ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

Last Updated 7 ಆಗಸ್ಟ್ 2022, 23:00 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕುರಿತಂತೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಕರಡು ಅಧಿಸೂಚನೆಕುರಿತಾಗಿ ಇದೀಗ ವ್ಯಾಪಕ ಚರ್ಚೆ ನಡೆದಿದೆ. ಕಳೆದ ನಾಲ್ಕು ದಶಕಗಳಿಂದ ಸಹ್ಯಾದ್ರಿಯ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ, ಒಂದುನಾಗರಿಕ ಸಂಘಟನೆಯಾಗಿ ಹಲವು ಆಯಾಮಗಳಲ್ಲಿ ನಾವು ಪ್ರಯತ್ನಿಸುತ್ತಾ ಬಂದಿದ್ದೇವೆ. ಜನರ ಸಹಭಾಗಿತ್ವದಲ್ಲಿ ನೈಸರ್ಗಿಕಸಂಪನ್ಮೂಲಗಳನ್ನು ರಕ್ಷಿಸಿದ್ದು, ಪರಿಸರ ನಾಶ ಮಾಡುವ ಬೃಹತ್ ಅಪಾಯಕಾರಿ ಯೋಜನೆಗಳು ಪ್ರಸ್ತಾಪವಾದಾಗ ಪ್ರಜಾಸತ್ತಾತ್ಮಕವಾಗಿವಿರೋಧಿಸಿದ್ದು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ತಳಮಟ್ಟದಲ್ಲಿ ರಚನಾತ್ಮಕವಾಗಿ ಕೈಜೋಡಿಸಿದ್ದು, ಪಶ್ಚಿಮ ಘಟ್ಟಕಾರ್ಯಪಡೆಯಂಥ ಸರ್ಕಾರದ್ದೇ ಘಟಕದ ಭಾಗವಾಗಿ ರೂಪಿಸಿದ ಸಂರಕ್ಷಣಾ ಯೋಜನೆಗಳು- ಇವೆಲ್ಲ ನಮ್ಮ ಪ್ರಯತ್ನಗಳಲ್ಲಿ ಸೇರಿವೆ.ನಮ್ಮ ಅನುಭವ ಹಾಗೂ ಹಲವಾರು ಯಶೋಗಾಥೆಗಳ ಆಧಾರದಲ್ಲಿ ಹೇಳಬೇಕೆಂದರೆ, ಪಶ್ಚಿಮಘಟ್ಟದ ಅನನ್ಯತೆ ಹಾಗೂ ಸಂರಕ್ಷಣೆಯಅಗತ್ಯದ ಅರಿವು ಇಲ್ಲಿನ ನಿವಾಸಿಗಳಾದ ರೈತರು, ವನವಾಸಿಗಳು, ಬುಡಕಟ್ಟು ಜನಾಂಗಗಳು, ಕೃಷಿ ಕುಶಲಕರ್ಮಿಗಳು-ಎಲ್ಲರಿಗೂ ಇದೆ.ಕಾಡು-ಗೋಮಾಳ, ನದಿ-ಕೆರೆಗಳನ್ನು ರಕ್ಷಿಕೊಳ್ಳುವುದರಲ್ಲೇ ತಮ್ಮ ಬದುಕಿನ ಸುರಕ್ಷತೆ ಅಡಗಿದೆ ಎಂಬುದನ್ನೂ ಅವರು ಅರಿತಿದ್ದಾರೆ. ಆದರೆ,ಸರ್ಕಾರ ಮಾತ್ರ ಜನಸಾಮಾನ್ಯರ ಈ ಒತ್ತಾಸೆಗೆ ಕಿವಿಗೊಡುತ್ತಿಲ್ಲ. ಏಕೆಂದರೆ, ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ಜನರಮೇಲೆ ಹೇರಿ, ಸೂಕ್ತ ಸಂರಕ್ಷಣಾ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಬಹಳ ದುರ್ದೈವದ ಸಂಗತಿಯಿದು.

ಇದರಿಂದಾಗಿ, ಕಾಡಿನ ಅತಿಕ್ರಮಣ, ಅಕ್ರಮ ಗಣಿಗಾರಿಕೆ, ನದಿಮೂಲಗಳು ಹಾಗೂ ಕೆರೆಗಳ ಮಾಲಿನ್ಯ,ಗೋಮಾಳ ಭೂಮಿ ನಾಶ ಇತ್ಯಾದಿಗಳೆಲ್ಲ ಮತ್ತಷ್ಟು ಹೆಚ್ಚುತ್ತಿವೆ. ಹೀಗಾಗಿ, ನೆರೆ-ಬರ, ಭೂಕುಸಿತ, ವನ್ಯಜೀವಿ-ಮಾನವ ಸಂಘರ್ಷ-ಇವೆಲ್ಲ,ಗಂಭೀರ ಹಂತಕ್ಕೆ ತಲುಪುತ್ತಿದ್ದು, ಜನರು ಕಂಗೆಟ್ಟಿದ್ದಾರೆ. ಭೂಕುಸಿತಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ನನ್ನ ನೇತೃತ್ವದಲ್ಲಿ 2020ರಲ್ಲಿ ರಚಿಸಿದ್ದ ಉನ್ನತ ಮಟ್ಟದ ತಜ್ಞ ಸಮಿತಿಯ ಅಧ್ಯಯನದಲ್ಲಿ ಕಂಡಿದ್ದೇನೆಂದರೆ, ಸೂಕ್ಷ್ಮವೆಂದು ಈಗ ಗುರುತಿಸಿರುವ ಸಹ್ಯಾದ್ರಿಯಹೃದಯಭಾಗಗಳಲ್ಲೇ ಈ ಭೂಕುಸಿತಗಳೆಲ್ಲ ಸಂಭವಿಸುತ್ತಿರುವುದು. ಈಗಲೂ ಇದರ ಸಂರಕ್ಷಣೆಗೆ ಸರ್ಕಾರ ಮುಂದಾಗದಿದ್ದರೆ,ಇನ್ನು ಇದನ್ನು ಮಾಡುವುದು ಯಾವಾಗ?

ಕೋವಿಡ್ ಸಾಂಕ್ರಾಮಿಕದಂಥ ಸಂದರ್ಭದಲ್ಲಿ ತೋರಿದ ತ್ವರಿತ ಸ್ಪಂದನೆಯ ರೀತಿಯಲ್ಲಿ, ಸರ್ಕಾರವು ಈ ಪರಿಸರತುರ್ತುಪರಿಸ್ಥಿಯನ್ನೂ ಆದ್ಯತೆಯಿಂದ ನಿರ್ವಹಿಸಬೇಕಿದೆ. ಸಹ್ಯಾದ್ರಿಯ ಕಾಡು-ಶಿಖರ ಶ್ರೇಣಿಗಳು, ಕಾನು-ಸಮುದಾಯಭೂಮಿ, ನದಿಕಣಿವೆ-ಕೆರೆಗಳು- ಎಲ್ಲವನ್ನೂ ರಕ್ಷಿಸಬೇಕಿದೆ. ಕಾಡಿನ ಅತಿಕ್ರಮಣ ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕಿದೆ. ಆರ್ಥಿಕ ಅಭಿವೃದ್ಧಿ ಸಾಧಿಸಲುಜಲಾನಯನ ಅಭಿವೃದ್ಧಿ ತತ್ವ ಆಧಾರಿತ ಕೃಷಿ-ತೋಟಗಾರಿಕೆ, ಜೇನುಸಾಕಣೆ, ಔಷಧಿ ಮೂಲಿಕಾ ಉದ್ಯಮ, ಇವಕ್ಕೆಲ್ಲ ಆದ್ಯತೆದೊರಕಬೇಕಿದೆ. ಪರಿಸರ ಸುರಕ್ಷತೆ ಹಾಗೂ ಆರ್ಥಿಕ ಅಭಿವೃದ್ಧಿ ಇವೆರಡೂ ಜೊತೆಯಾಗಿ ಸಾಗಲು ಖಂಡಿತಾ ಸಾಧ್ಯವಿದೆ.

ಪಶ್ಚಿಮ ಘಟ್ಟಗಳ ರಕ್ಷಣೆಗೆ ನಿಖರವಾದ ನೀತಿಯಿದ್ದರೆ ಮಾತ್ರ ಇದು ಸಾಧ್ಯವಾದೀತು. ಸೂಕ್ಷ್ಮಪ್ರದೇಶಗಳ ಕುರಿತ ಈ ಕರಡುಆದೇಶವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಸ್ಥಳಿಯ ರೈತರು, ವನವಾಸಿಗಳು, ಬುಡಕಟ್ಟು ಜನಾಂಗ, ಕೃಷಿ ಕುಶಲಕರ್ಮಿಗಳಜೀವನಭಧ್ರತೆಗೆ ತೊಂದರೆ ನೀಡುವ ಯಾವ ಅಂಶವೂ ಅಲ್ಲಿಲ್ಲ. ಚಿಕ್ಕಪುಟ್ಟ ಇತಿಮಿತಿಗಳಿವೆ ಅಂದುಕೊಂಡರೂ, ಅವನ್ನೆಲ್ಲಸಮಾಲೋಚನೆ ಮೂಲಕ ಸೂಕ್ತವಾಗಿ ತಿದ್ದುಪಡಿ ಮಾಡಲು ಸಾಧ್ಯವಿದೆ. ಆದ್ದರಿಂದ, ಗ್ರಾಮಮಟ್ಟದಲ್ಲಿ ಈ ಅಧಿಸೂಚನೆಯ ಕುರಿತುನೈಜ ಜನ-ಸಮಾಲೋಚನೆ ನಡೆಸಲು ರಾಜಕೀಯ ವರ್ಗ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ.ಹಾಗಾದರೆ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ ಮೇಲೆ ಮುಂದಿನ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹೇಗೆಸಾಧಿಸಬಹುದು? ಅದಕ್ಕೆ ಹಲವು ಸಾಧ್ಯತೆಗಳಿವೆ.

ಮೊದಲಿನದು, ಗ್ರಾಮಮಟ್ಟದಲ್ಲಿ ಜನಸಹಭಾಗಿತ್ವ ಸಾಧಿಸುವ ಸಾಂಸ್ಥಿಕ ರಚನೆಗಳನ್ನುಬಲಪಡಿಸುವುದು. ಜೀವವೈವಿಧ್ಯ ಸಂರಕ್ಷಣಾ ಕಾನೂನು (2002)ಅನ್ವಯ ಪಂಚಾಯಿತಿರಾಜ್ ಇಲಾಖೆಯು ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಈಗಾಗಲೇ ‘ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳನ್ನು ಸ್ಥಾಪಿಸಿದೆ. ಈ ಸಮಿತಿಗಳ ಬಲವರ್ಧನೆ ಮಾಡಬೇಕು. ಅದರ ಮಾರ್ಗದರ್ಶನದಲ್ಲಿ ‘ಗ್ರಾಮ ಅರಣ್ಯ ಸಮಿತಿಗಳು’ ಅಲ್ಲಿನ ಕಾಡು-ದೇವರಕಾಡು, ಗೋಮಾಳಗಳನ್ನು ರಕ್ಷಿಸುತ್ತಲೇ,ಸುಸ್ಥಿರವಾಗಿ ಕಾಡಿನ ಉತ್ಪನ್ನಗಳನ್ನು ಬಳಸುವ ವಿಧಾನ ರೂಪಿಸಬಹುದು. ಪವಿತ್ರವನ ಹಾಗೂ ಮೂಲಿಕಾವನಗಳನ್ನು ನಿರ್ಮಿಸಬಹುದು.ಕಾಡಿನ ಅತಿಕ್ರಮಣ ಹಾಗೂ ಬೆಂಕಿಯನ್ನು ಸ್ಥಳೀಯರ ಸಹಕಾರದಿಂದ ನಿಯಂತ್ರಿಸಬಹುದು. ‘ಜಲಾನಯನ ಅಭಿವೃದ್ಧಿ ಸಮಿತಿ’ಗಳುಬಲವರ್ಧನೆಗೊಂಡರೆ, ಹೊಳೆ-ಕೆರೆ, ಜಲಮೂಲಗಳನ್ನು ನಿಯಮಿತವಾಗಿ ಬಳಸುವ ಪರಿಪಾಟ ಜಾರಿಗೆ ತರಬಹುದು. ತಳಮಟ್ಟದಲ್ಲಿ ಈಬಗೆಯ ಸಮುದಾಯ ಸಬಲೀಕರಣಕ್ಕೆ ಸರ್ಕಾರ ಮುಂದಾದರೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯಲ್ಲಿಕ್ರಾಂತಿಯಾಗಲು ಸಾಧ್ಯವಿದೆ.

