ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ತಾಪಮಾನ ಹೆಚ್ಚಳ ಕಂಡಿದೆ. ಫೆಬ್ರುವರಿ ಅಂತ್ಯದವರೆಗೂ ಇದ್ದ ತಂಪು ವಾತಾವರಣ ಕಾಣೆಯಾಗಿ ಪ್ರಖರ ಬಿಸಿಲು ಝಳಪಿಸುತ್ತಿದೆ.
ನಗರದ ಪಾರ್ವತಿ ನಗರ ಮುಖ್ಯ ರಸ್ತೆ, ಏಳು ಮಕ್ಕಳ ತಾಯಿ ದೇವಾಲಯದ ರಸ್ತೆ ಹಾಗೂ ರಾಘವ ಕಲಾಮಂದಿರದ ರಸ್ತೆಯಲ್ಲಿ ಬಿಸಿಲಿನ ನಡುವೆಯೇ ಜನ ಮಣ್ಣಿನ ಮಡಕೆಗಳ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡುಬರುತ್ತಿವೆ.
ಸೇರಿದಂತೆ ಹಲವ ಪ್ರಮುಖ ರಸ್ತೆಗಳ ಬದಿಯಲ್ಲಿ ಎಂದಿನಂತೆ ರಾಜಾಸ್ತಾನದ ವರ್ಣರಂಜಿತ ಕೊಡಗಳ ಖರೀದಿ ಭರಾಟೆಯೂ ಆರಂಭವಾಗಿದೆ. ನೀರಿನ ದಾನಿಗಳು ಅರವಟ್ಟಿಗೆಗಳನ್ನು ಸ್ಥಾಪಿಸಲು ಆರಂಭಿಸಿದ್ದಾರೆ.
ಆಕರ್ಷಕ, ದುಬಾರಿ: ಸುಂದರವಾದ ರಾಜಸ್ಥಾನದ ಬಿಂದಿಗಳಿಗೆ ಜನ ಆಕರ್ಷಿತರಾಗಿದ್ದಾರೆ. ಮಣ್ಣಿನ ಬಣ್ಣದ ಮೇಲೆ ಬಿಳಿಯ ಚಿತ್ತಾರ ಬಿಡಿಸಿದ ಕೊಡಗಳು ಬಿಸಿಲಿನ ಬವಣೆಯನ್ನು ಮರೆಸುವ ರೀತಿಯಲ್ಲಿ ಕಾಣುತ್ತಿವೆ.
ಆಕರ್ಷಕವಾದರೂ ಈ ಕೊಡಗಳು ಬಲು ದುಬಾರಿ. ಇಪ್ಪತ್ತು ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಬಿಂದಿಗೆ ₹ 250. ಹಿಂದಿನ ವರ್ಷ ಇದರ ಬೆಲೆ ₹200 ಇತ್ತು. ಈ ಬಾರಿ ₹50 ಹೆಚ್ಚಾಗಿದೆ. ಇನ್ನೂ ಹೆಚ್ಚು ಗಾತ್ರದ ಕೊಡದ ಬೆಲೆ ₹ 300 ನಿಗದಿಯಾಗಿದೆ.
ಕೊಡವನ್ನು ಇಡಲು ಕಬ್ಬಿಣದ ನಿಲ್ಲುಕಂಬದ ಬೆಲೆ ₹100. ಹೀಗಾಗಿ ಕೊಡ ಖರೀದಿಸಲು ಬಯಸುವವರು ₹400 ವ್ಯಯಿಸಲೇಬೇಕು. ದೊಡ್ಡ ಗಾತ್ರದ ಕೊಡ ಬೇಕೆನ್ನುವವರು ಇನ್ನೂ ಹೆಚ್ಚು ಹಣ ತೆರಬೇಕು.
ಅರವಟ್ಟಿಗೆ: ಮಾರ್ಚ್ ಮೊದಲ ವಾರದಿಂದಲೇ ಅರವಟ್ಟಿಗೆಗಳ ಆರಂಭವಾಗುತ್ತವೆ. ಎಂದಿನಂತೆ, ಎಲ್ಲರಿಗಿಂತ ಮೊದಲು ನಗರದ ಎಸ್ಪಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಯುವಕರ ಬಳಗದ ಸದಸ್ಯರು ಅರವಟ್ಟಿಗೆ ಸ್ಥಾಪಿಸಿದ್ದಾರೆ.
300 ಲೀಟರ್ ಸಂಗ್ರಹ ಸಾಮರ್ಥ್ಯದ ಒಂದು ಡ್ರಂ ಹಾಗೂ ದೊಡ್ಡ ಗಾತ್ರದ ಮಣ್ಣಿನ ಕೊಡಗಳನ್ನು ಇಡಲಾಗಿದೆ. ಶುದ್ಧೀಕರಿಸಿದ
ನೀರನ್ನು ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.
‘ಪ್ರತಿ ದಿನವೂ ಒಂದು ಡ್ರಂ ನೀರನ್ನು ಜನರಿಗೆ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ನೀರು ಪೂರೈಸುತ್ತೇವೆ. ಮೂರು ತಿಂಗಳ ಕಾಲ ಅರವಟ್ಟಿಗೆಯನ್ನು ನಡೆಸುತ್ತೇವೆ’ ಎಂದು ಅರವಟ್ಟಿಗೆಯಲ್ಲಿದ್ದ ವೃದ್ಧರಾದ ಪಂಚಾಕ್ಷರಿ ತಿಳಿಸಿದರು.