ದೆಹಲಿಯಸಿಂಘುಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಪಾಕಿಸ್ತಾನ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂಬ ವಿಡಿಯೊ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ರೈತರ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರವಾಗಿ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ? ಇವರು ನಿಜವಾಗಿಯೂ ರೈತರೇ?' ಎಂದು ಪ್ರೀತಿ ಗಾಂಧಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಕೆಲವರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರುವ ವಿಡಿಯೊವನ್ನೂ ಅವರು ಟ್ವೀಟ್ನಲ್ಲಿ ಲಗತ್ತಿಸಿದ್ದಾರೆ. ದೆಹಲಿ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪುನೀತ್ ಅಗರ್ವಾಲ್ ಸಹ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಸಹ ಪ್ರತಿಭಟನಾ ನಿರತ ರೈತರನ್ನು 'ಖಲಿಸ್ತಾನಿಗಳು ಮತ್ತು ನಕ್ಸಲರು' ಎಂದು ಕರೆದಿದ್ದಾರೆ. ಈ ವಿಡಿಯೊವನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.