ಎರಡನೆಯದು, ನೀತಿ ನಿರೂಪಣೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾಲ್ಗೊಳ್ಳುವಿಕೆ ಕುರಿತು. ಕಾಡಿನಉತ್ಪನ್ನಗಳ ಕೊಯಿಲು, ಗುಡ್ಡಗಾಡಿಗೆ ಸೂಕ್ತವಾದ ರಸ್ತೆಗಳು, ಇಲ್ಲಿನ ಪರಿಸರಕ್ಕೆ ಹೊಂದುವ ಕಟ್ಟಡ ವಿಧಾನ ಹಾಗೂ ಕಾಮಗಾರಿಗಳನ್ನುಅಳವಡಿಸಿಕೊಳ್ಳುವುದು, ನೆಲ-ಜಲ ಮಾಲಿನ್ಯ ನಿಯಂತ್ರಣ, ಮರಳಿನಂಥ ಕಟ್ಟಡ ನಿರ್ಮಾಣ ಸಾಮಗ್ರಿ ಬಳಕೆ, ಕಾಡಿನ ಅತಿಕ್ರಮಣ ತಡೆಯುವುದುಇತ್ಯಾದಿಗಳಿಗೆ, ಸ್ಥಳೀಯವಾಗಿ ಸೂಕ್ತವಾದ ನೀತಿಗಳು ಹಾಗೂ ವಿಧಾನಗಳು ಬೇಕಾಗುತ್ತವೆ. ಆದರೆ, ಇನ್ನೂ ವಸಾಹತುಮನಸ್ಥಿತಿಯಲ್ಲಿರುವ ಸರ್ಕಾರಿ ಇಲಾಖೆಗಳು ಎಲ್ಲವನ್ನೂ ತಮ್ಮ ಕೇಂದ್ರೀಕೃತ ನಿರ್ಧಾರಗಳಿಂದಲೇ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದುಉಪಯೋಗವಾಗದು. ಗ್ರಾಮ ಪಂಚಾಯಿತಿ ಹಾಗೂ ತಳಮಟ್ಟದ ಸಮುದಾಯಗಳೊಂದಿಗೆ ಜಂಟಿಯಾಗಿ ಶ್ರಮಿಸಿದರೆ ಮಾತ್ರಪರಿಣಾಮಕಾರಿಯಾದ ನೀತಿ ರೂಪಿಸಿ ಜಾರಿಗೆ ತರಲು ಸಾಧ್ಯ. ಸರ್ಕಾರ ಇದಕ್ಕೆ ತೆರೆದುಕೊಳ್ಳಬೇಕಿದೆ.

