Factcheck: ಮುಸ್ಲಿಮರ ಓಲೈಕೆಗೆ ಮುಂದಾಯಿತೇ ಮಹಾರಾಷ್ಟ್ರ ಸರ್ಕಾರ?

ಹೂಮಾಲೆಗಳು ಮತ್ತು ಹಸಿರು ಬಣ್ಣದ ಧ್ವಜಗಳಿಂದ ಅಲಂಕೃತಗೊಂಡ ಬಸ್ಸೊಂದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಮಹಾರಾಷ್ಟ್ರದ ಉಸ್ಮಾನಾಬಾದ್ನ ಬಸ್ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಾ ಕುರಿತ ಹಾಡುಗಳನ್ನು ಈ ವೇಳೆ ಹಾಡಲಾಗಿದೆ. ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ವಿಡಿಯೊದಲ್ಲಿ ಕಾಣುತ್ತಾರೆ. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಗಾಡಿ ಸರ್ಕಾರವು ಮುಸ್ಲಿಮರ ಓಲೈಕೆಗೆ ಯಾವ ಹಂತಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ ಆಗಿದೆ ಎಂದು ಈ ವಿಡಿಯೊ ಜೊತೆ ವಿವರಣೆ ನೀಡಲಾಗಿದೆ.
ಈ ವಿಡಿಯೊದ ಜೊತೆ ಇರುವ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್ ಇಂಡಿಯನ್’ ವೇದಿಕೆ ವರದಿ ಮಾಡಿದೆ. ಈ ವಿಡಿಯೋ ಚಿತ್ರೀಕರಣವಾಗಿರುವುದು 2017ರಲ್ಲಿ. ಆಗ ಮಹಾ ವಿಕಾಸ ಅಗಾಡಿ ಸರ್ಕಾರವೇ ಇರಲಿಲ್ಲ. ಬಸ್ ಮೇಲೆ ಕಾಣುವುದು ಪಾಕಿಸ್ತಾನದ ಧ್ವಜವಲ್ಲ ಬದಲಾಗಿ ಇಸ್ಲಾಂ ಧ್ವಜ. ಉರುಸ್ ಸಂದರ್ಭದಲ್ಲಿ ಬಸ್ಗಳನ್ನು ಈ ರೀತಿ ಅಲಂಕರಿಸುವುದು 30 ವರ್ಷಗಳಿಂದ ರೂಢಿಯಲ್ಲಿದೆ.
ಬಸ್ ನಿಲ್ದಾಣದ ಸಿಬ್ಬಂದಿಯ ಸಮಿತಿಯೊಂದು ಇದನ್ನು ಮಾಡುತ್ತದೆ. ಈ ಸಮಿತಿಯಲ್ಲಿ ಎಲ್ಲ ಧರ್ಮದ ಜನರೂ ಇದ್ದಾರೆ. ಈ ಆಚರಣೆ 2019ರ ವರೆಗೂ ಚಾಲ್ತಿಯಲ್ಲಿ ಇತ್ತು. ಬಳಿಕ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಈ ಆಚರಣೆಯನ್ನು ತಡೆಯಲಾಗಿದೆ ಎಂದು ಉಸ್ಮಾನಾಬಾದ್ನ ಎಸ್ಪಿ ತಿಳಿಸಿದ್ದಾರೆ ಎಂದು ಲಾಜಿಕಲ್ ಇಂಡಿಯನ್ನ ವರದಿಯಲ್ಲಿ ವಿವರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.