯುತ್ತಿರುವ ಚಳವಳಿ ಇನ್ನಷ್ಟು ತೀವ್ರಗೊಳ್ಳುತ್ತಿದ್ದರೆ, ಕಬ್ಬು ಬೆಳೆಯುವ ಇತರ ಜಿಲ್ಲೆಗಳಲ್ಲೂ ಉತ್ತಮ ದರಕ್ಕಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.</p>.<p>2013–14ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಚಳಿಗಾಲದ ಅಧಿವೇಶ ನಡೆದಿತ್ತು. ಸಿದ್ದರಾಮಯ್ಯ ಆಗಲೂ ಮುಖ್ಯಮಂತ್ರಿ. ಕಬ್ಬು ದರ ಹೆಚ್ಚಿಸಲು ರೈತರು ಸೌಧದ ಮುಂದೆ ಬೃಹತ್ ಹೋರಾಟ ಆರಂಭಿಸಿದ್ದರು. ರಾಯಬಾಗ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತ ವಿಠ್ಠಲ ಭೀಮಪ್ಪ ಅರಭಾವಿ ಅವರು ಕೀಟನಾಶಕ ಕುಡಿದು ಸೌಧದ ಎದುರೇ ಪ್ರಾಣ ಬಿಟ್ಟರು. ಬಳಿಕ ಅನ್ನದಾತರು ಉಗ್ರಸ್ವರೂಪ ತಾಳಿದರು. ಆಕ್ರೋಶಕ್ಕೆ ಬೆಚ್ಚಿಬಿದ್ದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹165 ಪ್ರೋತ್ಸಾಹ ಧನ ಘೋಷಣೆ ಮಾಡಿತು. ಆಗ ಸಕ್ಕರೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ತಕ್ಷಣಕ್ಕೆ ₹300 ಕೋಟಿ ನೆರವು ನಿಧಿ ಬಿಡುಗಡೆ ಮಾಡಿದ್ದರು.</p>.<p>ಕಾಲ ಉರುಳಿದೆ. ಆದರೆ, ರೈತರ ಬದುಕು ಅಲ್ಲೇ ನಿಂತಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಅದೇ ಕಬ್ಬಿಗಾಗಿ, ಅದೇ ರೈತರು ಆಂದೋಲನ ಮಾಡುತ್ತಿದ್ದಾರೆ. ದಶಕ ಕಳೆದರೂ ಕಬ್ಬು ಬೆಳೆಗಾರರ ಬದುಕು ‘ಸಿಹಿ’ ಆಗಲೇ ಇಲ್ಲ. ಆಗ ಒಂದು ಕಾರ್ಖಾನೆ ಹೊಂದಿದ್ದ ಮಾಲೀಕರು ಈಗ ಎರಡು– ಮೂರು ಕಾರ್ಖಾನೆ ಕಟ್ಟಿಕೊಂಡಿದ್ದಾರೆ.</p>.<p>ಅಂದಿನ ದಿನಗಳು ಈಗ ಮರುಕಳಿಸಿವೆ. ಅದೇ ರಾಯಬಾಗ ತಾಲ್ಲೂಕಿನ ಆಲಕನೂರ ಗ್ರಾಮದ ಲಕ್ಕಪ್ಪ ಗುಣದಾಳ (30) ಎಂಬ ರೈತ ಸೋಮವಾರ (ನ.3) ಹೋರಾಟದ ಸ್ಥಳದಲ್ಲೇ ವಿಷ ಕುಡಿದಿದ್ದಾರೆ. ಸಾವು– ಬದುಕಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದಿನಿಂದ ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಬುಧವಾರ ಬೆಳಗಾವಿ, ಹುಕ್ಕೇರಿ, ರಾಯಬಾಗ ಮುಂತಾದ ಕಡೆಗಳಲ್ಲಿ ಜನ ಸ್ವಯಂ ಪ್ರೇರಣೆಯಿಂದ ಬಂದ್ ಆಚರಿಸಿದರು. ಬೆಳಿಗ್ಗೆ ಬಸ್ ಸಂಚಾರ ವಿರಳವಾಗಿತ್ತು. ಶಾಲೆ, ಕಾಲೇಜು, ಚಿತ್ರ ಮಂದಿರಗಳಲ್ಲಿ ಜನ ವಿರಳವಾಗಿದ್ದರು. ರಾಯಬಾಗ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಯಿತು. ಔಷಧ ಮಳಿಗೆ, ಸರ್ಕಾರಿ ಕಚೇರಿಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಜನ ತಾವಾಗಿಯೇ ಬಂದ್ ಮಾಡಿದರು.</p>.<p>ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿರುವ ರೈತರ ಹೋರಾಟ ಏಳು ದಿನ ಪೂರೈಸಿದೆ. ಬುಧವಾರದಿಂದ ಅರೆ ಬೆತ್ತಲೆ ಧರಣಿ ಶುರು ಮಾಡಿದ್ದಾರೆ. ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿಗಳಲ್ಲೂ ಜನರು ಎರಡು ತಾಸು ರಸ್ತೆತಡೆ ನಡೆಸಿದ್ದಾರೆ.</p>.<p><strong>ರೈತರಿಗೆ ಮೋಸ ಹೇಗೆ?</strong>: ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ನ್ಯಾಯಸಮ್ಮತ ಹಾಗೂ ಲಾಭದಾಯಕ (ಎಫ್ಆರ್ಪಿ) ಬೆಲೆ ಹೆಚ್ಚಿಸುತ್ತದೆ. ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳು ಇಳುವರಿ ಪ್ರಮಾಣದ ಮಿತಿಯನ್ನೂ ಏರಿಸುವ ಮೂಲಕ ರೈತರಿಗೆ ಲಾಭವೇ ಸಿಗದಂತೆ ಮಾಡುತ್ತಿವೆ. ಹೀಗಾಗಿ, ಈ ಬಾರಿ ರೈತರು ನಿರ್ಣಾಯಕ ಹೋರಾಟಕ್ಕೆ ನಿಂತಿದ್ದಾರೆ. ಪ್ರತಿ ಟನ್ಗೆ ₹3,500 ದರ ನೀಡಬೇಕು, ಇಳುವರಿ ಪ್ರಮಾಣದ (ರಿಕವರಿ ರೇಟ್) ಮಿತಿಯನ್ನೂ ಶೇ 9.5ಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.</p>.<p><strong>ಕಾರ್ಖಾನೆಗಳಿಗೆ ಲಾಭ:</strong> ‘ಕಬ್ಬು ಅರೆಯುವ ಕಾರ್ಖಾನೆಗಳು ಸಕ್ಕರೆಯನ್ನಷ್ಟೇ ಉತ್ಪಾದಿಸುವುದಿಲ್ಲ. ಮೊಲಾಸಿಸ್, ಎಥೆನಾಲ್, ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಇವುಗಳಿಂದಲೂ ಕಾರ್ಖಾನೆಗಳ ಮಾಲೀಕರು ಲಾಭ ಗಳಿಸುತ್ತಾರೆ. ಹೆಚ್ಚು ಲಾಭ ಬರುವಾಗ ನಮಗೆ ಉತ್ತಮ ದರ ನೀಡಲು ಅವರಿಗೆ ಯಾಕೆ ಸಾಧ್ಯವಿಲ್ಲ’ ಎಂಬುದು ಬೆಳೆಗಾರರ ಪ್ರಶ್ನೆ.</p>.<p><strong>ಶುಕ್ರವಾರದಿಂದ ಆಮರಣ ಉಪವಾಸ</strong></p><p>ವಾರದಿಂದ ರಸ್ತೆ ತಡೆ, ಬಂದ್, ಉರುಳುಸೇವೆ, ಅರೆಬೆತ್ತಲೆ ಮರವಣಿಗೆ ಮಾಡಿದ ರೈತರು, ಶುಕ್ರವಾರದ (ನ. 7) ಒಳಗೆ ಬೇಡಿಕೆ ಈಡೇರದಿದ್ದರೆ ಅಂದಿನಿಂದ ಸಾಮೂಹಿಕ ಆಮರಣ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.</p>.<p><strong>ದಶಕಗಳ ‘ಮೋಸ’</strong></p><p>* 2012–13ರಲ್ಲಿ ಟನ್ ಕಬ್ಬಿಗೆ ₹1,700 ದರವಿತ್ತು. ಆಗಿದ್ದ ಇಳುವರಿ ಪ್ರಮಾಣ ಶೇ 9 ಮಾತ್ರ. 2013–14ರಲ್ಲಿ ₹3,000 ಕೇಳಿ ರೈತರು ಹೋರಾಡಿದರು. ₹2,100ಕ್ಕೆ ಏರಿಸಲಾಯಿತು. ಸಕ್ಕರೆ ಇಳುವರಿ ಪ್ರಮಾಣವನ್ನೂ ಶೇ 9.5ಕ್ಕೆ ಏರಿಸಲಾಯಿತು</p><p>* 2018ರಲ್ಲಿ ರೈತರು ಕಬ್ಬು ತುಂಬಿದ 18 ಲಾರಿಗಳನ್ನು ಸುವರ್ಣ ವಿಧಾನಸೌಧದ ಆವರಣಕ್ಕೆ ನುಗ್ಗಿಸಿ ಪ್ರತಿಭಟನೆ ಮಾಡಿದರು. ಅದಕ್ಕೆ ಮಣಿದ ಸರ್ಕಾರ ಎಫ್ಆರ್ಪಿಯನ್ನು ₹2,750ಕ್ಕೆ ಏರಿಸಿತು. ಆದರೆ, ಕಾರ್ಖಾನೆಗಳು ಒತ್ತಡ ಹೇರಿ ಇಳುವರಿ ಪ್ರಮಾಣದ ಮಿತಿಯನ್ನೂ ಶೇ 10ಕ್ಕೆ ಏರಿಸಿದವು</p><p>* 2023–24ರಲ್ಲಿ ಕಬ್ಬಿಗೆ ₹3,005 ದರ ನೀಡಲಾಯಿತು. ಕೇಂದ್ರ ಸರ್ಕಾರ ಎಫ್ಆರ್ಪಿಯನ್ನು ₹3,150ಕ್ಕೆ ಏರಿಸಿತು. ರಂಗೋಲಿ ಕೆಳಗೆ ನುಸುಳಿದ ಕಾರ್ಖಾನೆಗಳ ಮಾಲೀಕರು ಇಳುವರಿ ಮಿತಿಯನ್ನು ಶೇ 10.25ಕ್ಕೆ ನಿಗದಿಯಾಗುವಂತೆ ನೋಡಿಕೊಂಡರು</p><p>* ಈ ವರ್ಷವೂ ಎಫ್ಆರ್ಪಿ ₹3,550ಕ್ಕೆ ನಿಗದಿಯಾಗಿದೆ. ಆದರೆ, ಇಳುವರಿ ಪ್ರಮಾಣವನ್ನು ಶೇ 10.25ಕ್ಕೆ ಮಿತಿಗೊಳಿಸಲಾಗಿದೆ. ಕಾರ್ಖಾನೆಗಳು ₹3,010ಕ್ಕೆ ಬಂದು ನಿಂತಿವೆ</p><p>* ಶೇ 9.5 ಇಳುವರಿ ಆಧರಿಸಿಯೇ ₹3,500 ದರ ನೀಡಬೇಕು ಎಂಬ ರೈತರ ಆಗ್ರಹ ಈಗ ಆಂದೋಲನದ ಸ್ವರೂಪ ತಾಳಿದೆ</p>.<p><strong>ಇಳುವರಿ ಪ್ರಮಾಣ ಎಂದರೆ...</strong></p>.<p>ನಿರ್ದಿಷ್ಟ ತೂಕದ ಕಬ್ಬಿನ ಅರೆಯುವಿಕೆಯಿಂದ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವೇ ಇಳುವರಿ ಪ್ರಮಾಣ.</p>.<p>ಉದಾಹರಣೆಗೆ, ಒಂದು ವೇಳೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ, ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ 10 ಆಗುತ್ತದೆ</p>.<p>ಕೇಂದ್ರ ಸರ್ಕಾರವು 2025–26ನೇ ಸಾಲಿಗೆ ಟನ್ ಕಬ್ಬಿಗೆ ಎಫ್ಆರ್ಪಿ (₹3,550) ನಿಗದಿ ಪಡಿಸುವಾಗ ಇಳುವರಿ ಪ್ರಮಾಣದ ಮಿತಿ ಶೇ 10.25 ಇರಬೇಕು ಎಂದು ಹೇಳಿದೆ. ಅಂದರೆ, 1,000 ಕೆಜಿ ಕಬ್ಬು ಅರೆದರೆ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕು. ಅದಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆಯಾದರೆ ಟನ್ ಕಬ್ಬಿಗೆ ₹3,555 ಸಿಗುವುದಿಲ್ಲ</p>.<p><strong>ರಾಜಕೀಯಗೊಳಿಸುವ ಯತ್ನ</strong></p>.<p>ಹೋರಾಟವನ್ನು ರಾಜಕೀಯಗೊಳಿಸುವ ಯತ್ನವೂ ನಡೆಯುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರೈತರ ಹೋರಾಟ ಬೆಂಬಲಿಸಿ, ಬುಧವಾರ ತಮ್ಮ ಜನ್ಮದಿನವನ್ನೂ ಹೋರಾಟದ ಸ್ಥಳದಲ್ಲಿ ಆಚರಿಸಿಕೊಂಡರು. ಮಂಗಳವಾರ ರಾತ್ರಿ ರೈತರೊಂದಿಗೆ ಹೆದ್ದಾರಿಯಲ್ಲಿ ಮಲಗಿದರು.</p>.<p>ಆದರೆ, ನಮಗೆ ಬೇಕಾದುದು ಬೆಂಬಲವಲ್ಲ; ದರ ಎಂದು ರೈತರು ಮಾರುತ್ತರಿಸಿದರು.</p>.<p>‘ವಿಜಯೇಂದ್ರ ಬೆಂಬಲ ಕೊಡುವುದಕ್ಕಿಂತ, ಬಿಜೆಪಿಯವರ ಕೈಯಲ್ಲಿರುವ ಕಾರ್ಖಾನೆಗಳಲ್ಲಿ ಉತ್ತಮ ದರ ಕೊಡಿಸಿದರೆ ಸಾಕು. ನೀವು ಕಬ್ಬು ತಿಂದು ಜನ್ಮದಿನ ಆಚರಿಸಿಕೊಂಡು ರೈತರನ್ನು ಸಮಾಧಾನ ಮಾಡಬಹುದು. ಆದರೆ, ಮರುಳು ಮಾಡಲು ಆಗುವುದಿಲ್ಲ. ಬೆಂಬಲದ ಬದಲು ನಿಮ್ಮವರಿಂದಲೇ ‘ಬೆಲೆ’ ಕೊಡಿಸಿ’ ಎಂದು ಭಾರತೀಯ ಕೃಷಿಕ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಸವಾಲು ಹಾಕಿದ್ದಾರೆ.</p>.<p><strong>ಅಫಜಲಪುರ: ಗುರುವಾರ ಬಂದ್</strong></p>.<p>ಕಲಬುರಗಿ ಜಿಲ್ಲೆಯಲ್ಲೂ ಕಬ್ಬು ದರ ನಿಗದಿ ಕಗ್ಗಂಟು ಮುಂದುವರಿದಿದೆ. ರೈತರ ಪರವಾಗಿ ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ಹಲವು ಸುತ್ತಿನ ಮಾತುಕತೆ, ಸಭೆಯ ಹೊರತಾಗಿಯೂ ಹಗ್ಗಜಗ್ಗಾಟ ಮುಂದುವರಿದಿದೆ. ‘ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕಡಿಮೆಯಿದ್ದು, ಎಫ್ಆರ್ಪಿ ದರ ನೀಡುವುದಾಗಿ ಕಾರ್ಖಾನೆಗಳು ಹೇಳುತ್ತಿವೆ. ಆದರೆ, ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ₹3,500 ದರಕ್ಕೆ ಬೆಳೆಗಾರರು ಆಗ್ರಹಿಸಿದ್ದಾರೆ. ಏಕರೂಪ ದರ ನಿಗದಿಗೆ ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ( ನ.6) ಅಫಜಲಪುರ ಬಂದ್ಗೆ ಕರೆ ನೀಡಲಾಗಿದೆ.</p>.<p><strong>ದರ ನಿಗದಿಗೆ ತಿಕ್ಕಾಟ</strong></p>.<p>ಬೆಳಗಾವಿ ಮಾತ್ರವಲ್ಲದೆ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಕಾರ್ಖಾನೆಗಳು ಮತ್ತು ಬೆಳೆಗಾರರ ನಡುವೆ ತಿಕ್ಕಾಟ ನಡೆಯುತ್ತಿದೆ.</p>.<p>ಗದಗ ಜಿಲ್ಲೆಯ ಮುಂಡರಗಿಯ ರೈತರು ಸಾವಿರಾರು ಎಕರೆಯಲ್ಲಿ ಕಬ್ಬು ಬೆಳೆದಿದ್ದು, ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಶುಗರ್ಸ್ ಕಾರ್ಖಾನೆಯವರು ಈಗಾಗಲೇ ಕಬ್ಬು ಅರೆಯಲು ಆರಂಭಿಸಿದ್ದಾರೆ. ಆದರೆ, ಕಬ್ಬಿನ ದರ ನಿಗದಿ ಕುರಿತಂತೆ ಸಕ್ಕರೆ ಕಾರ್ಖಾನೆಯವರು ಹಾಗೂ ಕಬ್ಬು ಬೆಳೆಗಾರರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.</p>.<p>ಕೇಂದ್ರ ಸರ್ಕಾರ ಟನ್ ಕಬ್ಬಿಗೆ ₹3,550 ಎಫ್ಆರ್ಪಿ ನಿಗದಿಗೊಳಿಸಿದ್ದು, ಅದೇ ದರದಲ್ಲಿ ಕಬ್ಬು ಖರೀದಿಸಬೇಕು ಎಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಅವರು ಈ ಕುರಿತು ಈಗಾಗಲೇ ರೈತರು ಹಾಗೂ ಸಕ್ಕರೆ ಕಾರ್ಖಾನೆಯವರ ಸಭೆ ನಡೆಸಿದ್ದು, ಎಫ್ಆರ್ಪಿ ದರದಂತೆ ರೈತರ ಕಬ್ಬು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಯವರಿಗೆ ಸೂಚಿಸಿದ್ದಾರೆ. ಪ್ರಸ್ತುತ ಸಕ್ಕರೆ ಕಾರ್ಖಾನೆಯವರು ಟನ್ ಕಬ್ಬಿಗೆ ₹2,630 ನೀಡಿ ಖರೀದಿಸುತ್ತಿದ್ದು, ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹500 ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.