ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರುನಾಡ ಸವಿಯೂಟ’: ರುಚಿಕರ ಆಂಬೊಡೆ - ಮಂಗಳೂರು ಬನ್ಸ್‌

Last Updated 19 ನವೆಂಬರ್ 2020, 15:21 IST
ಅಕ್ಷರ ಗಾತ್ರ
ADVERTISEMENT
""

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌, ಫ್ರೀಡಂ ರಿಫೈನ್ಡ್‌ ಸನ್‌ಫ್ಲವರ್‌ ಆಯಿಲ್‌ ಸಹಯೋಗದೊಂದಿಗೆ ‘ಕರುನಾಡ ಸವಿಯೂಟ’ ವಿಶೇಷ ಅಡುಗೆ ವಿಡಿಯೊ ಸರಣಿ ಕಾರ್ಯಕ್ರಮ ಆಯೋಜಿಸಿದೆ. ಇದರ ಮೊದಲ ವಿಡಿಯೊದಲ್ಲಿ ಸೆಲೆಬ್ರಿಟಿ ಬಾಣಸಿಗ ಸಿಹಿಕಹಿ ಚಂದ್ರು ರುಚಿಕರ ಆಂಬೊಡೆ ಮತ್ತು ಮಂಗಳೂರು ಬನ್ಸ್‌ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ವಿಡಿಯೊಗಾಗಿ ಬಿಟ್ಲಿ ಲಿಂಕ್: bit.ly/PVCuisines ನೋಡಿ.

ಆಂಬೊಡೆ

ಮದುವೆ ಮುಂಜಿ, ಗೃಹಪ್ರವೇಶ, ಹಬ್ಬ ಯಾವುದೇ ಶುಭ ಸಮಾರಂಭವಿರಲಿ ಆಂಬೊಡೆಗೆ ವಿಶೇಷ ಪ್ರಾಧಾನ್ಯತೆ ಇದ್ದೇ ಇರುತ್ತದೆ. ಕಡಲೆಬೇಳೆ, ಹಸಿಮೆಣಸು, ಶುಂಠಿ ಎಲ್ಲವನ್ನೂ ಸೇರಿಸಿ ಎಣ್ಣೆಯಲ್ಲಿ ಕರಿಯುವ ಈ ವಿಶೇಷ ತಿಂಡಿ ಇಷ್ಟವಾಗದವರು ಕಡಿಮೆ. ಗರಿಗರಿಯಾದ ರುಚಿಯಾದ ಪ್ರೊಟೀನ್‌ಯುಕ್ತ ತಿಂಡಿ ಆಬೊಂಡೆ.

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 1ಕಪ್‌ (6ಗಂಟೆಗಳ ಕಾಲ ನೆನೆಸಿದ್ದು), ಅಕ್ಕಿಹಿಟ್ಟು – 2 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು – 1/4ಕಪ್‌, ತೆಂಗಿನತುರಿ – 2 ಚಮಚ, ಹಸಿಮೆಣಸು – 4ರಿಂದ 5, ಶುಂಠಿ – 1ಇಂಚು(ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಕರಿಬೇವು – 4(ಸಣ್ಣದಾಗಿ ಹೆಚ್ಚಿಕೊಂಡಿದ್ದು), ಇಂಗು – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ನಾನ್‌ಸ್ಟಿಕ್‌ ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿಯಾಗಲು ಇಡಿ. ಮಿಕ್ಸರ್‌ಗೆ ನೆನೆದಿರುವ ಬೇಳೆ, ತೆಂಗಿನತುರಿ, ಶುಂಠಿ, ಹಸಿಮೆಣಸು, ಚಿಟಿಕೆ ಇಂಗು, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ನೀರು ಜಾಸ್ತಿ ಸೇರಿಸಬಾರದು. ಪಾತ್ರೆಯೊಂದಕ್ಕೆ ರುಬ್ಬಿದ ಮಿಶ್ರಣ ಹಾಕಿ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಎರಡು ಚಮಚ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಅದನ್ನು ಆಂಬೊಡೆ ಆಕಾರಕ್ಕೆ ಕೈಯಲ್ಲೇ ತಟ್ಟಿ. ಕಾದ ಎಣ್ಣೆಗೆ ಬಿಡಿ. ಬಣ್ಣ ಬದಲಾಗುವವರೆಗೂ ಹುರಿಯಿರಿ. ಈಗ ಆಂಬೊಡೆ ತಿನ್ನಲು ರೆಡಿ. ಇದು ಚಟ್ನಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

**********

ಮಂಗಳೂರು ಬನ್ಸ್‌

ಇದು ಉಡುಪಿ, ಮಂಗಳೂರು ಕರಾವಳಿ ಭಾಗದ ಹೆಸರಾಂತ ತಿಂಡಿ. ಹೋಟೆಲ್‌ಗಳಲ್ಲಿ ಬೆಳಗಿನ ತಿಂಡಿಗೆ ಸಿಗುವ ಇದನ್ನು ಸಂಜೆ ಸ್ನಾಕ್ಸ್ ರೂಪದಲ್ಲಿ ಕೂಡ ತಿನ್ನಬಹುದು. ಸಿಹಿಯಾಗಿ ರುಚಿಯಾಗಿ ಇರುವ ಈ ತಿಂಡಿ ಮಕ್ಕಳಿಗೂ ಇಷ್ಟ. ಅದುವೇ ಮಂಗಳೂರು ಬನ್ಸ್‌.

ಮಂಗಳೂರು ಬನ್ಸ್

ಬೇಕಾಗುವ ಸಾಮಗ್ರಿಗಳು: ಕಳಿತ ಬಾಳೆಹಣ್ಣು – 2, ಮೈದಾಹಿಟ್ಟು – 3 ರಿಂದ 4 ಕಪ್‌, ಮೊಸರು – 1/2 ಕಪ್‌, ಸಕ್ಕರೆ – 2 ಚಮಚ, ಜೀರಿಗೆ – 1 ಟೀ ಚಮಚ, ಅಡುಗೆಸೋಡ – ಚಿಟಿಕೆ, ಉಪ್ಪು – ರುಚಿಗೆ, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಬಾಳೆಹಣ್ಣು ಹಾಕಿ ಚೆನ್ನಾಗಿ ಕಿವುಚಿ. ಅದಕ್ಕೆ ಸಕ್ಕರೆ ಸೇರಿಸಿ ನೀರು ಹಾಕದೇ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು ಸೇರಿಸಿ ಗಂಟಿಲ್ಲದಂತೆ ಕಲೆಸಿ. ಅಡುಗೆಸೋಡ ಹಾಗೂ ಜೀರಿಗೆ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಮೈದಾಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ ಹಿಟ್ಟಿನ ಹದಕ್ಕೆ ತನ್ನಿ. ಅದರ ಮೇಲೆ ಎಣ್ಣೆ ಸವರಿ. 6 ರಿಂದ 8 ಗಂಟೆ ಹಾಗೇ ಇಡಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ. ಅಂಗೈ ಅಗಲಕ್ಕೆ ಲಟ್ಟಿಸಿಕೊಳ್ಳಿ. ಎಣ್ಣೆ ಕಾದ ಮೇಲೆ ಎಣ್ಣೆಯಲ್ಲಿ ಬಣ್ಣ ಬದಲಾಗುವವರೆಗೂ ಕರಿಯಿರಿ. ಇದು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT