‘ಪ್ರಧಾನಮಂತ್ರಿ ಕುಸುಮ್ ಯೋಜನೆ ಅಡಿ ರೈತರ ಹೊಲಗಳಲ್ಲಿರುವ ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ ಅಳವಡಿಸಲು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯವು ರೈತರಿಂದ ₹ 5,600 ಶುಲ್ಕ ಸಂಗ್ರಹಿಸಲು ಅನುಮತಿ ನೀಡಿದೆ. ಯೋಜನೆಯ ಫಲಾನುಭವಿಗಳು, ಪಂಪ್ ಅಳವಡಿಕೆಗೂ ಮುನ್ನ ಈ ಮೊತ್ತವನ್ನು ಪಾವತಿ ಮಾಡಬೇಕು. ಪಂಪ್ ಅಳವಡಿಕೆ ನಂತರ ಈ ಮೊತ್ತವನ್ನು ವಾಪಸ್ ಮಾಡಲಾಗುತ್ತದೆ. ಈ ಕೆಳಗೆ ನೀಡಲಾಗಿರುವ ಬ್ಯಾಂಕ್ ಖಾತೆಗೆ ಹಣ ಹಾಕಿ’ ಎಂಬ ವಿವರ ಇರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವಿವರ ಇರುವಆದೇಶ ಪತ್ರವೊಂದರ ಚಿತ್ರ ಸಹ ವೈರಲ್ ಆಗಿವೆ.
ಇದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ಪ್ರಧಾನಮಂತ್ರಿ ಕುಸುಮ್ ಯೋಜನೆ ಅಡಿ ರೈತರು ತಮ್ಮ ಹೊಲಗಳಲ್ಲಿ ಸೌರ ಪಂಪ್ ಅಳವಡಿಸಿಕೊಳ್ಳಲು ಸರ್ಕಾರಕ್ಕೆ ₹5,600 ಶುಲ್ಕ ಪಾವತಿ ಮಾಡಬೇಕಿಲ್ಲ. ಈ ಸಂದೇಶ ಮತ್ತು ಪೋಸ್ಟರ್ಗಳಲ್ಲಿ ಹಂಚಿಕೊಳ್ಳಲಾಗಿರುವ ಆದೇಶ ಪತ್ರವು ನಕಲಿ. ನವೀಕರಿಸಬಹುದಾದ ಇಂಧನ ಸಚಿವಾಲಯವು ಇಂತಹ ಯಾವುದೇ ಆದೇಶ ಪತ್ರವನ್ನು ಹೊರಡಿಸಿಲ್ಲ. ಈ ಆದೇಶ ಪತ್ರದಲ್ಲಿ ಸೂಚಿಸಿರುವಂತೆ ಯಾವುದೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಡಿ. ಇದೊಂದು ಮೋಸದ ಜಾಲ. ಈ ಪತ್ರವನ್ನು ತೋರಿಸಿ ಯಾರಾದರೂ ಹಣ ಕೇಳಿದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡಿ. ಈಗಾಗಲೇ ಹಣ ಪಾವತಿ ಮಾಡಿರುವವರು ಸಹ, ಪತ್ರದಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆದಾರರ ವಿರುದ್ಧ ದೂರು ದಾಖಲಿಸಿ, ಕ್ರಮ ತೆಗೆದುಕೊಳ್ಳಿ’ ಎಂದು ಪಿಐಬಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.