</p>.<p><strong>ದಕ್ಷಿಣದಲ್ಲೂ ಅಸಂತೃಪ್ತಿ</strong></p>.<p>ಕಬ್ಬು ಬೆಳೆಯುವ ದಕ್ಷಿಣದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ವ್ಯಾಪ್ತಿಯ ಬೆಳೆಗಾರರಲ್ಲೂ ಅಸಂತೃಪ್ತಿ ಮಡುಗಟ್ಟಿದೆ. ಎಫ್ಆರ್ಪಿ ದರಕ್ಕಾಗಿ ಪ್ರತಿ ವರ್ಷ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಾಗಿದ್ದರೂ, ಅವರ ಬೇಡಿಕೆ ಈಡೇರಿಲ್ಲ.</p>.<p>ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಮೈಷುಗರ್, ಚಾಂಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು ವಿವಿಧ ಬೇಡಿಕೆ ಈಡೇರಿಕೆಗಾಗಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದನ್ನೂ ಪಾವತಿ ಮಾಡಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಮತ್ತೊಂದು ಕಾರಣ.</p>.<p>‘2022-23ರ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದವರಿಗೆ ರಾಜ್ಯ ಸರ್ಕಾರ ಟನ್ ಕಬ್ಬಿಗೆ ₹150 ಪ್ರೋತ್ಸಾಹ ಧನ ಪಾವತಿಸುವುದಾಗಿ ಘೋಷಿಸಿತ್ತು. ಕೂಡಲೇ ಅದನ್ನು ನೀಡಬೇಕು’ ಎಂದು ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಆಗ್ರಹಿಸಿದ್ದಾರೆ.</p>.<p>‘ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹14 ಸಾವಿರದಿಂದ ₹15 ಸಾವಿರದಷ್ಟು ಆದಾಯ ಪಡೆಯುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರನ್ನು ಶೋಷಿಸುತ್ತಿದ್ದಾರೆ. ಕಬ್ಬು ಪೂರೈಸಿದವರಿಗೆ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಾದರೂ ಪಾವತಿಸುತ್ತಿಲ್ಲ. ನಿರೀಕ್ಷಿತ ಬೆಲೆ ಸಿಗದೆ ಬೆಳೆಗಾರರು ಕಬ್ಬಿನಿಂದ ವಿಮುಖರಾಗುತ್ತಿದ್ದಾರೆ. ಶೇ 9.5ರಷ್ಟು ಇಳುವರಿಗೆ ಕನಿಷ್ಠ ₹5,500 ಎಫ್ಆರ್ಪಿ ನಿಗದಿ ಪಡಿಸಬೇಕು ಸಂಘ ಒತ್ತಾಯಿಸುತ್ತಿದೆ. ಆದರೆ, ರಾಜಕೀಯ ಪ್ರಭಾವವುಳ್ಳ ಕಾರ್ಖಾನೆ ಮಾಲೀಕರು ದರ ನಿಗದಿ ಮಾಡಲು ಬಿಡುತ್ತಿಲ್ಲ’ ಎಂಬುದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತ್ರಾಜ್ ದೂರು.</p>.<p><strong>ಮಾಹಿತಿ:</strong> ಬಸವರಾಜ ಹವಾಲ್ದಾರ, ಬಸವರಾಜ ಸಂಪಳ್ಳಿ, ಸತೀಶ್ ಎಂ.ಬೆಳ್ಳಕ್ಕಿ, ಸಿದ್ದು ಆರ್.ಜಿ.ಹಳ್ಳಿ, ಗಣಪತಿ ಹೆಗಡೆ, ಬಸೀರ ಅಹ್ಮದ್ ನಗಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕಬ್ಬು ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಡಬೇಕು ಎಂದು ಆಗ್ರಹಿಸಿ ವಾರದಿಂದ ಆಂದೋಲನದ ರೂಪದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆನಿರತ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರು, ಸರ್ಕಾರ, ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಪ್ರತಿ ವರ್ಷ ಕಬ್ಬು ಅರೆಯುವಿಕೆ ಹಂಗಾಮು ಆರಂಭವಾಗುತ್ತಿದ್ದಂತೆಯೇ ಈ ಸಂಘರ್ಷ ಆರಂಭವಾಗುತ್ತದೆ. ಉತ್ತಮ ದರಕ್ಕಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಾರೆ. ಈ ಬಾರಿ ಅದು ತೀವ್ರ ಸ್ವರೂಪದೊಂದಿಗೆ ಶುರುವಾಗಿದೆ...</strong></em></p>.<p>ರಾಜ್ಯದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಡುವಿನ ತ್ರಿಕೋನ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಬೆಳಗಾವಿಯಲ್ಲಿ ರೈತರು ಪ್ರಾಣ ಪಣಕ್ಕಿಟ್ಟು ‘ನ್ಯಾಯ ಸಮ್ಮತ’ ಬೆಲೆಗಾಗಿ ಹೋರಾಡುವ ದಿನಗಳು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ. ಇಲ್ಲಿ ವಾರದಿಂದ ನಡೆಯುತ್ತಿರುವ ಚಳವಳಿ ಇನ್ನಷ್ಟು ತೀವ್ರಗೊಳ್ಳುತ್ತಿದ್ದರೆ, ಕಬ್ಬು ಬೆಳೆಯುವ ಇತರ ಜಿಲ್ಲೆಗಳಲ್ಲೂ ಉತ್ತಮ ದರಕ್ಕಾಗಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.</p>.<p>2013–14ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಚಳಿಗಾಲದ ಅಧಿವೇಶ ನಡೆದಿತ್ತು. ಸಿದ್ದರಾಮಯ್ಯ ಆಗಲೂ ಮುಖ್ಯಮಂತ್ರಿ. ಕಬ್ಬು ದರ ಹೆಚ್ಚಿಸಲು ರೈತರು ಸೌಧದ ಮುಂದೆ ಬೃಹತ್ ಹೋರಾಟ ಆರಂಭಿಸಿದ್ದರು. ರಾಯಬಾಗ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತ ವಿಠ್ಠಲ ಭೀಮಪ್ಪ ಅರಭಾವಿ ಅವರು ಕೀಟನಾಶಕ ಕುಡಿದು ಸೌಧದ ಎದುರೇ ಪ್ರಾಣ ಬಿಟ್ಟರು. ಬಳಿಕ ಅನ್ನದಾತರು ಉಗ್ರಸ್ವರೂಪ ತಾಳಿದರು. ಆಕ್ರೋಶಕ್ಕೆ ಬೆಚ್ಚಿಬಿದ್ದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹165 ಪ್ರೋತ್ಸಾಹ ಧನ ಘೋಷಣೆ ಮಾಡಿತು. ಆಗ ಸಕ್ಕರೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ತಕ್ಷಣಕ್ಕೆ ₹300 ಕೋಟಿ ನೆರವು ನಿಧಿ ಬಿಡುಗಡೆ ಮಾಡಿದ್ದರು.</p>.<p>ಕಾಲ ಉರುಳಿದೆ. ಆದರೆ, ರೈತರ ಬದುಕು ಅಲ್ಲೇ ನಿಂತಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಅದೇ ಕಬ್ಬಿಗಾಗಿ, ಅದೇ ರೈತರು ಆಂದೋಲನ ಮಾಡುತ್ತಿದ್ದಾರೆ. ದಶಕ ಕಳೆದರೂ ಕಬ್ಬು ಬೆಳೆಗಾರರ ಬದುಕು ‘ಸಿಹಿ’ ಆಗಲೇ ಇಲ್ಲ. ಆಗ ಒಂದು ಕಾರ್ಖಾನೆ ಹೊಂದಿದ್ದ ಮಾಲೀಕರು ಈಗ ಎರಡು– ಮೂರು ಕಾರ್ಖಾನೆ ಕಟ್ಟಿಕೊಂಡಿದ್ದಾರೆ.</p>.<p>ಅಂದಿನ ದಿನಗಳು ಈಗ ಮರುಕಳಿಸಿವೆ. ಅದೇ ರಾಯಬಾಗ ತಾಲ್ಲೂಕಿನ ಆಲಕನೂರ ಗ್ರಾಮದ ಲಕ್ಕಪ್ಪ ಗುಣದಾಳ (30) ಎಂಬ ರೈತ ಸೋಮವಾರ (ನ.3) ಹೋರಾಟದ ಸ್ಥಳದಲ್ಲೇ ವಿಷ ಕುಡಿದಿದ್ದಾರೆ. ಸಾವು– ಬದುಕಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದಿನಿಂದ ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಬುಧವಾರ ಬೆಳಗಾವಿ, ಹುಕ್ಕೇರಿ, ರಾಯಬಾಗ ಮುಂತಾದ ಕಡೆಗಳಲ್ಲಿ ಜನ ಸ್ವಯಂ ಪ್ರೇರಣೆಯಿಂದ ಬಂದ್ ಆಚರಿಸಿದರು. ಬೆಳಿಗ್ಗೆ ಬಸ್ ಸಂಚಾರ ವಿರಳವಾಗಿತ್ತು. ಶಾಲೆ, ಕಾಲೇಜು, ಚಿತ್ರ ಮಂದಿರಗಳಲ್ಲಿ ಜನ ವಿರಳವಾಗಿದ್ದರು. ರಾಯಬಾಗ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಯಿತು. ಔಷಧ ಮಳಿಗೆ, ಸರ್ಕಾರಿ ಕಚೇರಿಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಜನ ತಾವಾಗಿಯೇ ಬಂದ್ ಮಾಡಿದರು.</p>.<p>ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿರುವ ರೈತರ ಹೋರಾಟ ಏಳು ದಿನ ಪೂರೈಸಿದೆ. ಬುಧವಾರದಿಂದ ಅರೆ ಬೆತ್ತಲೆ ಧರಣಿ ಶುರು ಮಾಡಿದ್ದಾರೆ. ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿಗಳಲ್ಲೂ ಜನರು ಎರಡು ತಾಸು ರಸ್ತೆತಡೆ ನಡೆಸಿದ್ದಾರೆ.</p>.<p><strong>ರೈತರಿಗೆ ಮೋಸ ಹೇಗೆ?</strong>: ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ನ್ಯಾಯಸಮ್ಮತ ಹಾಗೂ ಲಾಭದಾಯಕ (ಎಫ್ಆರ್ಪಿ) ಬೆಲೆ ಹೆಚ್ಚಿಸುತ್ತದೆ. ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳು ಇಳುವರಿ ಪ್ರಮಾಣದ ಮಿತಿಯನ್ನೂ ಏರಿಸುವ ಮೂಲಕ ರೈತರಿಗೆ ಲಾಭವೇ ಸಿಗದಂತೆ ಮಾಡುತ್ತಿವೆ. ಹೀಗಾಗಿ, ಈ ಬಾರಿ ರೈತರು ನಿರ್ಣಾಯಕ ಹೋರಾಟಕ್ಕೆ ನಿಂತಿದ್ದಾರೆ. ಪ್ರತಿ ಟನ್ಗೆ ₹3,500 ದರ ನೀಡಬೇಕು, ಇಳುವರಿ ಪ್ರಮಾಣದ (ರಿಕವರಿ ರೇಟ್) ಮಿತಿಯನ್ನೂ ಶೇ 9.5ಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.</p>.<p><strong>ಕಾರ್ಖಾನೆಗಳಿಗೆ ಲಾಭ:</strong> ‘ಕಬ್ಬು ಅರೆಯುವ ಕಾರ್ಖಾನೆಗಳು ಸಕ್ಕರೆಯನ್ನಷ್ಟೇ ಉತ್ಪಾದಿಸುವುದಿಲ್ಲ. ಮೊಲಾಸಿಸ್, ಎಥೆನಾಲ್, ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಇವುಗಳಿಂದಲೂ ಕಾರ್ಖಾನೆಗಳ ಮಾಲೀಕರು ಲಾಭ ಗಳಿಸುತ್ತಾರೆ. ಹೆಚ್ಚು ಲಾಭ ಬರುವಾಗ ನಮಗೆ ಉತ್ತಮ ದರ ನೀಡಲು ಅವರಿಗೆ ಯಾಕೆ ಸಾಧ್ಯವಿಲ್ಲ’ ಎಂಬುದು ಬೆಳೆಗಾರರ ಪ್ರಶ್ನೆ.</p>.<p><strong>ಶುಕ್ರವಾರದಿಂದ ಆಮರಣ ಉಪವಾಸ</strong></p><p>ವಾರದಿಂದ ರಸ್ತೆ ತಡೆ, ಬಂದ್, ಉರುಳುಸೇವೆ, ಅರೆಬೆತ್ತಲೆ ಮರವಣಿಗೆ ಮಾಡಿದ ರೈತರು, ಶುಕ್ರವಾರದ (ನ. 7) ಒಳಗೆ ಬೇಡಿಕೆ ಈಡೇರದಿದ್ದರೆ ಅಂದಿನಿಂದ ಸಾಮೂಹಿಕ ಆಮರಣ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.</p>.<p><strong>ದಶಕಗಳ ‘ಮೋಸ’</strong></p><p>* 2012–13ರಲ್ಲಿ ಟನ್ ಕಬ್ಬಿಗೆ ₹1,700 ದರವಿತ್ತು. ಆಗಿದ್ದ ಇಳುವರಿ ಪ್ರಮಾಣ ಶೇ 9 ಮಾತ್ರ. 2013–14ರಲ್ಲಿ ₹3,000 ಕೇಳಿ ರೈತರು ಹೋರಾಡಿದರು. ₹2,100ಕ್ಕೆ ಏರಿಸಲಾಯಿತು. ಸಕ್ಕರೆ ಇಳುವರಿ ಪ್ರಮಾಣವನ್ನೂ ಶೇ 9.5ಕ್ಕೆ ಏರಿಸಲಾಯಿತು</p><p>* 2018ರಲ್ಲಿ ರೈತರು ಕಬ್ಬು ತುಂಬಿದ 18 ಲಾರಿಗಳನ್ನು ಸುವರ್ಣ ವಿಧಾನಸೌಧದ ಆವರಣಕ್ಕೆ ನುಗ್ಗಿಸಿ ಪ್ರತಿಭಟನೆ ಮಾಡಿದರು. ಅದಕ್ಕೆ ಮಣಿದ ಸರ್ಕಾರ ಎಫ್ಆರ್ಪಿಯನ್ನು ₹2,750ಕ್ಕೆ ಏರಿಸಿತು. ಆದರೆ, ಕಾರ್ಖಾನೆಗಳು ಒತ್ತಡ ಹೇರಿ ಇಳುವರಿ ಪ್ರಮಾಣದ ಮಿತಿಯನ್ನೂ ಶೇ 10ಕ್ಕೆ ಏರಿಸಿದವು</p><p>* 2023–24ರಲ್ಲಿ ಕಬ್ಬಿಗೆ ₹3,005 ದರ ನೀಡಲಾಯಿತು. ಕೇಂದ್ರ ಸರ್ಕಾರ ಎಫ್ಆರ್ಪಿಯನ್ನು ₹3,150ಕ್ಕೆ ಏರಿಸಿತು. ರಂಗೋಲಿ ಕೆಳಗೆ ನುಸುಳಿದ ಕಾರ್ಖಾನೆಗಳ ಮಾಲೀಕರು ಇಳುವರಿ ಮಿತಿಯನ್ನು ಶೇ 10.25ಕ್ಕೆ ನಿಗದಿಯಾಗುವಂತೆ ನೋಡಿಕೊಂಡರು</p><p>* ಈ ವರ್ಷವೂ ಎಫ್ಆರ್ಪಿ ₹3,550ಕ್ಕೆ ನಿಗದಿಯಾಗಿದೆ. ಆದರೆ, ಇಳುವರಿ ಪ್ರಮಾಣವನ್ನು ಶೇ 10.25ಕ್ಕೆ ಮಿತಿಗೊಳಿಸಲಾಗಿದೆ. ಕಾರ್ಖಾನೆಗಳು ₹3,010ಕ್ಕೆ ಬಂದು ನಿಂತಿವೆ</p><p>* ಶೇ 9.5 ಇಳುವರಿ ಆಧರಿಸಿಯೇ ₹3,500 ದರ ನೀಡಬೇಕು ಎಂಬ ರೈತರ ಆಗ್ರಹ ಈಗ ಆಂದೋಲನದ ಸ್ವರೂಪ ತಾಳಿದೆ</p>.<p><strong>ಇಳುವರಿ ಪ್ರಮಾಣ ಎಂದರೆ...</strong></p>.<p>ನಿರ್ದಿಷ್ಟ ತೂಕದ ಕಬ್ಬಿನ ಅರೆಯುವಿಕೆಯಿಂದ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವೇ ಇಳುವರಿ ಪ್ರಮಾಣ.</p>.<p>ಉದಾಹರಣೆಗೆ, ಒಂದು ವೇಳೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ, ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ 10 ಆಗುತ್ತದೆ</p>.<p>ಕೇಂದ್ರ ಸರ್ಕಾರವು 2025–26ನೇ ಸಾಲಿಗೆ ಟನ್ ಕಬ್ಬಿಗೆ ಎಫ್ಆರ್ಪಿ (₹3,550) ನಿಗದಿ ಪಡಿಸುವಾಗ ಇಳುವರಿ ಪ್ರಮಾಣದ ಮಿತಿ ಶೇ 10.25 ಇರಬೇಕು ಎಂದು ಹೇಳಿದೆ. ಅಂದರೆ, 1,000 ಕೆಜಿ ಕಬ್ಬು ಅರೆದರೆ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕು. ಅದಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆಯಾದರೆ ಟನ್ ಕಬ್ಬಿಗೆ ₹3,555 ಸಿಗುವುದಿಲ್ಲ</p>.<p><strong>ರಾಜಕೀಯಗೊಳಿಸುವ ಯತ್ನ</strong></p>.<p>ಹೋರಾಟವನ್ನು ರಾಜಕೀಯಗೊಳಿಸುವ ಯತ್ನವೂ ನಡೆಯುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರೈತರ ಹೋರಾಟ ಬೆಂಬಲಿಸಿ, ಬುಧವಾರ ತಮ್ಮ ಜನ್ಮದಿನವನ್ನೂ ಹೋರಾಟದ ಸ್ಥಳದಲ್ಲಿ ಆಚರಿಸಿಕೊಂಡರು. ಮಂಗಳವಾರ ರಾತ್ರಿ ರೈತರೊಂದಿಗೆ ಹೆದ್ದಾರಿಯಲ್ಲಿ ಮಲಗಿದರು.</p>.<p>ಆದರೆ, ನಮಗೆ ಬೇಕಾದುದು ಬೆಂಬಲವಲ್ಲ; ದರ ಎಂದು ರೈತರು ಮಾರುತ್ತರಿಸಿದರು.</p>.<p>‘ವಿಜಯೇಂದ್ರ ಬೆಂಬಲ ಕೊಡುವುದಕ್ಕಿಂತ, ಬಿಜೆಪಿಯವರ ಕೈಯಲ್ಲಿರುವ ಕಾರ್ಖಾನೆಗಳಲ್ಲಿ ಉತ್ತಮ ದರ ಕೊಡಿಸಿದರೆ ಸಾಕು. ನೀವು ಕಬ್ಬು ತಿಂದು ಜನ್ಮದಿನ ಆಚರಿಸಿಕೊಂಡು ರೈತರನ್ನು ಸಮಾಧಾನ ಮಾಡಬಹುದು. ಆದರೆ, ಮರುಳು ಮಾಡಲು ಆಗುವುದಿಲ್ಲ. ಬೆಂಬಲದ ಬದಲು ನಿಮ್ಮವರಿಂದಲೇ ‘ಬೆಲೆ’ ಕೊಡಿಸಿ’ ಎಂದು ಭಾರತೀಯ ಕೃಷಿಕ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಸವಾಲು ಹಾಕಿದ್ದಾರೆ.</p>.<p><strong>ಅಫಜಲಪುರ: ಗುರುವಾರ ಬಂದ್</strong></p>.<p>ಕಲಬುರಗಿ ಜಿಲ್ಲೆಯಲ್ಲೂ ಕಬ್ಬು ದರ ನಿಗದಿ ಕಗ್ಗಂಟು ಮುಂದುವರಿದಿದೆ. ರೈತರ ಪರವಾಗಿ ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ಹಲವು ಸುತ್ತಿನ ಮಾತುಕತೆ, ಸಭೆಯ ಹೊರತಾಗಿಯೂ ಹಗ್ಗಜಗ್ಗಾಟ ಮುಂದುವರಿದಿದೆ. ‘ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕಡಿಮೆಯಿದ್ದು, ಎಫ್ಆರ್ಪಿ ದರ ನೀಡುವುದಾಗಿ ಕಾರ್ಖಾನೆಗಳು ಹೇಳುತ್ತಿವೆ. ಆದರೆ, ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ₹3,500 ದರಕ್ಕೆ ಬೆಳೆಗಾರರು ಆಗ್ರಹಿಸಿದ್ದಾರೆ. ಏಕರೂಪ ದರ ನಿಗದಿಗೆ ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ( ನ.6) ಅಫಜಲಪುರ ಬಂದ್ಗೆ ಕರೆ ನೀಡಲಾಗಿದೆ.</p>.<p><strong>ದರ ನಿಗದಿಗೆ ತಿಕ್ಕಾಟ</strong></p>.<p>ಬೆಳಗಾವಿ ಮಾತ್ರವಲ್ಲದೆ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಕಾರ್ಖಾನೆಗಳು ಮತ್ತು ಬೆಳೆಗಾರರ ನಡುವೆ ತಿಕ್ಕಾಟ ನಡೆಯುತ್ತಿದೆ.</p>.<p>ಗದಗ ಜಿಲ್ಲೆಯ ಮುಂಡರಗಿಯ ರೈತರು ಸಾವಿರಾರು ಎಕರೆಯಲ್ಲಿ ಕಬ್ಬು ಬೆಳೆದಿದ್ದು, ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಶುಗರ್ಸ್ ಕಾರ್ಖಾನೆಯವರು ಈಗಾಗಲೇ ಕಬ್ಬು ಅರೆಯಲು ಆರಂಭಿಸಿದ್ದಾರೆ. ಆದರೆ, ಕಬ್ಬಿನ ದರ ನಿಗದಿ ಕುರಿತಂತೆ ಸಕ್ಕರೆ ಕಾರ್ಖಾನೆಯವರು ಹಾಗೂ ಕಬ್ಬು ಬೆಳೆಗಾರರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.</p>.<p>ಕೇಂದ್ರ ಸರ್ಕಾರ ಟನ್ ಕಬ್ಬಿಗೆ ₹3,550 ಎಫ್ಆರ್ಪಿ ನಿಗದಿಗೊಳಿಸಿದ್ದು, ಅದೇ ದರದಲ್ಲಿ ಕಬ್ಬು ಖರೀದಿಸಬೇಕು ಎಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಅವರು ಈ ಕುರಿತು ಈಗಾಗಲೇ ರೈತರು ಹಾಗೂ ಸಕ್ಕರೆ ಕಾರ್ಖಾನೆಯವರ ಸಭೆ ನಡೆಸಿದ್ದು, ಎಫ್ಆರ್ಪಿ ದರದಂತೆ ರೈತರ ಕಬ್ಬು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಯವರಿಗೆ ಸೂಚಿಸಿದ್ದಾರೆ. ಪ್ರಸ್ತುತ ಸಕ್ಕರೆ ಕಾರ್ಖಾನೆಯವರು ಟನ್ ಕಬ್ಬಿಗೆ ₹2,630 ನೀಡಿ ಖರೀದಿಸುತ್ತಿದ್ದು, ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹500 ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.</p>.<p><strong>ದಕ್ಷಿಣದಲ್ಲೂ ಅಸಂತೃಪ್ತಿ</strong></p>.<p>ಕಬ್ಬು ಬೆಳೆಯುವ ದಕ್ಷಿಣದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ವ್ಯಾಪ್ತಿಯ ಬೆಳೆಗಾರರಲ್ಲೂ ಅಸಂತೃಪ್ತಿ ಮಡುಗಟ್ಟಿದೆ. ಎಫ್ಆರ್ಪಿ ದರಕ್ಕಾಗಿ ಪ್ರತಿ ವರ್ಷ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಾಗಿದ್ದರೂ, ಅವರ ಬೇಡಿಕೆ ಈಡೇರಿಲ್ಲ.</p>.<p>ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಮೈಷುಗರ್, ಚಾಂಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರು ವಿವಿಧ ಬೇಡಿಕೆ ಈಡೇರಿಕೆಗಾಗಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದನ್ನೂ ಪಾವತಿ ಮಾಡಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಮತ್ತೊಂದು ಕಾರಣ.</p>.<p>‘2022-23ರ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದವರಿಗೆ ರಾಜ್ಯ ಸರ್ಕಾರ ಟನ್ ಕಬ್ಬಿಗೆ ₹150 ಪ್ರೋತ್ಸಾಹ ಧನ ಪಾವತಿಸುವುದಾಗಿ ಘೋಷಿಸಿತ್ತು. ಕೂಡಲೇ ಅದನ್ನು ನೀಡಬೇಕು’ ಎಂದು ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಆಗ್ರಹಿಸಿದ್ದಾರೆ.</p>.<p>‘ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹14 ಸಾವಿರದಿಂದ ₹15 ಸಾವಿರದಷ್ಟು ಆದಾಯ ಪಡೆಯುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರನ್ನು ಶೋಷಿಸುತ್ತಿದ್ದಾರೆ. ಕಬ್ಬು ಪೂರೈಸಿದವರಿಗೆ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ ಒಂದೂವರೆ ತಿಂಗಳಿಗೂ ಹೆಚ್ಚು ಸಮಯವಾದರೂ ಪಾವತಿಸುತ್ತಿಲ್ಲ. ನಿರೀಕ್ಷಿತ ಬೆಲೆ ಸಿಗದೆ ಬೆಳೆಗಾರರು ಕಬ್ಬಿನಿಂದ ವಿಮುಖರಾಗುತ್ತಿದ್ದಾರೆ. ಶೇ 9.5ರಷ್ಟು ಇಳುವರಿಗೆ ಕನಿಷ್ಠ ₹5,500 ಎಫ್ಆರ್ಪಿ ನಿಗದಿ ಪಡಿಸಬೇಕು ಸಂಘ ಒತ್ತಾಯಿಸುತ್ತಿದೆ. ಆದರೆ, ರಾಜಕೀಯ ಪ್ರಭಾವವುಳ್ಳ ಕಾರ್ಖಾನೆ ಮಾಲೀಕರು ದರ ನಿಗದಿ ಮಾಡಲು ಬಿಡುತ್ತಿಲ್ಲ’ ಎಂಬುದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತ್ರಾಜ್ ದೂರು.</p>.<p><strong>ಮಾಹಿತಿ:</strong> ಬಸವರಾಜ ಹವಾಲ್ದಾರ, ಬಸವರಾಜ ಸಂಪಳ್ಳಿ, ಸತೀಶ್ ಎಂ.ಬೆಳ್ಳಕ್ಕಿ, ಸಿದ್ದು ಆರ್.ಜಿ.ಹಳ್ಳಿ, ಗಣಪತಿ ಹೆಗಡೆ, ಬಸೀರ ಅಹ್ಮದ್ ನಗಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>