ಮೂರನೆಯದು, ಆರ್ಥಿಕ ಅಭಿವೃದ್ಧಿ ಕುರಿತು. ಸಹ್ಯಾದ್ರಿಯ ಸೂಕ್ಷ್ಮ ಪರಿಸರ ಹಾಗೂ ರೈತರು-ವನವಾಸಿಗಳ ವಿಶಿಷ್ಟವಾದಪರಿಸರಸ್ನೇಹಿ ಜೀವನಶೈಲಿ- ಇವೆರಡನ್ನೂ ಆಧರಿಸಿ, ಈ ಪ್ರದೇಶದ ಅರ್ಥಿಕ ಉನ್ನತಿ ಸಾಧ್ಯವೆಂದು ಅಧ್ಯಯನಗಳು ಸಾರುತ್ತಿವೆ. ಕಾಡು-ಕಣಿವೆ, ಜಲಮೂಲಗಳ ಮೂಲಕ್ಕೆ ಧಕ್ಕೆ ಬಾರದಂತೆ ಹಿತಮಿತವಾಗಿ ಬಳಸಿಕೊಂಡು, ಕೃಷಿ-ತೋಟಗಾರಿಕೆ, ಅರಣ್ಯಕೃಷಿ, ಜೇನುಕೃಷಿ,ಹೈನುಗಾರಿಕೆ, ಔಷಧಿಮೂಲಿಕೆ ಕೃಷಿ-ಮೌಲ್ಯವರ್ಧನೆ, ಪ್ರವಾಸೋದ್ಯಮ, ಗೋಬರ್ ಗ್ಯಾಸಿನಂಥ ಬದಲಿ ಇಂಧನ, ಕೃಷಿತ್ಯಾಜ್ಯದಿಂದರಸಗೊಬ್ಬರ, ಸಾಂಬಾರ ಬೆಳೆಗಳ ಮೌಲ್ಯವರ್ಧನೆ, ಜೋನಿಬೆಲ್ಲದಂಥ ಸಾವಯವ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ರಫ್ತು ಇತ್ಯಾದಿಅನೇಕ ಕ್ಷೇತ್ರಗಳಲ್ಲಿ, ಜನರೇ ಸಾಧಿಸಿದ ಅನೇಕ ಸುಸ್ಥಿರ ಅಭಿವೃದ್ಧಿ ಯಶೋಗಾಥೆಗಳಿವೆ. ಇವನ್ನೆಲ್ಲ ಗುರುತಿಸಿ, ಸೂಕ್ತ ನೀತಿಯ ಮೂಲಕಪ್ರೋತ್ಸಾಹಿಸಿ ವ್ಯಾಪಕವಾಗಿ ಜಾರಿಗೆ ತರುವ ಬದ್ಧತೆಯನ್ನು ಸರ್ಕಾರ ತೋರಿದ್ದಾದರೆ, ಮಲೆನಾಡು ಹಾಗೂ ಕರಾವಳಿಯಲ್ಲಿಆರ್ಥಿಕಾಭಿವೃದ್ಧಿ ಹಾಗೂ ಉದ್ಯೋಗ ನಿರ್ಮಾಣದಲ್ಲಿ ದೊಡ್ಡ ಕ್ರಾಂತಿಯಾಗಲು ಸಾಧ್ಯವಿದೆ.

ಅನಂತ ಹೆಗಡೆ ಅಶೀಸರ
ಅನಂತ ಹೆಗಡೆ ಅಶೀಸರ

ಹೀಗಾಗಿ, ಸೂಕ್ಷ್ಮಪ್ರದೇಶಗಳನ್ನು ಗುರುತಿಸಿ ಸಂರಕ್ಷಿಸುವ ಈ ಕಾನೂನು ಪ್ರಕ್ರಿಯೆಯನ್ನು ಇಂದಿನ ಅಗತ್ಯವಾಗಿಯಷ್ಟೇ ಅಲ್ಲ,ಹೊಸ ಅವಕಾಶವಾಗಿಯೂ ನೋಡಬೇಕಾದ ಜರೂರತ್ತಿದೆ. ನಾಡಿನ ಭವಿಷ್ಯಕ್ಕಾಗಿ ನಾವು ನಿರ್ವಹಿಸಬೇಕಾದ ಕನಿಷ್ಠ ಜವಾಬ್ದಾರಿಯಿದು.ನಿಸರ್ಗ ರಕ್ಷಣೆಯ ಮೂಲಕವೇ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸುವ ಈ ನೀತಿಯನ್ನು ಅನುಷ್ಠಾನಗೊಳಿಸಲು, ಜನಪ್ರತಿನಿಧಿಗಳು ಹಾಗೂರಾಜಕೀಯ ಮುಖಂಡರು ಒಪ್ಪಿ ಸಹಕರಿಸಬೇಕೆಂದು ಒತ್ತಾಯಿಸುತ್ತೇನೆ.

ಲೇಖಕ: ಅಧ್ಯಕ್ಷ, ವೃಕ್ಷ ಲಕ್ಷ ಆಂದೋಲನ, ಕರ್ನಾಟಕ

ಜನರ ಪ್ರತಿಕ್ರಿಯೆಗಳು

‘ಪರಿಸರವನ್ನು ಪ‍ರಿಸರದ ಪಾಡಿಗೆ ಬಿಡಿ’

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಪಶ್ಚಿಮ ಘಟ್ಟದ ಜಿಲ್ಲೆಗಳ ಜನಪ್ರತಿನಿಧಿಗಳುಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿ ಒಗ್ಗಟ್ಟಿನ ಮಂತ್ರವನ್ನು ಇವರಿಂದ ಕಲಿಯಬೇಕು ಎನಿಸಿದೆ. ಪರಿಸರ ಸಂರಕ್ಷಣೆಗೆ ಬೇಕಾದ ಅಗತ್ಯ ಕರಡನ್ನು ಜಾರಿಗೆ ತಂದರೆ ಇವರ ಗಂಟೇನು ಮುಳುಗಿ ಹೋಗುತ್ತದೆಯೋ ತಿಳಿಯದು. ಪಶ್ಚಿಮ ಘಟ್ಟಗಳ ಹಳ್ಳಿ ಜನರ ಕಾಳಜಿಯನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವವರ ಬಗ್ಗೆ ಗಮನಹರಿಸದೇ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವುದೇ ಸೂಕ್ತ. ಕೇರಳದ ಮಾದರಿಯಂತೆ ಕರ್ನಾಟಕದಲ್ಲೂ ಆಯಾ ಪ್ರದೇಶದ ಜನರಿಗೆ ಅವರ ಮಾತೃ ಭಾಷೆಯಲ್ಲಿ ಕರಡುವಿನ ಪ್ರತಿ ಸಿಗುವಂತೆ ಮಾಡಿದರೆ ಅವರು ಈ ಕರಡು ಅಧಿಸೂಚನೆಯನ್ನು ಅರ್ಥ ಮಾಡಿಕೊಳ್ಳಬಹುದು. ಪರಿಸರಕ್ಕೆ ಯಾರ ದಯೆ, ದಾಕ್ಷಿಣ್ಯವೂ ಬೇಕಾಗಿಲ್ಲ. ಅದರ ಪಾಡಿಗೆ ಅದನ್ನು ಬಿಟ್ಟರೆ ಅಷ್ಟೇ ಸಾಕು.

ಈರಣ್ಣ ಎನ್ ವಿ,ನಾರಾಯಣಪುರ, ಸಿರಾ

‘ಮನುಷ್ಯನ ಉಳಿವಿನ ಪ್ರಶ್ನೆ’

ಇದು ಪಶ್ಚಿಮ ಘಟ್ಟಗಳ, ಅಲ್ಲಿನ ಕಾಡು, ಪ್ರಾಣಿಪಕ್ಷಿಗಳ ಉಳಿವಿನ ಪ್ರಶ್ನೆಯಲ್ಲ ಬದಲಿಗೆ ಮನುಷ್ಯನ ಉಳಿವಿನ ಪ್ರಶ್ನೆ.ಯಾರದೋ ಬೊಕ್ಕಸ ತುಂಬಲು ನಾವು ಕುಳಿತಿರುವ ರೆಂಬೆಯ ಬುಡವನ್ನೇ ಕತ್ತರಿಸುತ್ತಾ ಅಳಿವಿನಂಚನ್ನು ತಲಪುತ್ತಿದ್ದೇವೆ.ದೂರದಲ್ಲೆಲ್ಲೊ ಕುಳಿತ ಗಣಿ ಉದ್ಯಮಿಗಳು ಮತ್ತು ರಾಜಕಾರಣಿಗಳ ತೀರದ ಹಣದಾಹವನ್ನು ಇಂಗಿಸಲು ಘಟ್ಟದ ಜನ, ಜೀವಿಗಳು ಕುಸಿದ ಗುಡ್ಡಗಳಡಿ ನಲುಗುವುದು ನಿಲ್ಲಲಿ.ಜನರ ಮನಸ್ಸಿನಲ್ಲಿ ಹುಟ್ಟಿಸಿರುವ ಸುಳ್ಳು ಭಯಗಳನ್ನು ಹೋಗಲಾಡಿಸಿ.ಈ ಜೀವರಕ್ಷಕ ಕವಚವನ್ನು ಉಳಿಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ.

ಬಿ. ವಿ.ಶ್ಯಾಮಲ,ಮೈಸೂರು

‘ಮೊದಲು ಅಕೇಶಿಯಾ,ನೀಲಗಿರಿ ನಿಷೇಧ ಮಾಡಿ’

ಈ ಭೂಮಿ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯ ಜೀವಿಗಳಂತೆ ಮಾನವ ಕೂಡ ಒಂದು ಜೀವಿ ಅಷ್ಟೇ. ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ನೇಯ್ದದ್ದಲ್ಲ. ಆತ ಈ ಜಾಲದ ಒಂದು ಎಳೆ ಅಷ್ಟೆ. ಈ ಜಾಲಕ್ಕೆ ಮಾನವ ಏನೇ ವಿಪತ್ತು ತಂದರೂ ಆತ ತನಗೆ ತಾನೇ ವಿಪತ್ತು ತಂದುಕೊಂಡಂತೆ.

ನೈಸರ್ಗಿಕ ಕಾಡು ಕಡಿದು ಸಾಗುವಾನಿ, ಅಕೇಶಿಯ, ನೀಲಗಿರಿ ನೆಡುತೋಪಾಗಿ ಮಾಡಿದ ಪರಿಣಾಮ ಇವತ್ತು ಮಲೆನಾಡಿನ ಉಷ್ಣತೆ ಹೆಚ್ಚಾಗಿದೆ. ನಮ್ಮ ಕಾಲದಲ್ಲೇ ಹೀಗೆ ಆಗಿರುವಾಗ ಭವಿಷ್ಯ ಹೇಗಿರಬಹುದು ಯೋಚಿಸಿ.

ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯರಿಗೆ ಕರಡು ಅಧಿಸೂಚನೆ ಬಗ್ಗೆ ತಿಳಿವಳಿಕೆ ನೀಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಣ್ಣ ಕೃಷಿಕರಿಗೆ, ಸ್ಥಳೀಯರಿಗೆ ತೊಂದರೆ ಆಗುವಂತಹ ವಿಷಯಗಳಿದ್ದರೆ ಅದರ ಚರ್ಚೆ ಆಗಬೇಕಿತ್ತು. ದುರದೃಷ್ಟವೆಂದರೆ ಇದು ಯಾವುದನ್ನೂ ಮಾಡದ ಸರ್ಕಾರ,ಮಾಹಾನಗರಗಳಲ್ಲೇ ಕುಳಿತು ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ವಿಜಯ್ ಆರ್. ಸೋಗೆದ್,ಕೆರೆಹಳ್ಳಿ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT